ಆ್ಯಪ್ನಗರ

ಹೃದ್ರೋಗಿ ಜೀವ ಉಳಿಸಿದ ಜೀವರಕ್ಷಕ: ಝೀರೋ ಟ್ರಾಫಿಕ್‌ ಇಲ್ಲದೆ ಉಜಿರೆಯಿಂದ ಮಂಗಳೂರಿಗೆ 40 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್‌ ಚಾಲಕ

ಝೀರೋ ಟ್ರಾಫಿಕ್‌ನಲ್ಲಿ ನಾಲ್ಕೂವರೆ ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 40 ದಿನದ ಮಗುವನ್ನು ಕರೆದೊಯ್ದು ಜೀವ ಉಳಿಸಿದ ಘಟನೆ ಬೆನ್ನಲ್ಲೇ ಮತ್ತೊಂದು ಜೀವ ರಕ್ಷಣೆಯ ಕಾರ್ಯಾಚರಣೆ ಯಶಸ್ವಿಯಾಗಿದೆ.

Vijaya Karnataka Web 8 Feb 2020, 9:06 pm
ಬೆಳ್ತಂಗಡಿ: ಝೀರೋ ಟ್ರಾಫಿಕ್‌ನಲ್ಲಿ ನಾಲ್ಕೂವರೆ ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 40 ದಿನದ ಮಗುವನ್ನು ಕರೆದೊಯ್ದು ಜೀವ ಉಳಿಸಿದ ಘಟನೆ ನಡೆದು ಒಂದೆರಡು ದಿನ ಕಳೆದಿರುವಂತೆಯೇ ಬೆಳ್ತಂಗಡಿಯ ಆಂಬ್ಯುಲೆನ್ಸ್‌ ಚಾಲಕರೊಬ್ಬರು ಲಘು ಹೃದಯಾಘಾತವಾದ ವ್ಯಕ್ತಿಯೊಬ್ಬರನ್ನು ಉಜಿರೆಯಿಂದ ಮಂಗಳೂರಿಗೆ ಕೇವಲ 40 ನಿಮಿಷದಲ್ಲಿ ಕರೆದೊಯ್ದು ಪ್ರಾಣ ಉಳಿಸಿದ್ದಾರೆ.
Vijaya Karnataka Web ಹೃದಯ
ಹೃದಯ


ಇಲ್ಲಿ ಝೀರೋ ಟ್ರಾಫಿಕ್‌ ಇರಲಿಲ್ಲ. ವಾಹನ ದಟ್ಟಣೆಯ ನಡುವೆಯೂ, ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆ ತನಕ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು, ಅಲ್ಲಲ್ಲಿ ಕಿತ್ತು ಹೋದ ರಸ್ತೆಗಳ ನಡುವೆ ಉಜಿರೆಯಿಂದ ಮಂಗಳೂರಿಗೆ ಕೇವಲ 40 ನಿಮಿಷದಲ್ಲಿ ಆಂಬ್ಯುಲೆನ್ಸ್‌ ಚಾಲಕ ಹೃದ್ರೋಗಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ.

ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಚಿಕ್ಕಬಳ್ಳಾಪುರದಿಂದ ಯಾತ್ರಾರ್ಥಿಯಾಗಿ ಬಸ್‌ನಲ್ಲಿ ಬರುತ್ತಿದ್ದ 45ರ ಹರೆಯದ ಗೋಪಾಲ ಆಚಾರ್ಯ ಅವರಿಗೆ ಸಕಲೇಶಪುರ ತಲುಪಿದಾಗ ಎದೆನೋವು ಕಾಣಿಸಿಕೊಂಡಿತ್ತು.

ಹೇಗೋ ಸುಧಾರಿಸಿಕೊಂಡು ಉಜಿರೆಯಲ್ಲಿ ಬಸ್‌ನಿಂದ ಇಳಿದು ಉಜಿರೆಯಲ್ಲಿರುವ ಬೆನಕ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ(ಇಸಿಜಿ) ಮಾಡಿಸಿದಾಗ ಹೃದಯ ಸಂಬಂಧಿ ಕಾಯಿಲೆ(ಲಘು ಹೃದಯಾಘಾತ) ಮನಗೊಂಡ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್‌ ತಕ್ಷಣ ಮಂಗಳೂರಿಗೆ ಚಿಕಿತ್ಸೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ.

ಕನಿಷ್ಠ ಸಮಯದಲ್ಲಿ ರೋಗಿಯನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ತಕ್ಷಣ ರೆಡಿಯಾದವರು ಆರೋಗ್ಯ ಆಂಬ್ಯುಲೆನ್ಸ್‌ನ ಚಾಲಕ ಬೆಳ್ತಂಗಡಿ ಆದರ್ಶ ನಗರದ ಹಮೀದ್‌. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದ ಅವರು ವಿಶ್ರಾಂತಿ ಲೆಕ್ಕಿಸದೇ ಕಾರ್ಯಪ್ರವೃತ್ತರಾದರು. ಹದಗೆಟ್ಟ ರಸತೆ ಸಮಸ್ಯೆ ನಡುವೆ ಝೀರೋ ಟ್ರಾಫಿಕ್‌ ಇಲ್ಲದೆ 40 ನಿಮಿಷದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ರೋಗಿಯನ್ನು ಸಕಾಲಕ್ಕೆ ತಲುಪಿಸಿ, ಜೀವ ರಕ್ಷಕರಾಗಿದ್ದಾರೆ.

ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿಪೂರ್ವಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದ ಕೆಎಂಸಿಯ ಖ್ಯಾತ ಹೃದಯತಜ್ಞ ಡಾ. ಪದ್ಮನಾಭ ಕಾಮತ್‌ ಅವರು ತಕ್ಷಣ ಆಚಾರ್ಯ ಅವರಿಗೆ ಆಂಜಿಯೋಪ್ಲಾತ್ರ್ಯಸ್ಟಿ ನಡೆಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ಹತ್ತು ನಿಮಿಷ ತಡವಾಗಿದ್ದರೂ ಪ್ರಾಣಕ್ಕೆ ಅಪಾಯವಿತ್ತು ಎಂಬುದು ವೈದ್ಯರ ಅಭಿಪ್ರಾಯ. ತನ್ನ ಸೇವಾ ಕರ್ತವ್ಯದ ಮೂಲಕ ಮಂಗಳೂರಿಗೆ ಸಕಾಲಕ್ಕೆ ಮುಟ್ಟಿಸಿದ ಆಂಬ್ಯುಲೆನ್ಸ್‌ ಚಾಲಕ ಹಮೀದ್‌ ಹಾಗೂ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ ವೈದ್ಯ ಡಾ. ಪದ್ಮನಾಭ ಕಾಮತ್‌ ಅವರ ಕಾರ್ಯವೈಖರಿ ಎಲ್ಲರ ಪ್ರಸಂಸೆಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ