ಆ್ಯಪ್ನಗರ

ಮೇಲುಕೋಟೆಯಲ್ಲಿ ಇಂದು ರಾತ್ರಿ ವೈರಮುಡಿ ಉತ್ಸವ

ಐತಿಹಾಸಿಕ ಹಿನ್ನಲೆಯುಳ್ಳ ಧಾರ್ಮಿಕ ಕೇಂದ್ರವಾದ ಮೇಲುಕೋಟೆಯಲ್ಲಿ ಮಾ.26 ರಂದು ರಾತ್ರಿ ನಡೆಯಲಿರುವ ವಿಶ್ವವಿಖ್ಯಾತ ಶ್ರೀಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಜಿಲ್ಲಾಡಳಿತವು ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಅಂತಿಮ ಹಂತದ ತಯಾರಿ ಯಲ್ಲಿ ತೊಡಗಿದೆ.

Vijaya Karnataka 26 Mar 2018, 5:14 am
ಮಂಡ್ಯ: ಐತಿಹಾಸಿಕ ಹಿನ್ನಲೆಯುಳ್ಳ ಧಾರ್ಮಿಕ ಕೇಂದ್ರವಾದ ಮೇಲುಕೋಟೆಯಲ್ಲಿ ಮಾ.26 ರಂದು ರಾತ್ರಿ ನಡೆಯಲಿರುವ ವಿಶ್ವವಿಖ್ಯಾತ ಶ್ರೀಚಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಜಿಲ್ಲಾಡಳಿತವು ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಅಂತಿಮ ಹಂತದ ತಯಾರಿ ಯಲ್ಲಿ ತೊಡಗಿದೆ.
Vijaya Karnataka Web weiramudi festival today at melukottai
ಮೇಲುಕೋಟೆಯಲ್ಲಿ ಇಂದು ರಾತ್ರಿ ವೈರಮುಡಿ ಉತ್ಸವ


ಬ್ರಹ್ಮೋತ್ಸವಕ್ಕಾಗಿ ದೇವಾಲಯದ ಬಜೆಟ್‌ನಲ್ಲಿ 16 ಲಕ್ಷ ರೂ.ಗಳನ್ನು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯೂ 15.50 ಲಕ್ಷ ರೂ. ಖರ್ಚಾಗಿತ್ತು. ಉತ್ಸವಕ್ಕೆ ಬರುವ ಭಕ್ತರ ಹಿತದೃಷ್ಟಿಯಿಂದ ಸ್ವಚ್ಛತೆ, ನೈರ್ಮಲ್ಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಪುರುಷ-ಮಹಿಳೆಯರಿಗೆ ಗ್ರಾ.ಪಂ.ನಿಂದ ಪ್ರತ್ಯೇಕ ವಾಗಿ 4 ಸ್ಥಳಗಳಲ್ಲಿ 18-20 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಪಂಚಕಲ್ಯಾಣಿ ಬಳಿ ಮಹಿಳೆಯರು ಬಟ್ಟೆ ಬದಲಿಸಲು ಅನುಕೂಲವಾಗುವಂತೆ ತಾತ್ಕಾಲಿಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ನೂಕುನುಗ್ಗಲು ತಡೆಯಲು ದೇವಾಲಯದ ಸುತ್ತ ಹಾಗೂ ಪ್ರಾಂಗಣದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. 5 ಪ್ರತ್ಯೇಕ ಸ್ಥಳಗಳನ್ನು ಪಾರ್ಕಿಂಗ್‌ಗಾಗಿ ನಿಗದಿಪಡಿಸಲಾಗಿದೆ.

ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಬೆಟ್ಟಕ್ಕೆ ಹೋಗುವ ಮಾರ್ಗ, ಧನುಷ್ಕೋಟಿ, ಅಕ್ಕತಂಗಿಯರ ಕೊಳ, ರಾಯಗೋಪುರ, ಪಂಚಕಲ್ಯಾಣಿ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ. ಸೋಮವಾರ ಸಂಜೆ ಯಿಂದ ಮಂಗಳವಾರ ಬೆಳಗ್ಗೆವರೆಗೆ ಮಂಡ್ಯ ದಿಂದ ಮೇಲುಕೋಟೆವರೆಗೆ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲಾಗಿದೆ.

ಮಾ.26ರಂದು ರಾತ್ರಿ 8ರಿಂದ ಮಾರನೆಯ ದಿನ ಮುಂಜಾನೆ 3ರವರೆಗೆ ನಡೆಯಲಿರುವ ವೈರಮುಡಿ ಉತ್ಸವ ನಡೆಯಲಿದ್ದು, ವೈರಮುಡಿ ಉತ್ಸವ ಮುಗಿದೊಡನೆ ಸ್ವಾಮಿಗೆ ಮೈಸೂರು ಮಹಾರಾಜರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟ ತೊಡಿಸಿ ಉತ್ಸವ ಮಾಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಳು, ಕೇರಳ ಸೇರಿದಂತೆ ದಕ್ಷಿಣ ಭಾರತ ನಾನಾ ಭಾಗಗಳಿಂದ ಒಂದೂವರೆಯಿಂದ 2 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ:ಮಂಡ್ಯದಲ್ಲಿನ ಜಿಲ್ಲಾ ಖಜಾನೆಯಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ವೈರಮುಡಿ ಕಿರೀಟ ಹಾಗೂ ಇತರ ಆಭರಣಗಳಿರುವ ಗಂಟುಗಳನ್ನು ಮೇಲುಕೋಟೆಗೆ ಮಾ.26ರಂದು ಬೆಳಗ್ಗೆ ಕೊಂಡೊಯ್ಯಲಾಗುತ್ತದೆ. ಮುಂಜಾನೆ 6ಕ್ಕೆ ಜಿಲ್ಲಾ ಖಜಾನೆಯಲ್ಲಿ ಆಭರಣಗಳಿಗೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯಕ್ಕೆ ಕೊಂಡೊಯ್ದು ಪೂಜೆ ನೆರವೇರಿಸಲಾಗುತ್ತಿದೆ. ಬಳಿಕ ವಾಹನದ ಮೂಲಕ ಇಂಡುವಾಳು, ತೂಬಿನಕೆರೆ, ಶ್ರೀರಂಗಪಟ್ಟಣ, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತೆರಲಿದೆ.

ಮಾ.29ರಂದು ನಡೆಯುವ ಮಹಾರಥೋತ್ಸವವು ಜಾತ್ರಾ ಮಹೋತ್ಸವದ ಮತ್ತೊಂದು ಪ್ರಮುಖ ವಿಶೇಷ. ಅಂದು ಬೆಳಗ್ಗೆ 10ಕ್ಕೆ ಅಮ್ಮನವರ ಸನ್ನಿಧಿ ಬಳಿ ಯಾತ್ರಾದಾನದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಅದೇ ದಿನ ರಾತ್ರಿ ಹರಿಜನರ ಸೇವೆಯಾದ ಬಂಗಾರದ ಪಲ್ಲಕ್ಕಿ ಉತ್ಸವವೂ ವೈಭವಯುತವಾಗಿ ನಡೆಯಲಿದೆ.

ಪೊಲೀಸ್ ನಿಯೋಜನೆ: ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಹಾಕಲಾಗಿದೆ. 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ