ಆ್ಯಪ್ನಗರ

ವಿಸಿ ನಾಲೆ ಕೊನೆ ಭಾಗಕ್ಕೆ ನೀರು ಹರಿಸಿ

ವಿಸಿ ನಾಲೆಯ ಕೊನೆ ಭಾಗಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 26 Jan 2019, 5:00 am
ಮದ್ದೂರು: ವಿಸಿ ನಾಲೆಯ ಕೊನೆ ಭಾಗಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web water to the end of the vc channel
ವಿಸಿ ನಾಲೆ ಕೊನೆ ಭಾಗಕ್ಕೆ ನೀರು ಹರಿಸಿ


ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಸರಕಾರ, ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ತಾಲೂಕಿನ ಉಪ್ಪಿನಕೆರೆ, ಚನ್ನಸಂದ್ರ, ಸಾದೊಳಲು, ನಗರಕೆರೆ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಬೆಳೆಗಳು ಒಣಗಿ ನಿಂತಿದ್ದು, ಈಗಾಗಲೇ ಲಕ್ಷಾಂತರ ರೂ. ಮೌಲ್ಯದ ಬೆಳೆಗಳಿಗೆ ನಷ್ಟ ಉಂಟಾಗಿದ್ದು, ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕೆಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ಹಾಗೂ ಸ್ಥಳೀಯ ಶಾಸಕರು ರೈತರ ಹಿತ ಕಾಯದೆ ನಿರ್ಲಕ್ಷ ್ಯ ವಹಿಸಿದ್ದು, ರೈತ ಪರ ಸರಕಾರವೆಂದು ಹೆಸರೇಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಆರು ತಿಂಗಳಿಂದಲೂ ರೈತರಿಗೆ ದ್ರೋಹವೆಸಗುತ್ತಿದ್ದಾರೆಂದು ದೂರಿದರು.

ರೇಷ್ಮೆ, ರಾಗಿ, ತೆಂಗು, ಬಾಳೆ ಹಾಗೂ ತರಕಾರಿ ಬೆಳೆಗಳಿಗೆ ನೀರಿನ ಅವಶ್ಯಕತೆಯಿದ್ದು, ನೀರು ಹರಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಏಕಾಏಕಿ ಕೆಆರ್‌ಎಸ್‌ ಅಣೆಕಟ್ಟೆಯಿಂದ ನೀರನ್ನು ಸ್ಥಗಿತಗೊಳಿಸಿ ಮದ್ದೂರು ತಾಲೂಕಿನ ರೈತರನ್ನು ನಿರ್ಲಕ್ಷಿಸಿದ್ದಾರೆಂದು ದೂರಿದರು.

ತಾಲೂಕಿನಲ್ಲೇ ಅತಿ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿದ್ದು, ಜಮೀನಿನಲ್ಲಿರುವ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳಿಗೆ ಸರಕಾರ ಗಾಯದ ಮೇಲೆ ಬರೆ ಎಳೆಯಲು ಮುಂದಾಗುತ್ತಿದ್ದು, ಕೂಡಲೇ ಇಲಾಖೆ ಅಧಿಕಾರಿಗಳು ಸಚಿವರೊಂದಿಗೆ ಚರ್ಚಿಸಿ ಕೊನೆಯ ಭಾಗಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.

ಮುಂದಿನ ಎರಡು ದಿನದೊಳಗಾಗಿ ವಿಸಿ ನಾಲೆ ಕೊನೆ ಭಾಗಗಳಿಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಮುಂದಾಗದಿದ್ದಲ್ಲಿ ವಿವಿಧ ಸಂಘಟನೆಗಳ ಜತೆಗೂಡಿ ಜನ ಜಾನುವಾರುಗಳೊಡನೆ ಮೈಸೂರು, ಬೆಂಗಳೂರು ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ವೇಳೆ ರವೀಂದ್ರ, ನಾಗೇಶ್‌, ಸಾವಿತ್ರಮ್ಮ, ಉಮೇಶ್‌, ಸ್ವಾಮಿ, ಶಿವಲಿಂಗಯ್ಯ, ಕುಮಾರ, ಸಿದ್ದೇಗೌಡ, ರವಿ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ