ಆ್ಯಪ್ನಗರ

ಕೃಷ್ಣಮೃಗ ಚರ್ಮ ಮಾರಾಟ ಜಾಲ ಪತ್ತೆ: 6 ಮಂದಿ ಆರೋಪಿಗಳ ಬಂಧನ!

ಮಂಗಳೂರು ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ, ಕೃಷ್ಣಮೃಗ ಚರ್ಮ ಮಾರಾಟ ಜಾಲವನ್ನು ಪತ್ತೆ ಹಚ್ಚಿ, 6 ಆರೋಪಿಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 8 Sep 2020, 1:07 pm
ಮಂಗಳೂರು: ಕೃಷ್ಣ ಮೃಗ ಚರ್ಮದ ಬೃಹತ್‌ ಮಾರಾಟ ಜಾಲವನ್ನು ಮಂಗಳೂರಿನ ಅರಣ್ಯ ಸಂಚಾರಿ ದಳ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಪತ್ತೆಹಚ್ಚಿದ್ದು, ಈ ಪ್ರಕರಣದಲ್ಲಿ 6 ಆರೋಪಿಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Vijaya Karnataka Web ಅರೆಸ್ಟ್
ಸಾಂದರ್ಭಿಕ ಚಿತ್ರ


ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮ ನಿವಾಸಿ ತುಗ್ಗೇಪ(37), ಶರಣಪ್ಪ ಅಮರಪ್ಪ(30), ಮಲ್ಲಯ್ಯ ಹಿರೇಮಠ(30), ಶಿವಯ್ಯ ಹಿರೇಮಠ(34), ಸಂಗಪ್ಪ ಕಟ್ಟೀಮನಿ(34), ಹನುಮಂತ ಕಟ್ಟೀಮನಿ(35) ಬಂಧಿತ ಆರೋಪಿಗಳು. ಬಂಧಿತರಿಂದ 20 ಕೃಷ್ಣ ಮೃಗ ಚರ್ಮ, 2 ಕೃಷ್ಣ ಮೃಗದ ತಲೆ, ಒಂದು ಜೀವಂತ ಹೆಣ್ಣು ಮರಿ ಹಾಗೂ ದಂಧೆಗೆ ಬಳಸಿದ ಮೂರು ಬೈಕ್‌ ವಶಪಡಿಸಿಕೊಳ್ಳಲಾಗಿದೆ.

ಯಲಬುರ್ಗಾದಲ್ಲಿ ಕೃಷ್ಣ ಮೃಗ ಚರ್ಮ ಮಾರಾಟ ಜಾಲದಲ್ಲಿ ತೊಡಗಿರುವ ಬಗ್ಗೆ ಮಂಗಳೂರು ಅರಣ್ಯ ‌ ಪೊಲೀಸರಿಗೆ ಸೆ.6ರಂದು ಖಚಿತ ಮಾಹಿತಿಯೊಂದು ಲಭಿಸುತ್ತದೆ. ಯಲಬುರ್ಗಾದಲ್ಲಿ ಕೃಷ್ಣ ಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೂಡಲೇ ಅಧಿಕಾರಿಗಳ ಸಹಿತ ಸಿಬ್ಬಂದಿ ತಂಡ ಶಿವಮೊಗ್ಗ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತದೆ.

ಸೆ.7ರಂದು ಸಂಜೆ 4.30ರ ವೇಳೆಗೆ ಆರೋಪಿಗಳು ಬೈಕ್‌ನಲ್ಲಿ ಕೃಷ್ಣಮೃಗದೊಂದಿಗೆ ಗಿರಾಕಿಗಾಗಿ ಕಾಯುತ್ತಿದ್ದ ವೇಳೆ ದಾಳಿ ಮಾಡಲಾಗುತ್ತದೆ. ಈ ಸಂದರ್ಭ ಆರೋಪಿಗಳು ತಪ್ಪಿಸಲು ಯತ್ನಿಸಿದಾಗ ಬೆನ್ನಟ್ಟಿ ವಶಪಡಿಸಿಕೊಳ್ಳಲಾಗುತ್ತದೆ. ವಿಚಾರಣೆ ನಡೆಸಿದಾಗ ಒಂದು ಚರ್ಮಕ್ಕೆ 50 ಸಾವಿರ ರೂ. ಮೌಲ್ಯದಂತೆ ಮಾರಾಟ ಮಾಡುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಕೊಪ್ಪಳ ವಲಯ ಅರಣ್ಯಾಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.

ಸಿಐಡಿ ಎಡಿಜಿಪಿ ಡಾ. ರವೀಂದ್ರನಾಥ, ಮಡಿಕೇರಿ ಅರಣ್ಯ ಸಂಚಾರಿ ದಳದ ಎಸ್ಪಿ ಸುರೇಶ್‌ ಬಾಬು ಮಾರ್ಗದರ್ಶನದಲ್ಲಿ ಮಂಗಳೂರು ಅರಣ್ಯ ಸ್ಕ್ವಾಡ್ ನ ಉಪನಿರೀಕ್ಷಕ ಪುರುಷೋತ್ತಮ, ಹೆಡ್‌ ಕಾನ್‌ಸ್ಟೆಬಲ್‌ ಜಗನ್ನಾಥ ಶೆಟ್ಟಿ, ಸಿಬ್ಬಂದಿ ಪ್ರವೀಣ್‌ ಜೆ., ಉದಯ ನಾಯ್ಕ, ಮಹೇಶ್‌, ಶಿವಾನಂದ, ಜಗದೀಶ್‌ ಸಾಲ್ಯಾನ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ