ಆ್ಯಪ್ನಗರ

ಮಹಾರಾಷ್ಟ್ರದಿಂದ ಬಂದಿದ್ದವನ ಮೊಬೈಲ್‌ ಮುಟ್ಟಿದ್ದರಿಂದ ಪೊಲೀಸ್‌ಗೆ ತಗುಲಿದ ಕೊರೊನಾ ಸೋಂಕು?

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಆತಂಕಕ್ಕೆ ಕಾರಣವಾಗಿದೆ. ಎಲ್ಲದಕ್ಕೂ ಮಹಾರಾಷ್ಟ್ರದ ಲಿಂಕ್‌ ಇದ್ದು, ಮೊಬೈಲ್‌ ಮುಟ್ಟಿದ್ದರಿಂದ ಸೋಂಕು ಹರಡಿರುವ ಸಾಧ್ಯತೆಯೂ ಕಂಡು ಬಂದಿದೆ/

Vijaya Karnataka Web 25 May 2020, 7:57 am
ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯಲ್ಲಿ ಮೂವರು ಮತ್ತು ದ.ಕನ್ನಡದಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗುಲಿದ್ದು, ನಾಲ್ಕೂ ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ ನೂರಾರು ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಬೇಕಾಗಿದೆ.
Vijaya Karnataka Web Police Personnel


ಉಡುಪಿ ಜಿಲ್ಲೆ ಅಜೆಕಾರು ಠಾಣೆಯ ಎಎಸ್‌ಐ, ಕಾರ್ಕಳ ಗ್ರಾಮಾಂತರ ಹಾಗೂ ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಸೋಂಕಿಗೆ ಒಳಗಾಗಿದ್ದಾರೆ. ಪೊಲೀಸರಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಅಧಿಕಾರಿಗಳು, ಪೊಲೀಸರು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಪಾಸಿಟಿವ್‌ ಪತ್ತೆಯಾದ ಮೂವರು ಪೊಲೀಸ್‌ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಉಡುಪಿಯ ಡಾ. ಟಿಎಂಎ ಪೈ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಠಾಣೆಯ ಕಟ್ಟಡವನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಎರಡು ದಿನಗಳ ಬಳಿಕ (48 ಗಂಟೆ) ಠಾಣೆ ಕಾರ್ಯಾರಂಭಿಸಲಿದೆ.

ಉಡುಪಿ ಜಿಲ್ಲೆಗೆ ಮುಂಬಯಿಯಿಂದ ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಿದ್ದು, ಅವರ ದಾಖಲೆ ಪರಿಶೀಲನೆ, ಕ್ವಾರಂಟೈನ್‌ ವ್ಯವಸ್ಥೆ ಮಾಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ಪೊಲೀಸರಿಗೆ 'ಯು ಆರ್‌ ಅಂಡರ್‌ ಕ್ವಾರಂಟೈನ್‌' ಎನ್ನುತ್ತಿರುವ ಕೊರೊನಾ ಸೋಂಕು!

ಮೊಬೈಲ್‌ನಿಂದ ಬಂತಾ?
ದ.ಕ.ದ ವಿಟ್ಲ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ಗೆ ಸೋಂಕು ತಗುಲಿದ್ದು, ಸುರಕ್ಷತಾ ಕ್ರಮವಾಗಿ ವಿಟ್ಲ ಠಾಣಾಧಿಕಾರಿ ಸೇರಿದಂತೆ 13 ಪೊಲೀಸ್‌ ಸಿಬ್ಬಂದಿ ಸಹಿತ 20 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮೇ 15ಕ್ಕೆ ಮಹಾರಾಷ್ಟ್ರದಿಂದ ದೇರಳಕಟ್ಟೆಗೆ ಬಂದ ವ್ಯಕ್ತಿಯೊಬ್ಬರು ವಿಟ್ಲ ಠಾಣೆಗೆ ಬಂದಿದ್ದರು. ಈ ವೇಳೆ ಕಾನ್‌ಸ್ಟೇಬಲ್‌ ಒಬ್ಬರು ಆ ವ್ಯಕ್ತಿಯ ಮೊಬೈಲ್‌ ಬಳಸಿ ಕ್ವಾರಂಟೈನ್‌ಗೆ ಒಳಪಡಬೇಕಾದ ಹಾಸ್ಟೆಲ್‌ಗೆ ಸಂಬಂಧಿಸಿದವರಿಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಸೋಂಕು ತಗುಲಿರಬಹುದು ಎಂಬ ಶಂಕೆ ಇದೆ.

ತರಬೇತಿ ಕೇಂದ್ರವೇ ಕ್ವಾರಂಟೈನ್‌
ಕರ್ತವ್ಯ ನಿಮಿತ್ತ ಇಲಾಖಾ ವಾಹನದಲ್ಲಿ ಬೆಂಗಳೂರಿಗೆ ಹೋಗಿ ಬಂದಿದ್ದ ಹಾಸನದ ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ಗೆ ಸೋಂಕು ತಗುಲಿದೆ. ಅವರು ಪಾದರಾಯನಪುರ, ರಾಮನಗರ ಎಪಿಎಂಸಿ, ಮುತ್ತಪ್ಪ ರೈ ಅಂತ್ಯಸಂಸ್ಕಾರದ ವೇಳೆ ಕರ್ತವ್ಯ ನಿರ್ವಹಿಸಿದ್ದರು. 95 ಪ್ರಾಥಮಿಕ ಸಂಪರ್ಕ ಗುರುತಿಸಲಾಗಿದೆ. ಹೀಗಾಗಿ ಗಾಡೇನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರವನ್ನೇ ಕ್ವಾರಂಟೈನ್‌ ಮಾಡಲು ತೀರ್ಮಾನಿಸಲಾಗಿದೆ.

ಉಡುಪಿ: ಕಾರ್ಕಳದಲ್ಲಿ ಇಬ್ಬರು ಪೊಲೀಸರಿಗೆ ಕೊರೊನಾ ದೃಢ‌; ಸಿಐ ಕಚೇರಿ, 3 ಠಾಣೆ ಸೀಲ್‌ಡೌನ್!

ತುಂಬು ಗರ್ಭಿಣಿಗೆ ಸೋಂಕು
ಕಾರ್ಕಳ ತಾಲೂಕಿನ ತುಂಬು ಗರ್ಭಿಣಿಯೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಆ ಮಹಿಳೆಗೆ ಕೊರೊನಾ ಎಲ್ಲಿಂದ ಬಂದಿದೆ?, ಹೇಗೆ ಬಂದಿದೆ?, ಯಾವ ಸಂಪರ್ಕದಿಂದ ಎನ್ನುವುದನ್ನು ಪತ್ತೆ ಮಾಡಬೇಕಿದೆ. ಮುಂದಿನ 10-15 ದಿನಗಳಲ್ಲಿ ಆಕೆಯ ಹೆರಿಗೆ ಆಗಬೇಕಿದೆ. ಆಕೆಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ ಅವರನ್ನು ಕ್ವಾರಂಟೈನ್‌ನಲ್ಲಿ ಇಡುವ ವ್ಯವಸ್ಥೆ ಮಾಡುತ್ತೇವೆ. ಅಲ್ಲದೇ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿ ಜಿಲ್ಲಾಡಳಿತದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ