ಆ್ಯಪ್ನಗರ

24 ಲಕ್ಷ ರೂ. ಬೆಲೆಯ ಐಷಾರಾಮಿ ಕಾರಿನ ಒಡೆಯನಿಗೂ ಬಿಪಿಎಲ್‌ ಕಾರ್ಡ್‌!

ರಾಜ್ಯಾದ್ಯಂತ ಅಕ್ರಮ ಪಡಿತರ ಚೀಟಿದಾರರ ಬೇಟೆ ಶುರು| ಮಂಗಳೂರಿನಲ್ಲಿ ಮೂರು ಕಾರಿದ್ದವರೂ ಕಡುಬಡವರು!

Vijaya Karnataka 13 Dec 2019, 10:35 am

  • ವಿಜಯ ಕೋಟ್ಯಾನ್‌ ಪಡು ಮಂಗಳೂರು
ಮಂಗಳೂರು: ಕೋಟ್ಯಂತರ ರೂಪಾಯಿ ಬೆಳೆಬಾಳುವ ಐಷಾರಾಮಿ ಬಂಗಲೆ, 24 ಲಕ್ಷ ರೂ. ಬೆಲೆ ಬಾಳುವ ಕಾರಿನ ಮಾಲೀಕ. ಆದರೆ ಸರಕಾರಿ ಲೆಕ್ಕದಲ್ಲಿ ಮಾತ್ರ ಇವರು ಕಡುಬಡವರು. ಇವರ ಹೊಟ್ಟೆಪಾಡಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್‌ ಕಾರ್ಡ್‌ ಕೊಟ್ಟಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ವಾಸಿಸುವ ಈ ವ್ಯಕ್ತಿ ಬಿಪಿಎಲ್‌ ಒಡೆಯ. ಕಡುಬಡವರ ಎಲ್ಲಾ ಸೌಲಭ್ಯಗಳನ್ನು ಇವರು ಯಾವುದೇ ಲಜ್ಜೆ ಇಲ್ಲದೆ ಸ್ವಾಹಾ ಮಾಡುತ್ತಿದ್ದಾರೆ.
Vijaya Karnataka Web BPL Card


ಇದೊಂದು ಸ್ಯಾಂಪಲ್‌. ಪುತ್ತೂರು ತಾಲೂಕಿನಲ್ಲಿ ವಾಸಿಸುವ ಒಬ್ಬರ ಮನೆಯಲ್ಲಿ ಮೂರು ಕಾರುಗಳಿವೆ. ಇವುಗಳ ಒಟ್ಟು ಮೊತ್ತ 28 ಲಕ್ಷ. ಆದರೂ ಇವರು ಕಡುಬಡವರು ಎಂದು ಘೋಷಿಸಿಕೊಂಡು

ಪಡಿತರ ಚೀಟಿ ಪಡೆದಿದ್ದಾರೆ. ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಮಂಜೂರು ಮಾಡಿದ್ದಾರೆ. ಇದೇನು ಮಂಗಳೂರಿಗೆ ಮೀಸಲಾಗಿರುವ ಪಿಡುಗಲ್ಲ. ರಾಜ್ಯದ ಎಲ್ಲೆಡೆ ಇದೇ ಕತೆ.

ಬಗೆದಷ್ಟೂ ಆಳ ಅನರ್ಹರ ಜಾಡು

ರಾಜ್ಯದಲ್ಲಿಅಕ್ರಮ ದಾಖಲೆ ಮತ್ತು ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಪಡಿತರ ಚೀಟಿ ಪಡೆದುಕೊಂಡಿರುವವರನ್ನು ಪತ್ತೆಹಚ್ಚುವ ಕಾರ್ಯವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹಾಗೂ ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಐಷಾರಾಮಿ ಜೀವನ ನಡೆಸುವವರು ಬಿಪಿಎಲ್‌ ಕಾರ್ಡ್‌ ಪಡೆದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7 ವರ್ಷಗಳಿಂದೀಚೆಗೆ ಬಿಪಿಎಲ್‌ ಕಾರ್ಡ್‌ ರಾಜ್ಯಾದ್ಯಂತ ವಿಪರೀತ ಏರಿಕೆಯಾಗಿದ್ದು, ಇದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ. ಈ ರೀತಿಯ ಅಕ್ರಮ ಬಿಪಿಎಲ್‌ ಕಾರ್ಡ್‌ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ರಾಜ್ಯಾದ್ಯಂತ ಶೋಧಕಾರ್ಯ ನಡೆಯುತ್ತಿದೆ.

ಯಾರು ಅರ್ಹರು?

ಇಲಾಖೆ ನಿರ್ದೇಶನ ಪ್ರಕಾರ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ನಾಲ್ಕು ಚಕ್ರದ ಬಿಳಿ ಬೋರ್ಡ್‌ನ ವಾಹನ ಹೊಂದಿದವರು, ಕುಟುಂಬದಲ್ಲಿ ಸರಕಾರಿ ನೌಕರರಿದ್ದರೆ, ಆದಾಯ ತೆರಿಗೆ ಪಾವತಿಸುವ ಕುಟುಂಬ, ಕುಟುಂಬವು ಸದ್ರಿ ವಿಳಾಸದಲ್ಲಿ ವಾಸ್ತವ್ಯವಿಲ್ಲದಿರುವುದು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದರೆ, 7.5 ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿದರೆ, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದರೆ, ನಗರ ಪ್ರದೇಶದಲ್ಲಿ1,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬ ಬಿಪಿಎಲ್‌ ಪಡೆಯಲು ಅವಕಾಶವಿಲ್ಲ. ಆದರೆ ನಿಯಮ ಮೀರಿ ಬಿಪಿಎಲ್‌ ಕಾರ್ಡ್‌ ಪಡೆದಿರುವುದು ಅಧಿಕಾರಿಗಳ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ.

ಅನರ್ಹರು ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಡಿಸಿ ಸೂಚನೆ

ರಾಜ್ಯ ಸರಕಾರ 2015ರಲ್ಲಿ ಮೆಸ್ಕಾಂ ಬಿಲ್‌(ಆರ್‌.ಆರ್‌. ನಂಬರ್‌) ಆಧಾರದ ಮೇಲೆ ಬಿಪಿಎಲ್‌ ಕಾರ್ಡ್‌ ನೀಡಿತ್ತು. ಆದರೆ ಆ ಬಳಿಕ ಬಂದ ರಾಜ್ಯ ಸರಕಾರ ಅದನ್ನು ರದ್ದು ಮಾಡಿ 1.20 ಲಕ್ಷ ರೂ. ವಾರ್ಷಿಕ ಆದಾಯವನ್ನು ಮಾನದಂಡವಾಗಿ ಮಾಡಿದ್ದು ಇದರಿಂದ ಇಲಾಖೆ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23,601 ಅಂತ್ಯೋದಯ, 2,43,703 ಬಿಪಿಎಲ್‌ ಕಾರ್ಡ್‌ಗಳಿದ್ದು, ಒಟ್ಟು 10,78,716 ಮಂದಿ ಫಲಾನುಭವಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರ್‌ಟಿಎ ದಾಖಲೆಯಿಂದ ಬಹಿರಂಗ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯ ಪಡೆದು ವಾಹನ ಮಾಲೀಕರ ದಾಖಲೆಗಳನ್ನು ಆರ್‌ಟಿಐನಲ್ಲಿ ಪಡೆದಾಗ ಅಕ್ರಮಗಳು ಬಯಲಾಗಿವೆ.

“24 ಲಕ್ಷ ಬೆಲೆಬಾ ಳುವ ದುಬಾರಿ ಕಾರು ಹೊಂದಿರುವವರು, ಸರಕಾರಿ ಉದ್ಯೋಗದಲ್ಲಿರುವವರು, ಒಂದೇ ಮನೆಯಲ್ಲಿಎರಡು ಬಿಪಿಎಲ್‌ ಕಾರ್ಡ್‌ ಪಡೆದವರು ಪತ್ತೆಯಾಗಿದ್ದಾರೆ,” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಬಿ.ಟಿ. ಮಂಜುನಾಥ್‌ ವಿವರ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ