ಆ್ಯಪ್ನಗರ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಸುರಕ್ಷಿತ 'ಸ್ಫೋಟ': ಈಗ ಶುರುವಾಗಿದೆ ದುಷ್ಕರ್ಮಿಗಳ ಬೇಟೆ..!

ಮೊದಲ ಹಂತದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು ನಡೆದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಹೊಸ ಕೇಬಲ್ ಅಳವಡಿಕೆ ಮಾಡಲಾಯ್ತು. ಬಳಿಕ ನಡೆದ 2ನೇ ಹಂತದ ಪ್ರಯತ್ನದಲ್ಲಿ ಬಾಂಬ್ ಸ್ಫೋಟಿಸಲು ಸಾಧ್ಯವಾಯ್ತು.

Vijaya Karnataka Web 20 Jan 2020, 6:09 pm

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್‌ ಅನ್ನು ಭದ್ರತಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಸ್ಫೋಟಿಸಿದ್ದಾರೆ. ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿತ್ತು. ಕೂಡಲೇ ಕೆಂಜಾರು ಮೈದಾನಕ್ಕೆ ಸ್ಫೋಟಕ ಇಟ್ಟಿದ್ದ ಬ್ಯಾಗ್ ರವಾನೆ ಮಾಡಲಾಯ್ತು. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಮೊದಲಿಗೆ ಬಾಂಬ್ ನಿಷ್ಕ್ರಿಯಗೊಳಿಸಲು ಮುಂದಾಯ್ತು. ಆದ್ರೆ ಇದು ಸಾಧ್ಯವಾಗದ ಕಾರಣ, ಅನಿವಾರ್ಯವಾಗಿ ಬಾಂಬ್ ಸ್ಫೋಟಗೊಳಿಸಲು ನಿರ್ಧರಿಸಲಾಯ್ತು.
Vijaya Karnataka Web bomb difuse
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಸುರಕ್ಷಿತ 'ಸ್ಫೋಟ': ಈಗ ಶುರುವಾಗಿದೆ ದುಷ್ಕರ್ಮಿಗಳ ಬೇಟೆ..!


ಇದಕ್ಕಾಗಿ ಕೆಂಜಾರು ಮೈದಾನದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡ ಬಾಂಬ್‌ ನಿಷ್ಕ್ರಿಯ ದಳ, ಸುರಕ್ಷಿತವಾಗಿ ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು ನಡೆದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಹೊಸ ಕೇಬಲ್ ಅಳವಡಿಕೆ ಮಾಡಲಾಯ್ತು. ಬಳಿಕ ನಡೆದ 2ನೇ ಹಂತದ ಪ್ರಯತ್ನದಲ್ಲಿ ಬಾಂಬ್ ಸ್ಫೋಟಿಸಲು ಸಾಧ್ಯವಾಯ್ತು.

ಎಂಟು ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಲ್ಯಾಪ್‍ಟಾಪ್ ಬ್ಯಾಗ್‍ನಲ್ಲಿ ಪತ್ತೆಯಾಗಿದ್ದ ಸುಧಾರಿತ ಬಾಂಬನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವುದೇ ಮೊದಲ ಟಾಸ್ಕ್‌ ಆಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಬಾಂಬ್ ನಿಷ್ಕ್ರಿಯ ದಳದ ತಜ್ಞರು, ಮೊದಲಿಗೆ ಕೆಂಜಾರು ಮೈದಾನಕ್ಕೆ ಬಾಂಬ್ ರವಾನೆ ಮಾಡಿದರು. ಅಲ್ಲಿ ಅದಾಗಲೇ 10 ಅಡಿ ಆಳದ ಗುಂಡಿ ತೋಡಿ ಅದರೊಳಗೆ ಬಾಂಬ್‌ ಇಡಲಾಯ್ತು. ಬಳಿಕ, ಬಾಂಬ್‌ಗೆ ಡಿಟೋನೇಟರ್ ಸಂಪರ್ಕ ಕಲ್ಪಿಸಿ, ದೂರದವರೆಗೆ ವಯರ್ ಅಳವಡಿಕೆ ಮಾಡಲಾಯ್ತು. ಬಾಂಬ್‌ ಇದ್ದ ಗುಂಡಿಯೊಳಗೆ ಹಾಗೂ ಗುಂಡಿಯ ಸುತ್ತಲೂ ಮರಳಿನ ಗೋಣಿ ಚೀಲದ ತಡೆಗೋಡೆ ನಿರ್ಮಿಸಲಾಯ್ತು. ಬಳಿಕ ಡಿಟೋನೇಟರ್‌ ಚಾಲನೆ ಮಾಡಿ ಬಾಂಬ್ ಸಿಡಿಸಲಾಯ್ತು. ಈ ಸಂದರ್ಭದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತು. ಈ ಮೂಲಕ ಸುಮಾರು ಎಂಟು ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಬಾಂಬ್ ಸ್ಫೋಟವಾಯ್ತು, ಈಗ ಇಟ್ಟವನ ಬೇಟೆ..!

ಮಂಗಳೂರು ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ಬಂದಿದ್ದ ಆಗಂತುಕ ಬಾಂಬ್ ಇರುವ ಬ್ಯಾಗ್ ಇಟ್ಟು ಹೋಗಿದ್ದ. ನಂತರ ಇದನ್ನು ಗಮನಿಸಿದ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ತಜ್ಞರು ತಕ್ಷಣ ಸ್ಥಳಕ್ಕೆ ಆಗಮಿಸಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡು ಸುರಕ್ಷಿತವಾಗಿ ಬಾಂಬ್‌ ಸ್ಫೋಟಗೊಳಿದ ಬಳಿಕ, ಇದೀಗ ಆರೋಪಿಗಾಗಿ ಪೊಲೀಸರು ಜಾಲಾಡುತ್ತಿದ್ದಾರೆ. ಬಾಂಬ್ ಇಟ್ಟ ವ್ಯಕ್ತಿಯ ಮುಖ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇದರ ಆಧಾರದಲ್ಲಿ ಆರೋಪಿ ಪತ್ತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ; ಇಲ್ಲಿದೆ ಪ್ರಕರಣದ ಸಂಪೂರ್ಣ ಮಾಹಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ