ಆ್ಯಪ್ನಗರ

ದೀಪಾವಳಿಗೆ ಮೊದಲು ಬಡವರ ಬಂಧುಗೆ ಚಾಲನೆ

ಬಡ ವ್ಯಾಪಾರಿಗಳನ್ನು ಕಾಡುತ್ತಿರುವ ಮೀಟರ್‌ ಬಡ್ಡಿಯಿಂದ ಕರ್ನಾಟಕಕ್ಕೆ ಮುಕ್ತಿ ನೀಡಲು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆಗೆ ದೀಪಾವಳಿಗೆ ಮೊದಲು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ಹೇಳಿದರು.

Vijaya Karnataka 11 Oct 2018, 3:12 pm
ಮಂಗಳೂರು : ಬಡ ವ್ಯಾಪಾರಿಗಳನ್ನು ಕಾಡುತ್ತಿರುವ ಮೀಟರ್‌ ಬಡ್ಡಿಯಿಂದ ಕರ್ನಾಟಕಕ್ಕೆ ಮುಕ್ತಿ ನೀಡಲು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ 'ಬಡವರ ಬಂಧು' ಯೋಜನೆಗೆ ದೀಪಾವಳಿಗೆ ಮೊದಲು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ಹೇಳಿದರು.
Vijaya Karnataka Web before deepavali poover bandhu plane started
ದೀಪಾವಳಿಗೆ ಮೊದಲು ಬಡವರ ಬಂಧುಗೆ ಚಾಲನೆ


ನಗರದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬುಧವಾರ ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು ಮತ್ತು ಸ್ವಸಹಾಯ ಗುಂಪುಗಳ ಸಾಧನೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಡವರ ಬಂಧು ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಎರಡು ಸಾವಿರ ರೂ.ನಿಂದ 10 ಸಾವಿರ ರೂ. ತನಕ ಮೊಬೈಲ್‌ ಸೇವೆ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲಾಗುವುದು. ಬೆಂಗಳೂರಿನ ಐದು ಸಾವಿರ ಮತ್ತು ಮಂಗಳೂರಿನ ಮೂರು ಸಾವಿರ ಫಲಾನುಭವಿಗಳು ಸೇರಿದಂತೆ ರಾಜ್ಯದಲ್ಲಿ 53 ಸಾವಿರ ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಯೋಜನ ಸಿಗಲಿದೆ ಎಂದರು.

ಶೀಘ್ರ ಕಾಯಕ ಯೋಜನೆ: ಸ್ವಸಹಾಯ ಗುಂಪುಗಳು ಉದ್ಯಮ ಆರಂಭಿಸಲು ಕಾಯಕ ಯೋಜನೆ ಮೂಲಕ 10 ಲಕ್ಷ ರೂ. ಸಾಲ ಒದಗಿಸಲಾಗುವುದು. ಐದು ಲಕ್ಷ ರೂ. ತನಕ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಉಳಿದ ಐದು ಲಕ್ಷ ರೂ. ಶೇ.4ರ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಲಭ್ಯವಾಗಲಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಶೀಘ್ರ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ಸಾಲ ಮನ್ನಾ ಯೋಜನೆ: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಾಲ ಮನ್ನಾ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ರೈತರ 713 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಹಿಂದಿನ ಸಿಎಂ ಸಿದ್ದರಾಮಯ್ಯ ಸರಕಾರದ ಸಂದರ್ಭ ಸಾಲ ಮನ್ನಾದಡಿ ಜಿಲ್ಲೆಯ 380 ಕೋಟಿ ರೂ. ರೈತರ ಸಾಲ ಮನ್ನಾ ಆಗಿದೆ. ಪ್ರಸಕ್ತ ಸಾಲಿನ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಮಾಹಿತಿಯನ್ನು ಸರಕಾರ ಪಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ಏಕರೂಪ ಸಾಫ್ಟ್‌ವೇರ್‌ ಅಳವಡಿಕೆ: ದ.ಕ. ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ (ಪ್ಯಾಕ್ಸ್‌)ಗಳಲ್ಲಿ ಈಗಾಗಲೇ ಕಾಮನ್‌ ಸಾಫ್ಟ್‌ವೇರ್‌ ಅಳವಡಿಸಲಾಗಿದ್ದು, ರಾಜ್ಯದ ಎಲ್ಲಾ ಪ್ಯಾಕ್ಸ್‌ಗಳಲ್ಲೂ ಈ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಇಲಾಖೆ ಮುಂದಿನ 15 ದಿನಗಳಲ್ಲಿ ವರದಿ ನೀಡಲಿದ್ದು, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕಳೆದ ಸಾಲಿನ ಸಾಲ ಮನ್ನಾ ಯೋಜನೆಯಡಿ ದಕ ಜಿಲ್ಲೆಯ 380 ಕೋಟಿ ರೂ.ಗಳಲ್ಲಿ ಎರಡು ಕೋಟಿ ರೂ. ಮಾತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳಿಗೆ ಪಾವತಿಯಾಗಬೇಕಿದೆ. ಪ್ರಸಕ್ತ ಸಾಲಿನ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿ ದಾಖಲೆಗಳನ್ನು ಸಲ್ಲಿಸಲು ರೈತರಿಗೆ ಸೂಚಿಸಲಾಗಿದೆ. ದಾಖಲೆಯಾಗಿ ಆಧಾರ್‌ ಕಾರ್ಡ್‌ ಹಾಗೂ ರೇಶನ್‌ ಕಾರ್ಡ್‌ ಮಾತ್ರವೇ ಕೇಳಲಾಗುತ್ತಿದೆ. ಯಾರಾದರೂ ಸತಾಯಿಸಿದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಹಕಾರಿ ಇಲಾಖೆ ಉಪನಿಬಂಧಕರಿಗೆ ಸಚಿವರು ಸೂಚಿಸಿದರು.

ಕೊಡಗಿಗೆ ನೆರವ: ದ.ಕ. ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ನೌಕರರು ಸೇರಿದಂತೆ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕ್‌ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು ಒಂದು ಕೋಟಿ ರೂ. ನೀಡಿದ್ದು, ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌, ಉಪಾಧ್ಯಕ್ಷ ವಿನಯಕುಮಾರ್‌ ಸೂರಿಂಜೆ, ನಿರ್ದೇಶಕರಾದ ಸದಾಶಿವ ಉಳ್ಳಾಲ್‌, ದೇವಿಪ್ರಸಾದ್‌ ಶೆಟ್ಟಿ, ಶಶಿಕುಮಾರ್‌ ರೈ, ಭಾಸ್ಕರ ಕೋಟ್ಯಾನ್‌, ವಾದಿರಾಜ ಶೆಟ್ಟಿ, ರಾಜ್ಯ ಸಹಕಾರಿ ಸೊಸೈಟಿಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ಮೈಸೂರು ವಿಭಾಗದ ಜಂಟಿ ನಿಬಂಧಕ ಲಿಂಗರಾಜು, ಜಿಲ್ಲಾ ಉಪನಿಬಂಧಕ ಬಿ.ಕೆ.ಸಲೀಂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ