ಆ್ಯಪ್ನಗರ

ಬಂಟ್ವಾಳದ ರಸ್ತೆಗಳಲ್ಲಿ ನೆರೆ ನೀರು, ಶಾಲೆಗಳಿಗೆ ರಜೆ, ಸುಬ್ರಹ್ಮಣ್ಯದಲ್ಲಿ ಮುಳುಗಿದ ಮನೆಗಳು

ಬಂಟ್ವಾಳದ ತಗ್ಗು ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಪಾಣೆಮಂಗಳೂರಿನ ಆಲಡ್ಕ ಸಹಿತ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿದೆ.

Vijaya Karnataka 16 Aug 2018, 1:09 pm
ಬಂಟ್ವಾಳ: ಭಾರಿ ಮಳೆಯಿಂದಾಗಿ ಬಂಟ್ವಾಳದ ತಗ್ಗು ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಪಾಣೆಮಂಗಳೂರಿನ ಆಲಡ್ಕದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿದೆ. ಬಂಟ್ವಾಳ, ಸುಳ್ಯ ಶಾಲೆಗಳಿಗೆ ರಜೆ ನೀಡಲಾಗಿದೆ.
Vijaya Karnataka Web flood water in bantwal roads
ಬಂಟ್ವಾಳದ ರಸ್ತೆಗಳಲ್ಲಿ ನೆರೆ ನೀರು, ಶಾಲೆಗಳಿಗೆ ರಜೆ, ಸುಬ್ರಹ್ಮಣ್ಯದಲ್ಲಿ ಮುಳುಗಿದ ಮನೆಗಳು


ಬೆಳಗ್ಗೆ ಭಾರಿ ಮಳೆ ಸುರಿಯಲಾರಂಭಿಸಿದ್ದು, ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ತಹಶೀಲ್ದಾರ್ ಪುರಂದರ ಹೆಗ್ಡೆ ರಜೆ ಘೋಷಿಸಿದ್ದಾರೆ. ನೇತ್ರಾವತಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, 9 ಮೀಟರ್‌ಗೆ ಏರಿದೆ. ಮಳೆಯಿಂದಾಗಿ ವಿದ್ಯುತ್ ಪೂರೈಕೆಯೂ ಆಗಾಗ ಸ್ಥಗಿತಗೊಳ್ಳುತ್ತಿದ್ದು, ಬಂಟ್ವಾಳದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿಯಿಂದ ಶಿರಾಡಿವರೆಗಿನ ಪ್ರದೇಶ ಮತ್ತು ಕಡಬ ಭಾಗದ ಶಾಲೆಗಳು ಎಸ್ ಡಿಎಂಸಿ ನಿರ್ಣಯದ ಆಧಾರದಲ್ಲಿ ಇವತ್ತು ರಜೆ ನೀಡಬಹುದು ಎಂದು ತಹಸೀಲ್ದಾರ್ ಅನಂತ ಶಂಕರ್ ತಿಳಿಸಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ. ಎನ್. ತಿಳಿಸಿದ್ದಾರೆ

ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ನದಿ ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಬಳಂಜ ಗ್ರಾಮಸ್ಥರಿಗೆ ಎರಡು ಕಡೆ ರಸ್ತೆ ಕುಸಿದು ಹೊರಗೆ ಬರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಂಗಳೂರು ಸಮೀಪದ ನೇತ್ರಾವತಿ ನದಿ ಬಳಿಯ ಕಲ್ಲಾಪು ಮತ್ತು ಉಳಿಯ ಶಾಲೆಗಳಿಗೆ ರಜೆ ಸಾರಲಾಗಿದೆ.


ಸುಬ್ರಹ್ಮಣ್ಯ ಕುಲ್ಕುಂದ ಕುದುರೆಮಜಲು ಎಂಬಲ್ಲಿ ಸುಮಾರು 15 ಕುಟುಂಬಗಳ ಮನೆಗಳು ಮುಳುಗಡೆಯಾಗಿದ್ದು, ಮಧ್ಯರಾತ್ರಿ ಅಧಿಕಾರಿಗಳು ಧಾವಿಸಿ ಅವರನ್ನು ಸಮೀಪದ ಶಾಲೆಗೆ ಸ್ಥಳಾಂತರಿಸಿ ಆಶ್ರಯ ನೀಡಿದ್ದಾರೆ. ಅಧಿಕಾರಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗುರಿಂಗಾನದ ಸೋಮಾವತಿ ನದಿ ತಟದಲ್ಲಿರುವ ಸುಮಾರು ಏಳು ಮನೆಗಳು, ಗಾಂಧಿ ನಗರದಲ್ಲಿರುವ ಏಳು ಮನೆಗಳು ಹಾಗೂ ಪುತ್ರಬೈಲಿನ ಎರಡು ಮನೆಗಳು ಸೇರಿದಂತೆ ಸುಮಾರು ಹದಿನೈದು ಮನೆಗಳು ನೆರೆ ಹಾವಳಿಯ ಭೀತಿಯನ್ನು ಎದುರಿಸುತ್ತಿವೆ. ನದಿಯ ಬದಿಯಲ್ಲಿರುವ ಮನೆಯವರನ್ನು ಸ್ಥಳಾಂತರಿಸಲಾಗಿದೆ. ತಾಲೂಕಿನ ನದಿಗಳ ಹರಿವು ಅಪಾಯ ಮಟ್ಟಕ್ಕಿಂತ ಹೆಚ್ಚಾಗಿದೆ. ಕೃಷಿ ತೋಟಗಳಿಗೆ ನೀರು ನುಗ್ಗಿದೆ.ನಿರಂತರ ಮಳೆಯಿಂದ ಜನ ಸಂಚಾರ ವಿರಳವಾಗಿದ್ದು, ಗ್ರಾಮೀಣ ಪ್ರದೇಶಕ್ಕೆ ಹೋಗುವ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದೆ.

ಬೆಳ್ತಂಗಡಿಯ ಕೆಲವೊಂದು ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು ಹೆಚ್ಚಿನ ಶಾಲಾ ಕಾಲೇಜುಗಳು ತೆರೆದಿದ್ದವು. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ತಹಸೀಲ್ದಾರರ ಆಧಿಕೃತ ಆದೇಶಲ್ಲದ ಕಾರಣ ರಜೆ ನೀಡಿರಲಿಲ್ಲ. ಇದೀಗ ಮಳೆ ಹೆಚ್ಚಾಗಿರುವ ಕಾರಣ ಕೆಲವು ಶಾಲಾ ಕಾಲೇಜುಗಳ ಸಂಸ್ಥೆ ಗಳೇ ಮಧ್ಯಾಹ್ನ ರಜೆ ನೀಡಿವೆ.

ನೇತ್ರಾವತಿ, ಕುಮಾರಧಾರ ನದಿಗಳು ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ವರ್ಷ ಎರಡನೇ ಬಾರಿ ಸಂಗಮವಾಗಿವೆ. ಆದರೆ ದೇವಾಲಯದಲ್ಲಿ ಗಂಗಾ ಪೂಜೆ ಇನ್ನಷ್ಟೇ ನಡೆಯಬೇಕಾಗಿದ್ದು, ದೇವಾಲಯದ ಅಂಗಣದ ಕೊಡಿಮರದ ಬಳಿ ನೀರು ತೆರಳಲು ಕಾಯಲಾಗುತ್ತಿದೆ.
ಉಭಯ ನದಿಗಳಲ್ಲಿ ನೀರು ಏರುತ್ತಲೇ ಇದ್ದು, ಉಪ್ಪಿನಂಗಡಿ ಪೇಟೆಗೆ ನೀರು ನುಗ್ಗಿ ಅಪಾಯವುಂಟಾಗುವ ಸಾಧ್ಯತೆನೂ ಹೆಚ್ಚಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ