ಆ್ಯಪ್ನಗರ

Pothole in Mangaluru : ಮೋದಿ ದ.ಕ. ಜಿಲ್ಲೆಗೆ ಮತ್ತೆ ಬನ್ನಿ- ಮಂಗಳೂರಿನಲ್ಲಿ ಯುವಕನ ಏಕಾಂಗಿ ಪ್ರತಿಭಟನೆ

'ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಕೇವಲ ಎರಡು ದಿನದಲ್ಲಿ ಕೂಳೂರು ರಸ್ತೆ ದುರಸ್ತಿ ಮಾಡಿದ್ದಾರೆ. ಹಾಗಾದರೆ ರಸ್ತೆ ದುರಸ್ತಿಯಾಗಲು ಪ್ರಧಾನಿಯೇ ಬರಬೇಕಾ? ಪ್ರಧಾನಿ ಮತ್ತೆ ಬರಲಿ. ಅವರಿಂದ ಮಾತ್ರ ಹೆದ್ದಾರಿ ದುರಸ್ತಿ ಮಾಡಿಸಲು ಸಾಧ್ಯ. ಹೆದ್ದಾರಿ ಯೋಜನಾ ನಿರ್ದೇಶಕರು ನಿದ್ದೆಯಲ್ಲಿದ್ದಂತಿದೆ. ಹೆದ್ದಾರಿ ದುರಸ್ತಿ ಸಾಧ್ಯ ಎಂದಾದರೆ, ನಮ್ಮ ತೆರಿಗೆ ಮರಳಿಸಿ'', ಎಂದು ಲಿಖಿತ್‌ ರೈ ಎಂಬ ಯುವಕ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ ನಂತೂರಿನಲ್ಲಿ ಒಂದು ಗಂಟೆ ನಿಂತು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

Vijaya Karnataka 29 Sep 2022, 6:39 am
ಮಂಗಳೂರು: ಕಮ್‌ಬ್ಯಾಕ್‌ ಮೋದಿ, ರೋಡ್‌ ವರ್ಕ್ ಸಿರ್ಫ್ ಮೋದಿ ಹೈ ತೋ ಮುಮ್ಕಿನ್‌ ಹೈ? ಪೋತ್‌ಹೋಲ್‌ಸೇ ಆಜಾದಿ, ವೀ ಡಿಮ್ಯಾಂಡ್‌ ಸೇಫ್‌ ರೋಡ್ಸ್‌... ಇಂತಹ ಫಲಕ ಹಿಡಿದು ಪುತ್ತೂರಿನ ಲಿಖಿತ್‌ ರೈ ಎಂಬ ಯುವಕ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ ನಂತೂರಿನಲ್ಲಿ ಒಂದು ಗಂಟೆ ನಿಂತು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.
Vijaya Karnataka Web Road Potholes
ಸಾಂದರ್ಭಿಕ ಚಿತ್ರ


ಈ ಹಿಂದೆ ಇದೇ ಸ್ಥಳದಲ್ಲಿ ವಿದ್ಯಾರ್ಥಿಯೊಬ್ಬ ಬೈಕ್‌ನಲ್ಲಿ ಬರುವಾಗ ಆಕಸ್ಮಿಕವಾಗಿ ರಸ್ತೆಯ ಹೊಂಡಕ್ಕೆ ಬಿದ್ದು ಆತ ಮೃತಪಟ್ಟಿದ್ದ. ಈ ಸಂದರ್ಭ ಹೆದ್ದಾರಿಯಲ್ಲಿ ಮತ್ತು ನಂತರ ಮಂಗಳೂರು ಮಹಾನಗರ ಪಾಲಿಕೆ ಎದುರು ಲಿಖಿತ್‌ ರೈ ಏಕಾಂಗಿ ಪ್ರತಿಭಟನೆ ನಡೆಸಿದ್ದರು.

ಕಲ್ಲಡ್ಕದಲ್ಲಿ ರಸ್ತೆ ಗುಂಡಿಗೆ ಬಸ್‌ ಚಕ್ರ ಬಿದ್ದು ಹಿಂಬದಿ ಸೀಟ್‌ನಲ್ಲಿದ್ದ ಯುವಕನ ಸೊಂಟ ಮುರಿತ!
''ಎರಡು ತಿಂಗಳ ಹಿಂದೆ ಕೂಡ ಪ್ರತಿಭಟನೆ ಮಾಡಿದ್ದೆ. ಆದರೆ, ಸಂಸದರಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ನನ್ನ ಮನವಿಗೆ ಸ್ಪಂದಿಸಿರಲಿಲ್ಲ. ಎರಡು ತಿಂಗಳಾದರೂ ರಾಷ್ಟ್ರೀಯ ಹೆದ್ದಾರಿ ಹೊಂಡ ಮುಚ್ಚವ ಕೆಲಸ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ಮಾಡುತ್ತಿದ್ದೇನೆ'', ಎಂದರು ಲಿಖಿತ್‌ ರೈ.

''ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಕೇವಲ ಎರಡು ದಿನದಲ್ಲಿ ಕೂಳೂರು ರಸ್ತೆ ದುರಸ್ತಿ ಮಾಡಿದ್ದಾರೆ. ಹಾಗಾದರೆ ರಸ್ತೆ ದುರಸ್ತಿಯಾಗಲು ಪ್ರಧಾನಿಯೇ ಬರಬೇಕಾ? ಪ್ರಧಾನಿ ಮತ್ತೆ ಬರಲಿ. ಅವರಿಂದ ಮಾತ್ರ ಹೆದ್ದಾರಿ ದುರಸ್ತಿ ಮಾಡಿಸಲು ಸಾಧ್ಯ. ಹೆದ್ದಾರಿ ಯೋಜನಾ ನಿರ್ದೇಶಕರು ನಿದ್ದೆಯಲ್ಲಿದ್ದಂತಿದೆ. ಹೆದ್ದಾರಿ ದುರಸ್ತಿ ಸಾಧ್ಯ ಎಂದಾದರೆ, ನಮ್ಮ ತೆರಿಗೆ ಮರಳಿಸಿ'', ಎಂದು ಕೇಳಿಕೊಂಡರು.

ಅಧಿಕಾರಿಗಳಿಗೆ ಅಹಂಕಾರವಿದೆ. ಹೆದ್ದಾರಿ ದುರಸ್ತಿ ಮಾಡುತ್ತಿಲ್ಲ. ಕೇಳಿದರೆ ಟೆಂಡರ್‌ ಆಗಬೇಕಂತೆ. ಮೋದಿ ಬರುವಾಗ ಟೆಂಡರ್‌ ಬೇಡವೇ? ನಾವು ಗೆಳೆಯರನ್ನು ಮಂಗಳೂರು ದಸರಾಗೆ ಹೇಗೆ ಕರೆಯಲಿ ಸಾರ್‌? ಹೆದ್ದಾರಿ ಗುಂಡಿಯಲ್ಲಿ ಬಿದ್ದು ಸಾಯಬೇಕಾ? ಪ್ರತಿದಿನ ಜನ ಸಾಯುತ್ತಾರೆ. ಅವರ ಜೀವ ಹಿಂದೆ ತರಲು ಸಾಧ್ಯನಾ? ನಾವು ಓಟು ಹಾಕಿದ್ದೇವೆ, ಪ್ರತಿಭಟನೆ ಮಾಡುವ ಹಕ್ಕೂ ನಮಗಿದೆ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಹೇಗಾಗುತ್ತೇವೆ? ಇಂತಹ ದುರ್ಗತಿ ನಮಗೆ ಬೇಕಾ? ಪ್ರತಿಭಟಿಸಲು ಭಯ ಏಕೆ? ನನಗೆ ಯಾವ ಪಕ್ಷದ ಬೆಂಬಲವೂ ಇಲ್ಲ. ಹೆದ್ದಾರಿ ದುರಸ್ತಿಯಾದರೆ ಸಾಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ