ಆ್ಯಪ್ನಗರ

ಪುತ್ತೂರು: ರಾಜಕೀಯ ಗುರು ರಾಮ ಭಟ್ ಆಶೀರ್ವಾದ ಪಡೆದ ಡಿವಿಎಸ್

ಕಳೆದೆರಡು ಮೂರು ವರ್ಷಗಳಿಂದ ಬಿಜೆಪಿ ನಾಯಕತ್ವದ ಜತೆಗಿನ ಮುನಿಸು ಕಡಿಮೆ ಮಾಡಿಕೊಂಡಿದ್ದ ರಾಮ ಭಟ್ ಅವರನ್ನು ಕೆಲ ದಿನಗಳ ಹಿಂದಷ್ಟೇ ನೂತನ ಸಚಿವ ಅಂಗಾರ ಅವರೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.

Vijaya Karnataka Web 19 Jan 2021, 2:55 pm
ಪುತ್ತೂರು: ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಅವರು ತಮ್ಮ ರಾಜಕೀಯ ಗುರು ಉರಿಮಜಲ್ ರಾಮ ಭಟ್ ಅವರ ಪುತ್ತೂರಿನ ನಿವಾಸಕ್ಕೆ ಮಂಗಳವಾರ ತೆರಳಿ ಆಶೀರ್ವಾದ ಪಡೆದರು.
Vijaya Karnataka Web ಡಿವಿ ಸದಾನಂದಗೌಡ, ರಾಮಭಟ್
ಡಿವಿ ಸದಾನಂದಗೌಡ, ರಾಮಭಟ್


ಮಂಗಳವಾರ ಪುತ್ತೂರಿಗೆ ಬಂದಿದ್ದ ಡಿವಿಎಸ್, ಕೊಂಬೆಟ್ಟುವಿನಲ್ಲಿರುವ ಭಟ್ ನಿವಾಸಕ್ಕೆ ತೆರಳಿ, ವಯೋವೃದ್ಧ ಗುರುವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಶಿಷ್ಯನ ಜತೆ ಕೆಲ ಹೊತ್ತು ಕುಶಲೋಪರಿ ಮಾತನಾಡಿದ ಭಟ್, ಆಶೀರ್ವದಿಸಿದರು.

ಕೆಲ ತಿಂಗಳುಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ರಾಮ ಭಟ್ ಅವರಿಗೆ ಫೋನ್ ಮಾಡಿ ಮಾತನಾಡಿದ್ದರು.

ಜನಸಂಘ ಸ್ಥಾಪನೆ ಕಾಲದಿಂದಲೂ ಸಂಘ ಸಿದ್ಧಾಂತಿಯಾಗಿದ್ದುಕೊಂಡು, 1956-57ರ ಚುನಾವಣೆಯಿಂದಲೇ ಪುತ್ತೂರಿನಲ್ಲಿ ಜನಸಂಘದಿಂದ ಸ್ಪರ್ಧಿಸುತ್ತಾ ಬಂದಿದ್ದು, ಎರಡು ಬಾರಿ ಪುತ್ತೂರಿನಲ್ಲಿ ಶಾಸಕರಾಗಿದ್ದ ರಾಮ ಭಟ್ ಅವರು, ಡಿ.ವಿ. ಸದಾನಂದ ಗೌಡರನ್ನು ಸುಳ್ಯದಿಂದ ಕರೆತಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಣದಿಂದ ಸ್ಪರ್ಧೆಗೆ ಇಳಿಸಿದ್ದರು.

1989ರ ಚುನಾವಣೆಯಲ್ಲಿ ಪರಾಜಯಗೊಂಡ ಡಿವಿಎಸ್, 1994 ಮತ್ತು 1999ರಲ್ಲಿ ಗೆದ್ದಿದ್ದರು. 2004ರಲ್ಲಿ ಮಂಗಳೂರು ಸಂಸದರಾಗಿ, ನಂತರ ಉಡುಪಿ ಸಂಸದರಾಗಿ, ಮುಖ್ಯಮಂತ್ರಿಯೂ ಅದರು. ನಂತರ ಕರಾವಳಿಯನ್ನು ಬಿಟ್ಟು ರಾಜಧಾನಿ ಅರಿಸಿಕೊಂಡ ಡಿವಿಎಸ್, ಬೆಂಗಳೂರು ಉತ್ತರ ಕ್ಷೇತ್ರದ ಸಂದರಾದರು.

2008ರಲ್ಲಿ ಆಗಿನ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿಗೆ ಎರಡನೇ ಬಾರಿ ಟಿಕೆಟ್ ನಿರಾಕರಣೆ ಮಾಡಿದ ವಿಚಾರದಲ್ಲಿ, ಉರಿಮಜಲ್ ರಾಮ ಭಟ್ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೆದ್ದು, ಸ್ವಾಭಿಮಾನಿ ವೇದಿಕೆ ರಚಿಸಿದ್ದರು. ಇದೇ ವೇದಿಕೆ ಅಡಿಯಲ್ಲಿ ಶಕುಂತಳಾ ಶೆಟ್ಟಿ 2008ರಲ್ಲಿ ಪಕ್ಷೇರರರಾಗಿ ಪುತ್ತೂರಿನಿಂದ ಸ್ಪರ್ಧಿಸಿದ್ದರು.

ರಾಮ ಭಟ್ ಕೂಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಶಕುಂತಳಾ ಶೆಟ್ಟಿ 2013ರಲ್ಲಿ ಕಾಂಗ್ರೆಸ್ ಸೇರಿ ಗೆದ್ದು ಶಾಸಕರಾದ ಬಳಿಕ ಸುಮ್ಮನಾಗಿದ್ದ ರಾಮ ಭಟ್, ಆಂತರಿಕವಾಗಿ ಬಿಜೆಪಿ ನಾಯಕತ್ವದ ವಿರುದ್ಧ ಆಕ್ರೋಶವಿಟ್ಟುಕೊಂಡಿದ್ದರು.

ಕಳೆದೆರಡು ಮೂರು ವರ್ಷಗಳಿಂದ ಬಿಜೆಪಿ ನಾಯಕತ್ವದ ಜತೆಗಿನ ಮುನಿಸು ಕಡಿಮೆ ಮಾಡಿಕೊಂಡಿದ್ದ ರಾಮ ಭಟ್ ಅವರನ್ನು ಕೆಲ ದಿನಗಳ ಹಿಂದಷ್ಟೇ ನೂತನ ಸಚಿವ ಅಂಗಾರ ಅವರೂ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ