ಆ್ಯಪ್ನಗರ

ಬಿಟ್‌ಕಾಯಿನ್‌ ದಂಧೆಯಲ್ಲಿ ಕಾಂಗ್ರೆಸ್‌ ನೇರ ಭಾಗಿ: ಬಿಜೆಪಿ

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಬಿಟ್‌ ಕಾಯಿನ್‌ ದಂಧೆ ನಡೆದಿದೆ. ಬಿಟ್‌ ಕಾಯಿನ್‌ ಹಗರಣದ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಈಗ ಅವರು ಹೇಳುತ್ತಿದ್ದಾರೆ. ಹಾಗಾದರೆ ಮಾಹಿತಿಯನ್ನು ಬಹಿರಂಗಪಡಿಸದೆ ಮುಚ್ಚಿಡುವುದು ಏತಕ್ಕೆ ?

Vijaya Karnataka 11 Nov 2021, 9:50 pm
ಮಂಗಳೂರು: ರಾಜ್ಯದಲ್ಲಿ ಬಿಟ್‌ಕಾಯಿನ್‌ ದಂಧೆಯ ಸುಳಿಯಲ್ಲಿ ಕಾಂಗ್ರೆಸ್‌ ನೇರವಾಗಿ ಭಾಗಿಯಾಗಿದ್ದು, ಜನರ ಹಾದಿ ತಪ್ಪಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರು ಇದನ್ನು ಬಿಜೆಪಿ ನಾಯಕರ ಮೇಲೆ ಕಟ್ಟಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್‌ ಕಾರ್ಣಿಕ್‌ ಆರೋಪಿಸಿದ್ದಾರೆ.
Vijaya Karnataka Web ಗಣೇಶ್‌ ಕಾರ್ಣಿಕ್‌
ಗಣೇಶ್‌ ಕಾರ್ಣಿಕ್‌


ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಟೆಲ್‌ನಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಕಾಂಗ್ರೆಸ್‌ ಮುಖಂಡ ಎನ್‌.ಎ.ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ವಿಚಾರಣೆ ಸಂದರ್ಭ ನೀಡಿರುವ ಹೇಳಿಕೆಯಲ್ಲಿ ಬಿಟ್‌ ಕಾಯಿನ್‌ ದಂಧೆ ಬಗ್ಗೆ ಉಲ್ಲೇಖವಿದೆ. ಬಿಟ್‌ಕಾಯಿನ್‌ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಲಮಾಣಿ ನಡುವೆ ಬಿಟ್‌ ಕಾಯಿನ್‌ ವ್ಯವಹಾರ ನಡೆದ ಬಗ್ಗೆ ಡ್ರಗ್ಸ್‌ ಪ್ರಕರಣ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಈ ವಿಚಾರ ಗೊತ್ತಿದ್ದೂ ಸಿದ್ದರಾಮಯ್ಯ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾರ್ಣಿಕ್‌ ಆರೋಪಿಸಿದರು.

ಕರಾವಳಿಯಲ್ಲಿ ಶೇಂದಿ ಉತ್ಪಾದನೆಯಲ್ಲಿ ಶೇ.90 ಕೊರತೆ: ಕೇರಳ ಟ್ಯಾಪರ್ಸ್ಗೆ ಹೆಚ್ಚಿದ ಬೇಡಿಕೆ

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಬಿಟ್‌ ಕಾಯಿನ್‌ ದಂಧೆ ನಡೆದಿದೆ. ಬಿಟ್‌ ಕಾಯಿನ್‌ ಹಗರಣದ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಈಗ ಅವರು ಹೇಳುತ್ತಿದ್ದಾರೆ. ಹಾಗಾದರೆ ಮಾಹಿತಿಯನ್ನು ಬಹಿರಂಗಪಡಿಸದೆ ಮುಚ್ಚಿಡುವುದು ಏತಕ್ಕೆ ? ಮಾಹಿತಿ ಇದ್ದರೆ ತಕ್ಷಣ ಬಹಿರಂಗಪಡಿಸಲಿ ಎಂದು ಸವಾಲೆಸೆದ ಕಾರ್ಣಿಕ್‌, ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.

ಹಾಲು ಬೇಕಾ, ನಾಣ್ಯ ತರಬೇಡಿ! ನಂದಿನಿ ಬೂತ್‌ಗಳಲ್ಲಿ ಹೊಸ ವರಸೆ! ಕಾಯಿನ್‌ ನಿರಾಕರಣೆಗೆ ಗ್ರಾಹಕರ ಆಕ್ರೋಶ

ಬಿಟ್‌ ಕಾಯಿನ್‌ ವಿಚಾರ ಮುಂದಿಟ್ಟು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್‌ ಹೊರಟಿದೆ. ಮುಖ್ಯಮಂತ್ರಿ ಸ್ಥಾನ ನಿರ್ವಹಿಸಿದ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ನಿರಂತರ ಪ್ರಚಾರದ ಹಪಹಪಿತನದಿಂದ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. 2018ರ ಘಟನೆಯಲ್ಲಿ ಸಿದ್ದರಾಮಯ್ಯ ಅವರಿಗೆ ನೇರ ಸಂಬಂಧ ಇದೆ. ಈ ಬಗ್ಗೆ ಮಾಹಿತಿ ಇದ್ದರೂ, ನಿಮ್ಮ ಅವಧಿಯಲ್ಲಿ ಪ್ರಕರಣವನ್ನು ಮುಚ್ಚಿಹಾಕಿದ್ದೀರಿ. ಈಗ ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ. ಮಾಹಿತಿ ಇದ್ದೂ ಪೊಲೀಸರಿಗೆ ನೀಡದಿರುವುದು ಅಪರಾಧ ಎಂದರು ಎಂದು ಕಾರ್ಣಿಕ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ಜಗದೀಶ ಶೇಣವ, ರಾಧಾಕೃಷ್ಣ, ಮಾಧ್ಯಮ ಸಂಯೋಜಕ ರಣದೀಪ್‌ ಕಾಂಚನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ