ಆ್ಯಪ್ನಗರ

ಗ್ರಾಮಸಡಕ್‌ ಯೋಜನೆಯಡಿ ದ.ಕನ್ನಡಕ್ಕೆ ₹172 ಕೋಟಿ ಅನುದಾನ: ನಳಿನ್‌ ಕುಮಾರ್‌ ಕಟೀಲ್‌

ಗ್ರಾಮಸಡಕ್‌ ಯೋಜನೆಯಡಿ ದ.ಕ. ಜಿಲ್ಲೆಗೆ 172 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ನಾನಾ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು

Vijaya Karnataka Web 23 Nov 2020, 9:22 pm
ಕುಂಬ್ರ: ದೇಶದ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂಬುದು ಮಾಜಿ ಪ್ರಧಾನಿ ದಿ. ವಾಜಪೇಯಿಯವರ ಕನಸಾಗಿತ್ತು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಗ್ರಾಮೀಣ ಸಡಕ್‌ ಯೋಜನೆ ಜಾರಿಗೆ ತಂದಿದ್ದರು. ಆದರೆ ಆ ಬಳಿಕ ಕೇಂದ್ರದಲ್ಲಿ ಸರಕಾರ ಬದಲಾಯಿತು. ಸುಮಾರು ವರ್ಷಗಳ ವರೆಗೆ ಗ್ರಾಮಸಡಕ್‌ ಯೋಜನೆಗೆ ಅನುದಾನವನ್ನೇ ನೀಡಿರಲಿಲ್ಲ, ಆದರೆ ಪ್ರಧಾನಿ ಮೋದಿಯವರು ವಾಜಪೇಯಿ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.
Vijaya Karnataka Web nalin kumar kateel


ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 1.50 ಕೋಟಿ ಅನುದಾನದಲ್ಲಿ ಪರ್ಪುಂಜ- ಪಂಜಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಸಡಕ್‌ ಯೋಜನೆಯಡಿ ದ.ಕ. ಜಿಲ್ಲೆಗೆ 172 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ನಾನಾ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯಲಿದೆ. ಮುಂದಿನ ದಿನಗಳಲ್ಲಿ 15ನೇ ಹಣಕಾಸು ಯೋಜನೆಯಡಿ ದೇಶದ ಪ್ರತಿ ಗ್ರಾಪಂಗಳಿಗೆ ತಲಾ ಒಂದು ಕೋಟಿ ಅನುದಾನ ನೀಡುವ ಮೂಲಕ ಗ್ರಾಮಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕೇಂದ್ರ ಸರಕಾರ ಮಾಡಲಿದೆ ಎಂದು ಹೇಳಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರದ ಪ್ರತಿಯೊಂದು ಯೋಜನೆಯೂ ದೇಶದ ಕಟ್ಟಕಡೆಯ ಜನ ಸಾಮಾನ್ಯನಿಗೂ ತಲುಪುವ ಕೆಲಸ ನಡೆಯಬೇಕು. ಫಸಲ್‌ ಭೀಮಾ ಯೋಜನೆಯಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ರೈತರ ಖಾತೆಗೆ 19 ಲಕ್ಷ, ಪ್ರಧಾನಿಗಳ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ 8 ಕೋಟಿ ರೂ. ರೈತರ ಖಾತೆಗೆ ನೇರಜಮೆಯಾಗಿದೆ. ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ 37 ಕಾಲು ಸಂಕ ನಿರ್ಮಾಣವಾಗಲಿದ್ದು, 37 ಕಿ.ಮೀ. ರಸ್ತೆಗೆ 32.50 ಕೋಟಿ ಅನುದಾನ ನೀಡುವ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಪಣತೊಟ್ಟಿದ್ದೇವೆ ಎಂದರು.

ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಸದಸ್ಯರಾದ ಮೀನಾಕ್ಷಿ ಮಂಜುನಾಥ್‌, ಹರೀಶ್‌ ಬಿಜತ್ರೆ, ಶಿವರಂಜನ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ಎಂಜಿನಿಯರ್‌ ಶ್ರೀನಿವಾಸ್‌ ಮೂರ್ತಿ, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್‌.ಸಿ. ನಾರಾಯಣ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಬಿಜೆಪಿ ಮಂಡಲ ಕಾರ್ಯದರ್ಶಿ ನಿತೀಶ್‌ ಕುಮಾರ್‌ ಶಾಂತಿವನ ವಂದಿಸಿದರು. ಒಳಮೊಗ್ರು ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್‌ ರೈ ಪರ್ಪುಂಜ ಮತ್ತು ಸಂತೋಷ್‌ ಕುಮಾರ್‌ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ