ಆ್ಯಪ್ನಗರ

ಮಂಗಳೂರಿನ ಪಿಲಿಕುಳದಲ್ಲಿ ಮರಿ ಹಾಕಿದ ನೀರಾನೆ, ಮರಿಗೆ ದತ್ತು ಪಡೆದವರ ಹೆಸರು

ದತ್ತು ಪಡೆಯುವವರ ಹೆಸರನ್ನು ಮರಿ ನೀರಾನೆಗೆ ಇಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನೀರಾನೆ ಕವಿತಾ ಹಾಗೂ ಮರಿ ನೀರಾನೆ ಆರೋಗ್ಯವಾಗಿವೆ. ಪಿಲಿಕುಳದಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳು ಕಳೆದೊಂದು ವರ್ಷದಿಂದ ಇವೆ.

Vijaya Karnataka Web 31 Jan 2019, 9:59 am
ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಥಮ ಬಾರಿಗೆ ಎಂಟು ವರ್ಷದ ನೀರಾನೆ ಕವಿತಾ ಏಳು ದಿನಗಳ ಹಿಂದೆ ಮರಿ ಹಾಕಿದ್ದು, ತಾಯಿ ಹಾಗೂ ಮರಿ ನೀರಾನೆ ಆರೋಗ್ಯದಲ್ಲಿವೆ.

ಪಿಲಿಕುಳದಲ್ಲಿ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳು ಕಳೆದೊಂದು ವರ್ಷದಿಂದ ಇದ್ದು, ಅವುಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ತರಿಸಲಾಗಿತ್ತು. ಪಿಲಿಕುಳದ ವಾತಾವರಣ ನೀರಾನೆಗಳ ಸಂತಾನೋತ್ಪತ್ತಿಗೆ ಪೂರಕವಾಗಿದೆ ಎಂದು ಉದ್ಯಾನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ತಿಳಿಸಿದ್ದಾರೆ.

ಪಿಲಿಕುಳಕ್ಕೆ ಭೇಟಿ ನೀಡುವವರು ಇದೀಗ ಭಾರತೀಯ ನಾಯಿ ಧೋಲೆಯನ್ನು ಕೂಡ ನೋಡ ಬಹುದಾಗಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಇಂದಿರಾ ಗಾಂಧಿ ಜೈವಿಕ ಉದ್ಯಾನದಿಂದ ನಾಲ್ಕು ಧೋಲೆಗಳನ್ನು ತರಿಸಲಾಗಿದೆ. ಭಾರತದಲ್ಲಿ ಅತ್ಯಂತ ವಿರಳವಾಗಿರುವ ಈ ಜಾತಿಯ ನಾಯಿಗಳನ್ನು ಇಲ್ಲಿಯ ತನಕ ಪಿಳಿಕುಳದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.

ಪಿಲಿಕುಳಕ್ಕೆ ಈ ವರ್ಷ ಪ್ರಾಣಿ ವಿನಿಮಯ ಕಾರ್ಯಕ್ರಮದನ್ವಯ ಕಾಡೆಮ್ಮೆ, ಬಿಳಿ ಹುಲಿ ಹಾಗೂ ಕತ್ತೆ ಕಿರುಬಗಳು ಆಗಮಿಸಲಿವೆ ಎನ್ನುತ್ತಾರೆ ಪಿಲಿಕುಳದ ಅಧಿಕಾರಿಗಳು. ನಿಸರ್ಗಧಾಮಕ್ಕೆ ಭೇಟಿ ನೀಡುವವರು ಪ್ರಾಣಿಗಳಿಗೆ ತೊಂದರೆ ಸೃಷ್ಟಿಸದಂತೆ ನೋಡಿಕೊಳ್ಳಲು ಹಾಗೂ ಸಂದರ್ಶಕರ ಚಲನವಲನಗಳ ಮೇಲೆ ನಿಗಾ ಇಡಲು ಉದ್ಯಾನದಲ್ಲಿಗ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಾಣಿಗಳಿಗೆ ನೀಡಲಾಗುವ ಆಹಾರದ ಮೇಲೂ ನಿಗಾ ಇಡಲು ಪ್ರಾಣಿಗಳನ್ನಿಡುವ ಸ್ಥಳಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಆದರೆ ಇದಕ್ಕೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಅನುಮೋದನೆ ಅಗತ್ಯವಿದೆ ಎನ್ನುತ್ತಾರೆ ಜಯಪ್ರಕಾಶ್‌ ಭಂಡಾರಿ.

ಮರಿ ನೀರಾನೆಗೆ ದತ್ತು ಪಡೆಯುವವರ ಹೆಸರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ ಪ್ರಥಮ ಬಾರಿಗೆ ನೀರಾನೆ ಕವಿತಾಳಿಗೆ ಹುಟ್ಟಿದ ಮರಿ ನೀರಾನೆಯನ್ನು ಯಾರು ದತ್ತು ಪಡೆದುಕೊಳ್ಳುತ್ತಾರೋ ಅವರ ಹೆಸರನ್ನು ಇಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

ಮರಿ ನೀರಾನೆ ಹುಟ್ಟಿ ಬರೀ ಒಂದು ವಾರವಾಗಿದೆ ಅಷ್ಟೆ. ಇನ್ನೆರಡು ವಾರಗಳ ನಂತರ ಈ ಮರಿ ಹೆಣ್ಣೋ, ಗಂಡೋ ಎನ್ನುವ ನಿರ್ಧಾರಕ್ಕೆ ಬಂದು ಅದಕ್ಕೆ ಹೆಸರು ನೀಡುವ ಕೆಲಸ ಸಾಗಲಿದೆ. ಆದರೆ ಯಾರಾದರೂ ದಾನಿಗಳು ಬಂದು ಈ ಮರಿ ನೀರಾನೆಯನ್ನು ದತ್ತು ಸ್ವೀಕಾರ ಮಾಡಿದರೆ ಅವರ ಹೆಸರನ್ನು ಇಡಲಾಗುತ್ತದೆ. ಇದರ ಜತೆಗೆ ಅವರ ಹೆಸರನ್ನು ಕೂಡ ನೇಮ್‌ ಪ್ಲೇಟ್‌ನಲ್ಲಿ ನಮೂದಿಸಲಾಗುತ್ತದೆ. ಅವರು ಅಥವಾ ಕುಟುಂಬದವರು ಪಿಲಿಕುಳಕ್ಕೆ ಭೇಟಿ ನೀಡುವಾಗ ಉಚಿತ ವೀಕ್ಷಣೆ ವ್ಯವಸ್ಥೆ ಮಾಡಲಾಗುತ್ತದೆ. ಈಗ ಪಿಲಿಕುಳದಲ್ಲಿ ಕಾವೇರಿ, ಕವಿತಾ ಹಾಗೂ ಅಶ್ವಿನ್‌ ಎನ್ನುವ ನೀರಾನೆ ಜತೆಗೆ ಮರಿ ನೀರಾನೆ ಕೂಡ ಬಂದಿದೆ. ನೀರಾನೆ ಆಫ್ರಿಕಾ ಮೂಲದ್ದು ಬಹಳ ಗಟ್ಟಿ ಜೀವ ಎನ್ನುತ್ತಾರೆ ಪಿಲಿಕುಳದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ.





ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ