ಆ್ಯಪ್ನಗರ

ಕೊಡಗು ದುರಂತಕ್ಕೆ ಹತ್ತು ತಿಂಗಳು: ನಿರಾಶ್ರಿತರಿಗೆ ಇನ್ನೂ ಹಂಚಿಕೆಯಾಗದ ಮನೆ

ಜೂನ್‌ ಮೊದಲ ಅಥವಾ ಎರಡನೇ ವಾರದಲ್ಲಿ ಮುಂಗಾರು ಮಳೆ ಪ್ರವೇಶವಾಗಲಿದ್ದು ಆ ವೇಳೆಗಾದರೂ ನಿರಾಶ್ರಿತರಾದ ಹಲವಾರು ಕುಟುಂಬಗಳಿಗೆ ಮನೆ ಹಂಚಿಕೆ ಕಾರ್ಯ ನಡೆಯಬೇಕಾಗಿದೆ.

Vijaya Karnataka Web 25 May 2019, 3:27 pm
ಗಿರೀಶ್‌ ಸುಳ್ಯ
Vijaya Karnataka Web Coorg

ಕಳೆದ ವರ್ಷದ ಆಗಸ್ಟ್‌ನಲ್ಲಿ ಸುರಿದ ಭೀಕರ ಮಳೆಯಿಂದಾಗಿ ಜಲಪ್ರವಾಹ ಸಂಭವಿಸಿ, ಸೂರು ಕಳೆದುಕೊಂಡು ನಿರಾಶ್ರಿತರಾದ ಜೋಡುಪಾಲ, ಎರಡನೇ ಮೊಣ್ಣಂಗೇರಿಯ ನಿವಾಸಿಗಳಿಗೆ ರಾಜ್ಯ ಸರಕಾರದಿಂದ ಮದೆನಾಡು ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಿಂದ ಮದೆನಾಡು ಗ್ರಾಮದ ಕಾಟಿಗೇರಿ ಸರಕಾರಿ ಹಿ.ಪ್ರಾ. ಶಾಲೆಯ ಹಿಂಬದಿಯಾಗಿ ಬೆಟ್ಟಗೇರಿ ಸಂಪರ್ಕ ರಸ್ತೆಯಲ್ಲಿ ಕಾಟಿಗೇರಿಯಿಂದ ಸುಮಾರು 3 ಕಿ.ಮೀ. ದೂರದ ಗೋಳಿಕಟ್ಟೆ ಎಂಬಲ್ಲಿ ನಿರಾಶ್ರಿತರಾದವರಿಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜ್ಯ ಸರಕಾರದಿಂದ ಒಂದು ಮನೆ ನಿರ್ಮಾಣ ಕಾರ್ಯಕ್ಕೆ 9.85 ಲಕ್ಷ ರೂ. ಮಂಜೂರುಗೊಂಡಿದ್ದು, ಮದೆನಾಡು ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಸುಮಾರು 11 ಎಕರೆ ಸರಕಾರಿ ಜಾಗವನ್ನು ಪುನರ್ವಸತಿಗಾಗಿ ಕೊಡಗು ಜಿಲ್ಲಾಡಳಿತ ವಶಕ್ಕೆ ಪಡೆದಿದ್ದು, ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸುಮಾರು 50ಕ್ಕೂ ಅಧಿಕ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನೆಲಕ್ಕೆ ಟೈಲ್ಸ್‌ ಅಳವಡಿಕೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಉಳಿದ 50ಕ್ಕೂ ಅಧಿಕ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಪ್ರಕೃತಿ ದುರಂತ ಸಂಭವಿಸಿ ವರ್ಷವಾಗುತ್ತಾ ಬರುತ್ತಿದೆ. ಸಂಪೂರ್ಣ ಮನೆ ಕಳೆದುಕೊಂಡು ನಿರಾಶ್ರಿತರಾದ ಹಲವಾರು ಮಂದಿ ಕಲ್ಲುಗುಂಡಿ ಶಾಲೆ ಹಾಗೂ ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಬಳಿಕ ರಾಜ್ಯ ಸರಕಾರದ ಆದೇಶದಂತೆ ನಿರಾಶ್ರಿತರಾದ ಕೆಲವರು ಕಲ್ಲುಗುಂಡಿ, ಕೊಡಗು ಸಂಪಾಜೆ, ಕೊಯನಾಡು ಪರಿಸರದಲ್ಲಿ ಬಾಡಿಗೆ ರೂಂ ಮಾಡಿ ಜೀವನ ನಡೆಸುತ್ತಿದ್ದು, ತಿಂಗಳ ಬಾಡಿಗೆ ವೆಚ್ಚವನ್ನು ರಾಜ್ಯ ಸರಕಾರ ಭರಿಸುತ್ತಿದೆ.

ನಿರಾಶ್ರಿತರಾದ ಜೋಡುಪಾಲದ ನಾಲ್ಕು ಕುಟುಂಬ ಹಾಗೂ ಎರಡನೇ ಮೊಣ್ಣಂಗೇರಿಯ ಒಂದು ಕುಟುಂಬದ ಒಟ್ಟು ಇಪ್ಪತ್ತು ಜನರು ಕಲ್ಲುಗುಂಡಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು, ರಾಜ್ಯ ಸರಕಾರದಿಂದ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.

ಗೋಳಿಕಟ್ಟೆ ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಮನೆಗಳನ್ನು ಜೋಡುಪಾಲ, ಮದೆನಾಡು, ಎರಡನೇ ಮೊಣ್ಣಂಗೇರಿ, ಕಾಟಿಗೇರಿ, ಸಂಪಾಜೆ, ಕರ್ತೋಜಿ ಪರಿಸರಗಳಲ್ಲಿ ಭೂಕುಸಿತದಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡವರಿಗೆ ನೀಡಲು ಉದ್ದೇಶಿಸಲಾಗಿದೆ. ಎರಡನೇ ಮೊಣ್ಣಂಗೇರಿ ಪರಿಸರದಲ್ಲಿ ಮನೆ ಕಳೆದುಕೊಂಡವರಲ್ಲಿ ಕೇವಲ 50 ಮಂದಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ನಿರಾಶ್ರಿತರಲ್ಲಿ ಆತಂಕ ಎದುರಾಗಿದೆ.

ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮದೆನಾಡು ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಸಮತಟ್ಟಾದ 11 ಎಕರೆ ಪ್ರದೇಶದಲ್ಲಿ ಒಂದು ಮನೆಗೆ 9.85 ಲಕ್ಷ ರೂ. ವೆಚ್ಚದಂತೆ ನಿರ್ಮಾಣಗೊಳ್ಳುತ್ತಿರುವ ಮನೆಯಲ್ಲಿ ಹೊರಾಂಗಣ ಕೋಣೆ, ಎರಡು ಬೆಡ್‌ರೂಂ, ಅಡುಗೆ ಕೋಣೆ, ಸ್ನಾನಗೃಹ ಹಾಗೂ ಶೌಚಾಲಯದ ವ್ಯವಸ್ಥೆಯಿದ್ದು , ಬಾಗಿಲು, ಕಿಟಕಿ, ವಿದ್ಯುತ್‌ ಸಂಪರ್ಕ, ಚರಂಡಿ ಸೇರಿದಂತೆ ಮೂಲಸೌಲಭ್ಯಗಳ ಕಾಮಗಾರಿ ಬಾಕಿಯಿದೆ. ಸಮತಟ್ಟಾದ ಪ್ರದೇಶವಾದ್ದರಿಂದ ನೀರಿಗಾಗಿ ಬೋರ್‌ವೆಲ್‌ ವ್ಯವಸ್ಥೆ ಮಾಡಲಾಗಿದ್ದು ಸಮೀಪದಲ್ಲೇ ಹಲವಾರು ಕೆರೆಗಳಿವೆ.

ಸಂಪಾಜೆಯಿಂದ ಮಡಿಕೇರಿವರೆಗಿನ ರಸ್ತೆ ಕಳೆದ ಮಳೆಗಾಲದಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ಹಲವು ಕಡೆ ತುಂಡರಿಸಲ್ಪಟ್ಟಿತ್ತು. ಮತ್ತೆ ಕೆಲವು ಕಡೆಗಳಲ್ಲಿ ಭೂಕುಸಿತದಿಂದ ರಸ್ತೆಯ ಮೇಲೆ ಮಣ್ಣು ಬಿದ್ದು ಡಾಮರೀಕರಣ ಎದ್ದು ಹೋಗಿತ್ತು. ಇದೀಗ ಮತ್ತೆ ಸಂಪಾಜೆಯಿಂದ ಮಡಿಕೇರಿಯವರೆಗೆ ರಸ್ತೆಗೆ ಮಣ್ಣು ಹಾಕಿ, ಮರು ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಚರಂಡಿಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರೆ ಹಲವು ಕಡೆಗಳಲ್ಲಿ ಕಳೆದ ಬಾರಿ ಸುರಿದ ಮಳೆಗೆ ಭೂಕುಸಿತಗೊಂಡ ಪ್ರದೇಶಗಳಲ್ಲಿ ಈ ಬಾರಿಯೂ ಮಳೆಗಾಲದಲ್ಲಿ ಮತ್ತೆ ಭೂಕುಸಿತವಾಗುವ ಭೀತಿಯಲ್ಲಿವೆ. ಇದಕ್ಕೆ ಕೊಡಗು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.

ಜೂನ್‌ ಮೊದಲ ಅಥವಾ ಎರಡನೇ ವಾರದಲ್ಲಿ ಮುಂಗಾರು ಮಳೆ ಪ್ರವೇಶವಾಗಲಿದ್ದು ಆ ವೇಳೆಗಾದರೂ ನಿರಾಶ್ರಿತರಾದ ಹಲವಾರು ಕುಟುಂಬಗಳಿಗೆ ಮನೆ ಹಂಚಿಕೆ ಕಾರ್ಯ ನಡೆಯಬೇಕಾಗಿದೆ.

ಕಳೆದ ಮಳೆಗಾಲದಲ್ಲಿ ಪ್ರಕೃತಿ ದುರಂತದಿಂದ ಮನೆಗಳನ್ನು ಕಳೆದುಕೊಂಡಿದ್ದೇವೆ. ಕೂಡಲೇ ಮನೆಗಳ ಕಾಮಗಾರಿ ಪೂರ್ಣಗೊಳಿಸಿ, ಹಸ್ತಾಂತರಿಸಬೇಕು.
ರಾಮಕೃಷ್ಣ ಜೋಡುಪಾಲ, ನಿರಾಶ್ರಿತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ