ಆ್ಯಪ್ನಗರ

ಸಾರಿಗೆ ಸಂಸ್ಥೆ ನೌಕರರಿಗೆ ನಿವೇಶನ ಕಲ್ಪಿಸಲು ಯೋಜನೆ

ಸಾರಿಗೆ ಸಂಸ್ಥೆ ನೌಕರರಿಗೆ ನಿವೇಶನ ಕಲ್ಪಿಸಲು ಯೋಜನೆ ಅಭಿನಂದನಾ ಸಮಾರಂಭದಲ್ಲಿ ಸಚಿವ ಡಿಸಿ...

Vijaya Karnataka 16 Jun 2018, 5:00 am
ಸಾರಿಗೆ ಸಂಸ್ಥೆ ನೌಕರರಿಗೆ ನಿವೇಶನ ಕಲ್ಪಿಸಲು ಯೋಜನೆ
Vijaya Karnataka Web the plans to provide a karnataka transportation employees says minister dc tammanna
ಸಾರಿಗೆ ಸಂಸ್ಥೆ ನೌಕರರಿಗೆ ನಿವೇಶನ ಕಲ್ಪಿಸಲು ಯೋಜನೆ


ಅಭಿನಂದನಾ ಸಮಾರಂಭದಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಮಾಹಿತಿ

ವಿಕ ಸುದ್ದಿಲೋಕ ಮದ್ದೂರು

ರಾಜ್ಯದ ಸಾರಿಗೆ ಸಂಸ್ಥೆಯ ಒಂದು ಲಕ್ಷ ನೌಕರರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಮನೆ ನಿರ್ಮಾಣ ಯೋಜನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿರುವುದಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮದ್ದೂರಿಗೆ ಆಗಮಿಸಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿಯೇ ರಾಜ್ಯ ಸಾರಿಗೆ ಸಂಸ್ಥೆ ಪ್ರಥಮ ಸ್ಥಾನದಲ್ಲಿದೆ. ಇದನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವ ಯೋಜನೆಗಳನ್ನು ರೂಪಿಸುವುದಾಗಿ ಹೇಳಿದರು.

ಈ ಬಾರಿಯ ಚುನಾವಣೆ ವೇಳೆ ಜಿಲ್ಲೆಯ 7 ಸ್ಥಾನಗಳು ಜೆಡಿಎಸ್‌ ಪಾಲಾಗಿದ್ದು, ಜನರ ನಿರೀಕ್ಷೆ ಬಹಳಷ್ಟಿರುವ ಕಾರಣ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಇಬ್ಬರು ಸಚಿವರೂ ಸೇರಿದಂತೆ 7 ಶಾಸಕರಿಗೂ ಜಿಲ್ಲೆಯ ಅಭಿವೃದ್ಧಿ ಕುರಿತು ಸೂಕ್ತ ಕ್ರಮ, ಯೋಜನೆ ರೂಪಿಸುವಂತೆ ತಾಕೀತು ಮಾಡಿದ್ದಾರೆಂದು ತಿಳಿಸಿದರು.

ಸರಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಂಬಂಧ ಈಗಾಗಲೇ ಮೇಲ್ಮಟ್ಟದ ಅಧಿಕಾರಿಗಳೊಡನೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ನಾಲ್ಕು ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ‌ದ ನೂತನ ಮಿಲ್‌ ಅಳವಡಿಕೆ ಸೇರಿದಂತೆ ಸುಸಜ್ಜಿತ ಕಬ್ಬಿನ ಅಂಗಳ ನಿರ್ಮಾಣಕ್ಕೆ ಸೂಚಿಸಿದ್ದಾರೆ. ಒಂದೇ ಕಂತಿನಲ್ಲಿ 150 ಕೋಟಿ ರೂ. ಹಣ ಬಿಡುಗಡೆಗೊಳಿಸುವ ಜತೆಗೆ ಜಿಲ್ಲೆಯ ಜೀವನಾಡಿ ಮೈಷುಗರ್‌ ಅಭ್ಯುದಯಕ್ಕೆ ಸರಕಾರ ಒತ್ತು ನೀಡುವಂತೆ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಮದ್ದೂರು ತಾಲೂಕಿನ ಚಾಂಷುಗರ್‌ ಮತ್ತು ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಗಳು ಕಳೆದ ಹಂಗಾಮಿನ ಕಬ್ಬು ಸರಬರಾಜು ಮಾಡಿದ ಬಾಬ್ತು 25 ಕೋಟಿ.ರೂ.ಗೂ ಅಧಿಕ ಹಣವನ್ನು ರೈತರಿಗೆ ವಿತರಿಸದೆ ಬಾಕಿ ಉಳಿಸಿಕೊಂಡಿವೆ. ಈ ಸಂಬಂಧ ಈಗಾಗಲೇ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದು. ಈ ತಿಂಗಳ ಅಂತ್ಯಕ್ಕೆ ಬಾಕಿ ಹಣ ಪಾವತಿಯಾಗುವ ವಿಶ್ವಾಸ ಇದೆ. ರಾಜ್ಯದ 170 ವಸತಿ ಶಾಲೆಗಳ ಪೈಕಿ 165ರಲ್ಲಿ 6 ರಿಂದ 10ನೇ ತರಗತಿ ವರೆಗಿನ ವ್ಯಾಸಂಗವನ್ನು ದ್ವಿತೀಯ ಪಿಯುಸಿವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ. ದಾಖಲಾತಿ ಸಂಖ್ಯೆಯನ್ನು ಪ್ರತಿ ಶಾಲೆಯಲ್ಲಿ 50 ರಿಂದ 100ಕ್ಕೇರಿಸುವ ಯೋಜನೆಯಿದ್ದು ಇದರಿಂದ 250 ಕೋಟಿ. ರೂ.ಗಳ ಹೆಚ್ಚುವರಿ ಹೊರೆ ಸರಕಾರದ ಮೇಲೆ ಬೀಳಲಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆ ಸೇರಿದಂತೆ ಮದ್ದೂರು ತಾಲೂಕಿನ ನಾನಾ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ 3,440 ಕೋಟಿ.ರೂ. ಅವಶ್ಯಕತೆಯಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದು. ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವಿಕೆ ಕಣ್ವ, ಮಂಗಳ ಜಲಾಶಯಗಳಿಗೆ ಮಳೆಗಾಲದ ಹೆಚ್ಚುವರಿ ನೀರನ್ನು ಕೆಆರ್‌ಎಸ್‌ ಅಣೆಕಟ್ಟೆಯಿಂದ ತುಂಬಿಸಲು ಇದು ಸಹಕಾರಿಯಾಗಲಿದೆ. ಸಣ್ಣ ನೀರಾವರಿ, ಪ್ರವಾಸೋದ್ಯಮ ಅಭಿವೃದ್ಧಿ, ಮಂಡ್ಯ ಜಿಲ್ಲಾಸ್ಪತ್ರೆ ಆಧುನೀಕರಣಕ್ಕೆ 10 ಕೋಟಿ., ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳ ಆಧುನೀಕರಣಕ್ಕೆ 50 ಕೋಟಿ ರೂ. ಮಂಜೂರು ಮಾಡಿರುವುದಾಗಿ ತಿಳಿಸಿದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು, ಡಾ. ಮಹೇಶ್‌ಚಂದ್‌ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ನಾಗರತ್ನಸ್ವಾಮಿ, ಸದಸ್ಯರಾದ ಮರಿಹೆಗಡೆ,ಬೋರಯ್ಯ ಐಆರ್‌ಎಸ್‌ ಅಧಿಕಾರಿ ಅಶ್ವಿನಿಗೌಡ, ತಾ.ಪಂ. ಅಧ್ಯಕ್ಷೆ ಜಯಲಕ್ಷ ್ಮಮ್ಮ, ಪುರಸಭೆ ಪ್ರಭಾರ ಅಧ್ಯಕ್ಷೆ ಪಾರ್ವತಮ್ಮಶಂಕರ್‌, ಮುಖಂಡರಾದ ಕೆ.ದಾಸೇಗೌಡ, ಶಂಕರ್‌, ಚಿಕ್ಕತಿಮ್ಮೇಗೌಡ, ಕಾರ್ತಿಕ್‌ಸಿದ್ದರಾಜು ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ