ಆ್ಯಪ್ನಗರ

ಗಣಿ ಇಲಾಖೆ ಏನು ಮಾಡುತ್ತಿದೆ?: ಗಣಿ ಅಧಿಕಾರಿಗಳಿಗೆ ಬೆವರಿಳಿಸಿದ ಸಂಸದೆ ಸುಮಲತಾ

ನಾಗಮಂಗಲ ತಾಲೂಕಿನ ಒಡೆಯರಪುರ ಸ.ನಂ.11ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ರಾತ್ರಿ ವೇಳೆ ಕಲ್ಲುಗಳನ್ನು ಸಿಡಿಸಲು ಸ್ಫೋಟಕಗಳನ್ನು ಬಳಸುತ್ತಿರುವುದಾಗಿ ಆಧಾರ ಸಮೇತ ನನಗೆ ಮಾಹಿತಿ ಬಂದಿದೆ. ಈ ಬಗ್ಗೆ ಗಣಿ ಇಲಾಖೆ ಏನು ಮಾಡುತ್ತಿದೆ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.

Vijaya Karnataka 29 Jun 2022, 11:21 am
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ವಲಯ/ಕೇಂದ್ರ ಪುರಸ್ಕೃತ ಕಾರ‍್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ(ದಿಶಾ)ಯಲ್ಲಿ ಎಂದಿನಂತೆ ಅಕ್ರಮ ಗಣಿಗಾರಿಕೆ ಸದ್ದು ಪ್ರತಿಧ್ವನಿಸಿತು. ಪ್ರತಿ ಸಭೆಯಲ್ಲೂ ಆರಂಭದ ಎರಡು ತಾಸು ಗಣಿಗಾರಿಕೆ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದು ಮಂಗಳವಾರದ ಸಭೆಯಲ್ಲೂ ಪುನರಾವರ್ತನೆಯಾಯಿತು.
Vijaya Karnataka Web Sumalatha


ನಗರದ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಆರಂಭವಾದ ಸಭೆಯಲ್ಲಿ 4.30ರವರೆಗೂ ಅಕ್ರಮ ಗಣಿಗಾರಿಕೆ, ಕ್ರಷರ್‌ಗಳು, ಅಕ್ರಮ ಮರಳು ಗಣಿಗಾರಿಕೆ ಬಗ್ಗೆಯೇ ಚರ್ಚೆ ನಡೆಯಿತು. ಸಂಸದೆ ಸುಮಲತಾ, ಶಾಸಕ ಸುರೇಶ್‌ಗೌಡ ಅವರಿಬ್ಬರೂ ಗಣಿ ಇಲಾಖೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡು ನೀರು ಕುಡಿಸಿದರು. ನೋಟಿಸ್‌ ನೀಡುವುದು, ಪಿಸಿಆರ್‌ ಪ್ರಕರಣ, ಬ್ಲಾಸ್ಟಿಕ್‌ ಪ್ರಕರಣ ದಾಖಲಾಗಿರುವುದರಿಂದ ಆಗಿರುವ ಪ್ರಯೋಜನವಾದರೂ ಏನು? ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆಯೇ? ಕೇವಲ ವರದಿ ನೀಡುವುದು, ಪ್ರಕರಣ ದಾಖಲಿಸುವುದನ್ನು ಬಿಟ್ಟು ಇನ್ನೇನು ಮಾಡುತ್ತಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು.

ನೀವು ಕೇಳಿದರೆ ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲವೆನ್ನುತ್ತೀರಿ? ಆದರೆ, ಗ್ರಾಮಸ್ಥರು ನಮಗೆ ಫೋಟೋ ಸಹಿತ ದೂರು ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲವೆಂದಾದರೆ ವಾಹನಗಳನ್ನು ಹೇಗೆ ವಶಪಡಿಸಿಕೊಳ್ಳುತ್ತಿದ್ದೀರಿ? ಪಿಸಿಆರ್‌ ಪ್ರಕರಣ ದಾಖಲಿಸುತ್ತಿದ್ದೀರಿ ಎಂದು ಮರು ಪ್ರಶ್ನೆಹಾಕಿದರು. ಸಬ್‌ಮಿಷನ್‌ ಮೂಲಕ ಅಧಿಕಾರಿಗಳು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರಾದರೂ ಸಂಸದೆ, ಶಾಸಕರ ಖಾರವಾದ ನುಡಿಗಳಿಂದ ಮೌನಿಗಳಾದರು.
Illegal Sand Mining: ಹಾಸನದಲ್ಲಿ ಗಣಿಗಾರಿಕೆ ನಡೆಯದಿದ್ದರೂ ಅಕ್ರಮ ಮರಳು ಅವ್ಯಾಹತ..!
ಶಾಸಕ ಸುರೇಶ್‌ಗೌಡ ಆಕ್ರೋಶ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೇವಲ ಹೆಸರಿಗೆ ಮಾತ್ರ ಇದೆ. ಸರಕಾರ ಇದೆಯೋ ಇಲ್ಲವೋ ತಿಳಿಯದಾಗಿದೆ. ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯಲ್ಲಿ ಅನಧಿಕೃತವಾಗಿ ಎಚ್‌ಸಿಕೆ ಕಂಪನಿಯರು ಕಳೆದ 15 ವರ್ಷಗಳಿಂದಲೂ ಗಣಿಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡುವ ಬಗ್ಗೆ ಚರ್ಚೆಸದೇ ಹಿಂದೆ ಹಿರಿಯ ಭೂವಿಜ್ಞಾನಿ ಅನುಮತಿ ನೀಡಿದ್ದಾರೆ. ಇದು 2021ಕ್ಕೆ ಕೊನೆಯಾಗಿದ್ದರೂ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಹೀಗಿದ್ದರೂ ಸೆಸ್ಕ್‌ನಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಶಾಸಕ ಸುರೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಎಚ್‌ಸಿಕೆ ಗಣಿಗಾರಿಕೆಯಿಂದ ಸುಮಾರು 800 ರಿಂದ 900 ಕೋಟಿ ರೂ. ಸರಕಾರಕ್ಕೆ ರಾಜಧನ ನಷ್ಟವಾಗಿದೆ. ಇದನ್ನು ತುಂಬಿಕೊಡುವವರು ಯಾರು ಎಂದು ಪ್ರಶ್ನಿಸಿದರು. ಅನ್ಯಕ್ರಾಂತವಾಗದ ಜಮೀನಿನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಸಾಧ್ಯವೇ? ಗ್ರಾಪಂನಿಂದ ಅನುಮತಿ ಪಡೆದಿಲ್ಲ. ಆದರೂ 15 ವರ್ಷಗಳಿಂದಲೂ ಗಣಿಗಾರಿಕೆ ನಡೆಯುತ್ತಿದ್ದು, ಆ ಭಾಗದ ರಸ್ತೆಗಳೆಲ್ಲಾ ಹಾಳಾಗಿವೆ. ಜನ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಸಂಖ್ಯೆ ಮಂಜೂರುಗೊಳಿಸಲು ಲಂಚ: 7 ಮಂದಿಯ ಬಂಧನ
ನಾಗಮಂಗಲ ತಾಲೂಕಿನ ಒಡೆಯರಪುರ ಸ.ನಂ.11ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ರಾತ್ರಿ ವೇಳೆ ಕಲ್ಲುಗಳನ್ನು ಸಿಡಿಸಲು ಸ್ಫೋಟಕಗಳನ್ನು ಬಳಸುತ್ತಿರುವುದಾಗಿ ಆಧಾರ ಸಮೇತ ನನಗೆ ಮಾಹಿತಿ ಬಂದಿದೆ. ಈ ಬಗ್ಗೆ ಗಣಿ ಇಲಾಖೆ ಏನು ಮಾಡುತ್ತಿದೆ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಈ ಭಾಗದಲ್ಲಿ ಎರಡು ಅನಧಿಕೃತ ಗಣಿಗಾರಿಕೆಗಳಿದ್ದು, ಅವುಗಳನ್ನು ನಿಲ್ಲಿಸಲಾಗಿದೆ. ನಾಗಮಂಗಲ ತಾಲೂಕಿನಲ್ಲಿ 35 ಅಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುರೇಶ್‌ಗೌಡ ಇಂದಿಗೂ ಈ ಗಣಿಗಾರಿಕೆಗಳು ನಡೆಯುತ್ತಿವೆ. ಕೇವಲ ನೀವು ನಿಷೇಧಾಜ್ಞೆ ವಿಧಿಸಿದ್ದೇವೆ, ಪೊಲೀಸರನ್ನು ನಿಯೋಜಿಸಿದ್ದೇವೆ ಎಂದು ಹೇಳುತ್ತೀರಿ, ಅದನ್ನು ಮುರಿಯಲು ಆಗುವುದಿಲ್ಲವೇ? ಗಣಿಗಾರಿಕೆಯನ್ನು ಸೀಲ್‌ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ನಿರುತ್ತರಾದರು. ಮುಂದುವರಿಸಿದ ಅವರು, ನಾಳೆಯೇ ನಿಲ್ಲಿಸಬೇಕು. ಈ ಬಗ್ಗೆ ಜೂ.29ರಂದು ನಡೆಯುವ ಕೆಡಿಪಿ ಸಭೆಯಲ್ಲಿ ವರದಿ ನೀಡಬೇಕು. ಇಲ್ಲದಿದ್ದರೆ ಸಭೆ ನಡೆಯಲು ಬಿಡೋದಿಲ್ಲ. ಜತೆಗೆ, ಸದನದಲ್ಲೂ ಈ ಬಗ್ಗೆ ಪ್ರಶ್ನಿಸುತ್ತೇನೆಂದು ಸುರೇಶ್‌ಗೌಡ ಎಚ್ಚರಿಸಿದರು.

ಸಭೆಯಲ್ಲಿ ಶಾಸಕ ಎಂ.ಶ್ರೀನಿವಾಸ್‌, ಜಿ.ಪಂ. ಸಿಇಒ ದಿವ್ಯಾಪ್ರಭು, ಐಆರ್‌ಎಸ್‌ ಅಧಿಕಾರಿ ರುದ್ರನ್‌ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ