ಆ್ಯಪ್ನಗರ

ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆರೋಪ

ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ವಿಕ ಸುದ್ದಿಲೋಕ ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ದುರಸ್ತಿಗೆ ...

Vijaya Karnataka 18 Jul 2019, 5:00 am
ತಾಪಂ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ
Vijaya Karnataka Web srirangapattana taluk panchayath meeting
ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆರೋಪ

ಶ್ರೀರಂಗಪಟ್ಟಣ: ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ದುರಸ್ತಿಗೆ ಮೀಸಲಿಟ್ಟಿದ್ದ ಹಣವನ್ನು ಆಡಳಿತ ಪಕ್ಷ ಸದಸ್ಯರ ಕ್ಷೇತ್ರಗಳಿಗೆ ನೀಡಿದ್ದಾರೆ ಎಂಬ ವಿಷಯ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ

ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್‌ ಅವರನ್ನು ವಿರೋಧ ಪಕ್ಷ ದ ಸದಸ್ಯರಾದ ಅರಕೆರೆಸಂತೋಷ್‌, ಎಸ್‌.ಕಾಳೇಗೌಡ, ದೇವರಾಜು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ನೀವು ಪ್ರಭಾರ ಇಒ ಆಗಿ ಕೆಲಸ ಮಾಡಿದಾಗ ಸದಸ್ಯರ ಮಾತಿಗೆ ಕಿಮ್ಮತ್ತು ನೀಡಿಲ್ಲ. ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಮನವಿ ಮೇರೆಗೆ ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಬಿಇಒ ಕಚೇರಿ ದುರಸ್ತಿಗೆ 4 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ತೀರ್ಮಾನಿಸಲಾಗಿತ್ತು. ಸಭೆ ನಿರ್ಣಯ ಧಿಕ್ಕರಿಸಿ ಆಡಳಿತ ಪಕ್ಷ ದ ಸದಸ್ಯರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ವಿರೋಧ ಪಕ್ಷ ದ ಸದಸ್ಯರ ಮಾತಿಗೆ ಬೆಲೆ, ಇಲ್ಲವೇ? ನಮ್ಮ ಕ್ಷೇತ್ರಗಳಲ್ಲಿ ಸಮಸ್ಯೆ ಇಲ್ಲವೇ? ಅನುದಾನ ಬಿಡುಗಡೆಯಲ್ಲಿ ಪಕ್ಷ ಪಾತ ಮಾಡುವುದು ಸಲ್ಲದು ಎಂದು ಹರಿಹಾಯ್ದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌.ವಾಸು ಈ ವಿಷಯವನ್ನು ನನ್ನ ಗಮನಕ್ಕೂ ತಂದಿಲ್ಲ. ಕೆಲ ಆಡಳಿತಾತ್ಮಕ ವಿಚಾರಗಳಲ್ಲಿ ಜಾತಿವಾರು ವಿಂಗಡಿಸಿ ತಮ್ಮ ಸಮುದಾಯಕ್ಕೆ ಸೇರಿದವರಿಗೆ ಅನುಕೂಲ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಆಡಳಿತ ಸದಸ್ಯ ಉಮೇಶ್‌ ಹಾಗೂ ವಿರೋಧ ಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಆಡಳಿತ ಪಕ್ಷ ದ ಸದಸ್ಯ ದೇವೇಗೌಡ, ಅನುದಾನ ಬಿಡುಗಡೆಗೆ ನಾನೇ ಹೇಳಿದ್ದು ಅಂತ ಹೇಳಿ ಎಂದು ಅಧ್ಯಕ್ಷ ರಿಗೆ ಹೇಳಿದಾಗ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌.ವಾಸು ಕುಳಿತಿಕೊಳ್ರಿ ನೀವೊಬ್ಬರೇ ಇಲ್ಲಿ ಸದಸ್ಯರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಆರ್‌ಎಸ್‌ ಅಣೆಕಟ್ಟೆ ವೀಕ್ಷ ಣೆಗಾಗಿ ಬಂದಿದ್ದ ನಾಲ್ಕು ರಾಜ್ಯಗಳ ಪ್ರಾಧಿಕಾರ ತಂಡದ ಮಾಹಿತಿಯನ್ನು ಮುಂಚಿತವಾಗಿ ನೀವು ನೀಡಲಿಲ್ಲ. ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಸದಸ್ಯರಾದ ಸಂತೋಷ್‌, ಎಸ್‌.ಕಾಳೇಗೌಡ ಎಡಿಎ ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ತಾಪಂ ಇಒ ಹಡಗಲಿಅರುಣ್‌ಕುಮಾರ್‌, ಯಾವುದೇ ಮಾಹಿತಿ ಇದ್ದರೂ ಸರ್ವ ಸದಸ್ಯರ ಗಮನಕ್ಕೆ ಮುಂಚಿತವಾಗಿ ತರಬೇಕು. ಗಲಾಟೆಗೆ ಅವಕಾಶ ನೀಡಬಾರದು ಎಂದು ಸಿಬ್ಬಂದಿಗೆ ತಾಕೀತು ಮಾಡಿದರು.

ಅಧ್ಯಕ್ಷೆ ಮಂಜುಳಾ ಮಾತನಾಡಿ, ನಾನು ನಾಮ್‌ಕೇವಸ್ತೆ ಅಧ್ಯಕ್ಷೆಯಾಗಿದ್ದೆ. ಏಳೂವರೆ ತಿಂಗಳು ಪ್ರಭಾರ ಇಒ ಆಗಿದ್ದ ಸಹಾಯಕ ನಿರ್ದೇಶಕ ಶಿವಕುಮಾರ್‌ ಸಹಿ ಮಾಡಿ ಎಂದು ಹೇಳಿದ ದಾಖಲೆಗಳಿಗೆ ಅಷ್ಟೇ ನಾನು ಸಹಿ ಮಾಡುತ್ತಿದ್ದೆ ಎಂದು ಅಸಾಹಯಕತೆ ವ್ಯಕ್ತಪಡಿಸಿದರು. ಕೇಸ್‌ ವರ್ಕ್‌ ವಿಷಯಕ್ಕೆ 20 ಬಾರಿ ಪೋನ್‌ ಮಾಡಿದ್ದೀರಿ. ಪೋನ್‌ ಕಾಲ್‌ ರೆಕಾರ್ಡ್‌ ಕೂಡ ಇದೆ. ಇದೀಗ ನನಗೇನು ಗೊತ್ತೆ ಇಲ್ಲ ಎಂದು ವಾದಿಸುತ್ತೀರಿ ಇದು ಸರಿಯಲ್ಲ ಎಂದು ಪ್ರಭಾರ ಇಒ ಆಗಿದ್ದ ಸಹಾಯಕ ನಿರ್ದೇಶಕ ಶಿವಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಆರೋಗ್ಯ, ತೋಟಗಾರಿಕೆ, ಕೃಷಿ, ರೇಷ್ಮೆ, ಕುಡಿಯುವ ನೀರು, ಲೋಕೋಪಯೋಗಿ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಉಪಾಧ್ಯಕ್ಷೆ ನಂದಾಮಣಿ, ಸದಸ್ಯರಾದ ರಾಮಕೃಷ್ಣ, ವಿಜಯಲಕ್ಷ್ಮಿ, ಕೋಮಲ, ಸರಸ್ವತಿ, ಭವ್ಯ, ಉಷಾ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ