ಆ್ಯಪ್ನಗರ

ವಿಜಯ ಬ್ಯಾಂಕ್‌ ವಿಲೀನ ವಿರುದ್ಧ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ

ವಿಜಯ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನಗೊಳಿಸುವ ಸರಕಾರದ ಆದೇಶ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸರ್ವಪಕ್ಷ ಪ್ರತಿನಿಧಿಗಳ ನಿಲುವು ಕ್ರೋಡೀಕರಿಸುವ ನಿಟ್ಟಿನಲ್ಲಿ ಪುರಭವನದಲ್ಲಿ ವಿಜಯ ಬ್ಯಾಂಕ್‌ ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ನಿರ್ಧಾರ.

Vijaya Karnataka 24 Feb 2019, 12:06 pm
ಮಂಗಳೂರು: ಕರಾವಳಿಯಲ್ಲಿ ಕೃಷಿಕರಿಗೆ ಹಾಗೂ ಜನಸಾಮಾನ್ಯರಿಗೆ ಬದುಕು ಕಟ್ಟಿಕೊಟ್ಟ ವಿಜಯ ಬ್ಯಾಂಕ್‌ ಉಳಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಆದೇಶವನ್ನು ಕೇಂದ್ರ ಸರಕಾರ ವಾಪಸ್‌ ಪಡೆಯಲು ಸರ್ವಪಕ್ಷಗಳ ನಿಯೋಗ ಶೀಘ್ರದಲ್ಲೇ ಕೇಂದ್ರಕ್ಕೆ ಕರೆದೊಯ್ಯಲು ಶನಿವಾರ ನಿರ್ಧರಿಸಲಾಯಿತು.
Vijaya Karnataka Web Vijaya bank


ವಿಜಯ ಬ್ಯಾಂಕ್‌ನ್ನು ಬ್ಯಾಂಕ್‌ ಆಫ್‌ ಬರೋಡಾ ಜತೆ ವಿಲೀನಗೊಳಿಸುವ ಸರಕಾರದ ಆದೇಶ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸರ್ವಪಕ್ಷ ಪ್ರತಿನಿಧಿಗಳ ನಿಲುವು ಕ್ರೋಡೀಕರಿಸುವ ನಿಟ್ಟಿನಲ್ಲಿ ಪುರಭವನದಲ್ಲಿ ವಿಜಯ ಬ್ಯಾಂಕ್‌ ಹೋರಾಟ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಕೇಂದ್ರದಲ್ಲಿ ನಮ್ಮದೇ ಪಕ್ಷ ಆಡಳಿತದಲ್ಲಿರುವ ಕಾರಣ ನಮಗೆ ಹೆಚ್ಚಿನ ಜವಾಬ್ದಾರಿಯಿದೆ. ಬ್ಯಾಂಕ್‌ ಉಳಿಸುವ ನಿಟ್ಟಿನಲ್ಲಿ ಬೀದಿ ಹೋರಾಟ ನಡೆಸಿದರೆ ಅದು ಕೇಂದ್ರ ಸರಕಾರಕ್ಕೆ ಮುಟ್ಟಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಶಾಸಕರ ಹಾಗೂ ಸಂಸದರನ್ನೊಳಗೊಂಡ 50-60 ಮಂದಿಯ ನಿಯೋಗ ದಿಲ್ಲಿಗೆ ಕರೆದುಕೊಂಡು ಹೋಗುವ. ವಿಲೀನ ಆದೇಶ ವಾಪಸ್‌ ತೆಗೆದುಕೊಳ್ಳುವವರೆಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಮುಂದೆ ಕೂರುವ ಎಂದು ಸಲಹೆ ನೀಡಿದರು.

ಶಾಸಕರ ಸಲಹೆಗೆ ವಿಜಯ ಬ್ಯಾಂಕ್‌ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಹೆಗ್ಡೆ ಉಳೆಪಾಡಿ ಒಪ್ಪಿಗೆ ಸೂಚಿಸಿ, ಶೀಘ್ರ ದಿನಾಂಕ ನಿಗದಿಪಡಿಸುವುದಾಗಿ ಪ್ರಕಟಿಸಿದರು.

ವಿರೋಧವನ್ನು ದಿಲ್ಲಿ ಮುಂದಿಡುವೆ: ರೈ
ವಿಜಯ ಬ್ಯಾಂಕ್‌ ರಾಷ್ಟ್ರೀಕರಣಗೊಂಡ ಬಳಿಕವೂ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗಿಲ್ಲ. ಬ್ಯಾಂಕ್‌ನ ವಿಲೀನ ವಿರೋಧಿಸುವುದು ಜಿಲ್ಲೆಯ ಪ್ರತಿ ನಾಗರಿಕನ ಕರ್ತವ್ಯ. ಕಡಬದಲ್ಲಿರುವ ಸಿಪಿಸಿಆರ್‌ಐ ಸ್ಥಳಾಂತರಕ್ಕೆ ಪ್ರಯತ್ನಿಸಿದಾಗ ತಾನು ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ ವಿರೋಧ ವ್ಯಕ್ತಪಡಿಸಿದ್ದೆ. ವಿಜಯ ಬ್ಯಾಂಕ್‌ ವಿಷಯದಲ್ಲಿಯೂ ನನ್ನ ಹಾಗೂ ನನ್ನ ಪಕ್ಷದ ವಿರೋಧವನ್ನು ದಿಲ್ಲಿಯ ಮುಂದಿಡುವೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಲೈಟ್‌ಹೌಸ್‌ ಹಿಲ್‌ಗೆ ಮೂಲ್ಕಿ ಸುಂದರರಾಮ್‌ ಹೆಸರಿಡುವ ಬಗ್ಗೆ ಪ್ರಸ್ತಾಪಿಸಿದ ಅವರು, ಕೆಲವರಿಗೆ ಸಮಸ್ಯೆ ಪರಿಹಾರವಾಗುವುದು ಇಷ್ಟವಿಲ್ಲ. ಸಮಸ್ಯೆ ಜೀವಂತವಾಗಿದ್ದರೆ ಅವರಿಗೆ ರಾಜಕೀಯ ಲಾಭವಾಗುತ್ತದೆ. ಚಿವುಟಿ ಎಬ್ಬಿಸುವ ಜನರು ಅವರು ಎಂದು ಬಿಜೆಪಿ ಹೆಸರು ಹೇಳದೆ ಟೀಕಿಸಿದರು.

ರೈ-ಕಾಮತ್‌ ನಡುವೆ ಲಘು ಮಾತಿನ ಸಮರ
ವಿಜಯ ಬ್ಯಾಂಕ್‌ ವಿಲೀನಕ್ಕೆ ಸಂಬಂಧಿಸಿ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್‌ ನಡುವೆ ಲಘು ಮಾತಿನ ಸಮರ ನಡೆಯಿತು.

ರಮಾನಾಥ ರೈ ಅವರ ಭಾಷಣ ಮುಗಿದ ಬಳಿಕ ಆಗಮಿಸಿದ ವೇದವ್ಯಾಸ ಕಾಮತ್‌ ಮಾತನಾಡಿ, ಬ್ಯಾಂಕ್‌ ವಿಲೀನ ಕುರಿತು 1991ರಲ್ಲಿ ನರಸಿಂಹ ಸಮಿತಿ ಶಿಫಾರಸು ಮಾಡಿತ್ತು. 2011-12ರಲ್ಲಿ ಯುಪಿಎ ಸರಕಾರದ ಹಣಕಾಸು ಸಚಿವ ಪಿ. ಚಿದಂಬರಂ ವಿಲೀನ ಪ್ರಕ್ರಿಯೆ ಕೈಗೆತ್ತಿಕೊಂಡರು. ಯಾರ ಆಡಳಿತ ಕಾಲದಲ್ಲಿ ವಿಲೀನ ಪ್ರಕ್ರಿಯೆ ಆರಂಭವಾಯಿತು ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಕಾಂಗ್ರೆಸ್‌ ಹೆಸರು ಉಲ್ಲೇಖಿಸದೆ ಶಾಸಕರು ಛೇಡಿಸಿದರು.

ನರಸಿಂಹ ಸಮಿತಿಯ ಶಿಫಾರಸಿನ ಕುರಿತು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಹೆಗ್ಡೆ ಉಳೆಪಾಡಿ ಸ್ಪಷ್ಟೀಕರಣ ನೀಡಿದರು. ಜತೆಗೆ ಶಾಸಕರ ಹೇಳಿಕೆಗೆ ಮಾಜಿ ಸಚಿವ ರೈ ಆಕ್ಷೇಪ ವ್ಯಕ್ತಪಡಿಸಿದರು. ಟಿವಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ರಮಾನಾಥ ರೈ ಆಕ್ರೋಶ ಎಂದು ಸುದ್ದಿ ನೋಡಿ ತಾನು ಸ್ಪಷ್ಟೀಕರಣ ನೀಡಿದೆ. ನೀವು ನನಗಿಂತ ಹಿರಿಯರು ಕ್ಷಮಿಸಬೇಕು' ಎಂದು ಶಾಸಕರು ಕೈಮುಗಿದರು. ರೈ ಅವರು ಮಾತು ಮುಂದುವರಿಸುತ್ತಿದ್ದಂತೆ ಶಾಸಕರು ವೇದಿಕೆಯಿಂದ ನಿರ್ಗಮಿಸಿ ತನ್ನ ಕಾರಿನತ್ತ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ