ಆ್ಯಪ್ನಗರ

ಬಿಎಸ್‌ವೈ ಹೇಳಿಕೆ ಬಿಜೆಪಿ ಅಭಿಪ್ರಾಯ ಅಲ್ಲ: ಮೀನಾಕ್ಷಿ ಲೇಖಿ

ಏರ್‌ಸ್ಟ್ರೈಕ್‌ಗೆ ಪ್ರತಿಪಕ್ಷಗಳು ಸಾಕ್ಷಿ ಕೊಡಿ ಎಂದು ಕೇಳುತ್ತಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉರಿ ದಾಳಿಗೂ ನಾವು ಸಾಕ್ಷಿ ಕೊಟ್ಟಿದ್ದೆವು. ಬಾಲಾಕೋಟ್‌ ದಾಳಿ ಬಗ್ಗೆಯೂ ನಮ್ಮಲ್ಲಿ ಸಾಕ್ಷಿ ಇದೆ.

Vijaya Karnataka 4 Mar 2019, 3:14 pm
ಮಂಗಳೂರು: ಭಯೋತ್ಪಾದನೆ ಹತ್ತಿಕ್ಕಲು ಪಾಕಿಸ್ತಾನ ವಿರುದ್ಧ ನಡೆಸಲಾದ ಏರ್‌ಸ್ಟ್ರೈಕ್‌ನಿಂದ ಭಾರತೀಯ ಜನತಾ ಪಾರ್ಟಿಗೆ ಅನುಕೂಲಕರವಾಗಲಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ, ಇದು ಬಿಜೆಪಿಯ ಹೇಳಿಕೆ ಅಲ್ಲ ಎಂದು ಸಂಸದೆ, ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
Vijaya Karnataka Web Meenakshi


ನಗರದಲ್ಲಿ ಭಾನುವಾರ ಮಾತನಾಡಿದ ಅವರು, ದೇಶದ ವಿಚಾರದಲ್ಲಿ ಬಿಜೆಪಿಯ ಅಗ್ರಗಣ್ಯ ನಾಯಕರು ಮಾತನಾಡುತ್ತಾರೆ. ಯಡಿಯೂರಪ್ಪ ಅವರು ಇಲ್ಲಿ ಅವರ ಭಾವನೆಗೆ ತಕ್ಕಂತೆ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದು ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡರು.

ಏರ್‌ಸ್ಟ್ರೈಕ್‌ಗೆ ಪ್ರತಿಪಕ್ಷಗಳು ಸಾಕ್ಷಿ ಕೊಡಿ ಎಂದು ಕೇಳುತ್ತಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉರಿ ದಾಳಿಗೂ ನಾವು ಸಾಕ್ಷಿ ಕೊಟ್ಟಿದ್ದೆವು. ಬಾಲಾಕೋಟ್‌ ದಾಳಿ ಬಗ್ಗೆಯೂ ನಮ್ಮಲ್ಲಿ ಸಾಕ್ಷಿ ಇದೆ. ಆದರೆ ಅದನ್ನು ನಾವು ಕೊಡುವ ಬದಲು ಜೈಷೆ ಉಗ್ರ ಸಂಘಟನೆಯ ನಾಯಕರ ಟ್ವೀಟ್‌ ಗಮನಿಸಿದರೆ ಸಾಕು. ಅವರೇ ದಾಳಿಯನ್ನು ಒಪ್ಪಿಕೊಂಡಿದ್ದಾರೆ. ಸಾಕ್ಷಿ ಕೇಳುವವರಿಗೆ ಅದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಉತ್ತರಿಸಿದರು.

ದಾಳಿಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಆದರೆ ದಾಳಿ ವಿಚಾರದಲ್ಲಿ ಪ್ರತಿಪಕ್ಷಗಳು ಸರಕಾರದ ನಡೆಯನ್ನು ಹಾಗೂ ಬಿಜೆಪಿಯನ್ನು ದೂರುವ ಮೂಲಕ ಅವರು ಈ ವಿಚಾರವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿಗೆ ಕಾಂಗ್ರೆಸ್‌ ಯಾಕೆ ವಿರೋಧ ವ್ಯಕ್ತಪಡಿಸಿತ್ತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸೈನಿಕ ಕಾರ್ಯಾಚರಣೆಯನ್ನು ಸಂಭ್ರಮಿಸಿದರೆ ಕೋಮುಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೇಖಿ, ಇದು ನಾಚಿಕೆಗೇಡಿನ ಹೇಳಿಕೆ. ಈ ಮೂಲಕ ಭಾರತ ಜನರ ಶಕ್ತಿಯನ್ನು ಕಡೆಗಣಿಸಲಾಗಿದೆ. ದೇಶದಲ್ಲಿ ಹಿಂದೂ ಹಾಗೂ ಇತರ ಧರ್ಮೀಯರಂತೆ ಮುಸ್ಲಿಮರು ಕೂಡಾ ಯಾವಾಗಲೂ ದೇಶದ ಪರವಾಗಿಯೇ ಇರುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಮುಂಬಯಿ ದಾಳಿ ಸಂದರ್ಭ ಕಾಂಗ್ರೆಸ್‌ ಬೇಜವಾಬ್ದಾರಿಯಾಗಿ ನಡೆದುಕೊಂಡಿದೆ. ಅಂತವರು ಈಗ ಮೋದಿ ಸರಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಸೇನೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬಾರದು. ನಮ್ಮ ಸರಕಾರ ದೇಶಕ್ಕೆ ಒಳ್ಳೆದಾಗುವ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದು ಸರಕಾರದ ನಡೆಯನ್ನು ಸಮರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ