ಆ್ಯಪ್ನಗರ

ಇವಿಎಂ ವಿರುದ್ಧ ಹೈಕೋರ್ಟ್‌ಗೆ: ಮಾಜಿ ಶಾಸಕ ಜೆ.ಆರ್‌ ಲೋಬೊ

ತಾವು ಪ್ರತಿನಿಧಿಸುತ್ತಿದ್ದ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ತನಗೆ ಇವಿಎಂ ಬಗ್ಗೆ ಸಂಶಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ರವೀಂದ್ರ ಕಾಮತ್ ಅಸೋಸಿಯೇಟ್ಸ್ ಮೂಲಕ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.

Vijaya Karnataka Web 2 Jun 2018, 9:47 pm
ಮಂಗಳೂರು: ತಾವು ಪ್ರತಿನಿಧಿಸುತ್ತಿದ್ದ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ತನಗೆ ಇವಿಎಂ ಬಗ್ಗೆ ಸಂಶಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ರವೀಂದ್ರ ಕಾಮತ್ ಅಸೋಸಿಯೇಟ್ಸ್ ಮೂಲಕ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದರು.
Vijaya Karnataka Web Lobo


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಇದರಲ್ಲಿ ಯಶಸ್ವಿ ಆಗುತ್ತೇನಾ ಗೊತ್ತಿಲ್ಲ. ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರುತ್ತೇನೆ. ಚುನಾವಣೆ ಪ್ರಕ್ರಿಯೆ ಬಗ್ಗೆ ಜನರಿಗೆ ವಿಶ್ವಾಸ ಇರಬೇಕು. ಚುನಾವಣಾ ಆಯೋಗ ಜನರಲ್ಲಿ ವಿಶ್ವಾಸ ತುಂಬಬೇಕಾದರೆ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು ಎಂದರು.

ನೆರೆ ಅನಾಹುತ ಆರೋಪಗಳಿಗೆ ಆಕ್ಷೇಪ:

ಮಂಗಳೂರಿನಲ್ಲಿ ಭಾರಿ ಮಳೆ, ನೆರೆ ಅನಾಹುತಗಳಿಗೆ ಹಿಂದಿನ ಶಾಸಕರೇ ಕಾರಣ ಎಂಬ ಪ್ರತಿಪಕ್ಷ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಆರೋಪಗಳಿಗೆ ಶಾಸಕ ಜೆ.ಆರ್. ಲೋಬೊ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಕನಿಷ್ಠ ಜ್ಞಾನವಿಲ್ಲದವರ ಹೇಳಿಕೆ ಎಂದು ಪ್ರತಿಕ್ರಿಯಿಸಿದ್ದಾರೆ.

ಆರು ಗಂಟೆಯಲ್ಲಿ 24 ಸೆಂ.ಮೀ. ಮಳೆಯಾದಾಗ ಯಾವ ನಗರ ಕೂಡಾ ತತ್ತರಿಸುವುದು ಸಾಮಾನ್ಯ. ಇದು 1974ರ ನಂತರ ಬಂದ ಮಹಾಮಳೆ ಎಂದು ಈಗಾಗಲೇ ಹವಾಮಾನ ಇಲಾಖೆ ಸಹಿತ ಜಿಲ್ಲಾಧಿಕಾರಿ ಹೇಳಿದ್ದಾರೆ. ನೆರೆ ಬಂದಾಗ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅತ್ಯುತ್ತಮ ಕೆಲಸ ಮಾಡಿರುವುದು ಶ್ಲಾಘನೀಯ. ಹೀಗಿರುವಾಗ ಹಿಂದಿನ ಶಾಸಕರ ಅಭಿವೃದ್ಧಿಯ ಪ್ರತಿಫಲ ಎಂಬ ಟೀಕೆ ಬಾಲಿಶ ಎಂದು ಅವರು ಹೇಳಿದರು.

ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವುದು ಜನಪ್ರತಿನಿಧಿಗಳ ಜವಾಬ್ದಾರಿ. ಅದನ್ನು ನಾನು ಐದು ವರ್ಷದಲ್ಲಿ ಸಮರ್ಥವಾಗಿ ಮಾಡಿದ್ದೇನೆ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಅಧಿಕಾರಿಗಳ ಕರ್ತವ್ಯ. ಇದು ಮಂಗಳೂರು ನಗರದ ಕಾಮಗಾರಿಗಳ ಸಹಿತ ಕೇಂದ್ರ ಸರಕಾರದಿಂದ ಮಾಡಿರುವ ಕೊಟ್ಟಾರ, ಪಂಪ್‌ವೆಲ್, ಪಡೀಲ್ ಮತ್ತು ಬಜಾಲ್ ಮೇಲ್ಸೇತುವೆ, ಕೆಳಸೇತುವೆಗಳಿಗೂ ಅನ್ವಯಿಸುತ್ತದೆ. ಅಲ್ಲಿಯ ನೆರೆ ಅವಾಂತರಗಳಿಗೆ ನಳಿನ್ ಕುಮಾರ್ ಕಟೀಲ್ ಕಾರಣ ಅಂತ ನಾನು ಆರೋಪ ಮಾಡುವುದಿಲ್ಲ ಎಂದು ಲೋಬೊ ನುಡಿದರು.

ನನ್ನ ಐದು ವರ್ಷ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದ ನೆರೆ ಸಮಸ್ಯೆ ಉದ್ಭವಿಸಿದೆ ಎಂದಾದರೆ, ಮಹಾನಗರ ಪಾಲಿಕೆಯ ತಾಂತ್ರಿಕ ಸಲಹೆಗಾರ ಐಡಿಎಫ್ ಸಂಸ್ಥೆಗೆ ಎಷ್ಟು ಕಮಿಷನ್ ಹೋಗಿದೆ ಎಂಬ ಲೆಕ್ಕಾಚಾರ ತೆಗೆದರೆ ಗೊತ್ತಾಗುತ್ತದೆ. ಒಂದು ವೇಳೆ ಅವೈಜ್ಞಾನಿಕ ಅಥವಾ ಕಳಪೆ ಕಾಮಗಾರಿ ನಡೆಸಿದ್ದರೆ ಐಡಿಎಫ್ ಸಂಸ್ಥೆಯೇ ನೇರ ಹೊಣೆ. ಅದನ್ನು ಅಮಾನತು ಮಾಡುವಂತೆ ಮಹಾನಗರ ಪಾಲಿಕೆಗೆ ಪತ್ರ ಬರೆಯುತ್ತೇನೆ. ಅವರು ಎಷ್ಟು ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದಾರೆ ಮತ್ತು ಎಷ್ಟು ಕಡೆ ಕಟ್ ಮಾಡಿಸಿದ್ದಾರೆ ಎಂಬ ಬಗ್ಗೆ ಮನಪಾ ತನಿಖೆ ನಡೆಸಲಿ ಎಂದು ಜೆ.ಆರ್. ಲೋಬೊ ಹೇಳಿದರು.

ಮೇಯರ್ ಕೆ.ಭಾಸ್ಕರ್, ಉಪಮೇಯರ್ ಕೆ.ಮೊಹಮ್ಮದ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಪ್ರವೀಣ್‌ಚಂದ್ರ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ವಿಶ್ವಾಸ್‌ಕುಮಾರ್ ದಾಸ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥೋಮಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ