ಆ್ಯಪ್ನಗರ

ಉದ್ಯಮಿಗಳ ಹನಿ ಟ್ರ್ಯಾಪ್‌: ಕೇರಳ ಮೂಲದ ನಾಲ್ವರ ಸೆರೆ, ಸಾಮಾಜಿಕ ಜಾಲತಾಣ ದುರ್ಬಳಕೆ

ಆರೋಪಿಗಳ ಕೈಯಿಂದ ಬಿಡಿಸಿಕೊಂಡ ಉದ್ಯಮಿ, ಕೃತ್ಯದಿಂದ ಬೇಸತ್ತು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡುತ್ತಾರೆ. ಅದರಂತೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದ್ದು, ಈ ಕೃತ್ಯದಲ್ಲಿಇನ್ನೂ ಧಿಐವಧಿರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

Vijaya Karnataka Web 18 Jan 2021, 5:54 pm
ಮಂಗಳೂರು: ಸಾಮಾಜಿಕ ಜಾಲತಾಣ ಮುಖೇನ ಉದ್ಯಮಿಗಳನ್ನು ಗುರಿಯಾಗಿಸಿ ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿಸಿ ಲಕ್ಷಾಂತರ ರೂ. ಲಪಟಾಯಿಸುತ್ತಿದ್ದ ಜಾಲವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದು, ಇಬ್ಬರು ಮಹಿಳೆಯರು ಸಹಿತ ನಾಲ್ವರನ್ನು ಬಂಧಿಸಲಾಗಿದೆ.
Vijaya Karnataka Web ಹನಿ ಟ್ರ್ಯಾಪ್
ಹನಿ ಟ್ರ್ಯಾಪ್


ರೇಶ್ಮಾ ಯಾನೆ ನೀಮಾ (32), ಇಕ್ಬಾಲ್‌ ಮಹಮ್ಮದ್‌ ಯಾನೆ ಇಕ್ಬಾಲ್ ‌(35), ಝೀನತ್‌ ಯಾನ್‌ ಝೀನತ್‌ ಮುಬೀನ್ ‌(28) ಮತ್ತು ನಾಸಿಫ್‌ ಯಾನೆ ಅಬ್ದುಲ್‌ ಖಾದರ್‌ ನಾಜೀಫ್ ‌(34) ಬಂಧಿತ ಆರೋಪಿಗಳು.

ಆರೋಪಿ ಝೀನತ್‌ ಹಾಗೂ ಆಕೆಯ ಗಂಡ ಇಕ್ಬಾಲ್‌ ಕಾನ-ಕಟ್ಲಾಪರಿಸರದ ಫೋರಂಟೈನ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಾಗಿದ್ದಾರೆ. ಆರೋಪಿ ನಾಸಿಫ್‌ ಸೂರಿಂಜೆ ಮೂಲದವನಾಗಿದ್ದು, ಪ್ರಸ್ತುತ ಚೊಕ್ಕಬೆಟ್ಟು ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾನೆ. ಬಂಧಿತರು ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದು, 4 ಮೊಬೈಲ್‌, 5 ಕ್ರೆಡಿಟ್‌ ಕಾರ್ಡ್‌, ಹಾಕಿ ಸ್ಟಿಕ್‌ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಎನ್‌. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರೇಷ್ಮಾ ಮತ್ತು ಝೀನತ್‌ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸಿ, ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಇದೇ ರೀತಿ ಕಾಸರಗೋಡಿನ ಕಂಬಳ ನಿವಾಸಿ ಸಾರಿಗೆ ಉದ್ಯಮಿಯೊಬ್ಬರನ್ನು ಒಂದು ತಿಂಗಳ ಹಿಂದೆ ಫೇಸ್‌ಬುಕ್‌ ಮುಖೇನ ಪರಿಚಯಿಸಿ, ಸಂಭಾಷಣೆ ಮಾಡುತ್ತಾರೆ. ಜ.16 ರಂದು ಆತನನ್ನು ಸುರತ್ಕಲ್‌ ಕೃಷ್ಣಾಪುರದಲ್ಲಿರುವ ಬಾಡಿಗೆ ಮನೆಗೆ ಬರಲು ಹೇಳುತ್ತಾರೆ. ಅದರಂತೆ ಆತ ಕಾಸರಗೋಡಿನಿಂದ ಕಾರಿನಲ್ಲಿ ಬಂದಿದ್ದು, ಸುರತ್ಕಲ್‌ನಿಂದ ರೇಶ್ಮಾ ಆತನ ಕಾರಿನಲ್ಲಿ ಬಾಡಿಗೆ ಮನೆಗೆ ಹೋಗುತ್ತಾರೆ.

ಈ ಸಂದರ್ಭ ಇಕ್ಬಾಲ್‌, ಝೀನತ್‌, ನಾಸಿಫ್‌ ಸೇರಿಕೊಂಡು ಮನೆ ಪ್ರವೇಶಿಸಿ, ಕೂಡಿ ಹಾಕಿ ಹಲ್ಲೆಮಾಡುತ್ತಾರೆ. ಬಳಿಕ 5 ಲಕ್ಷ ರೂ. ಬೇಡಿಕೆ ಇಡುತ್ತಾರೆ. ಆದರೆ ಉದ್ಯಮಿ ತನ್ನಲ್ಲಿ ಅಷ್ಟು ಹಣವಿಲ್ಲಎಂದು ಹೇಳಿದ್ದಕ್ಕೆ ಕಾರನ್ನು ವಶಪಡಿಸಿಕೊಂಡು, ಆತನ ಬಟ್ಟೆಯನ್ನೆಲ್ಲ ತೆಗೆಸಿ ವಿಡಿಯೋ ಮಾಡಿ 'ನೀನು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ, ನಿನ್ನ ಊರಿಗೆ ಬಂದು ಮಹಿಳೆ ಜತೆ ಸಂಪರ್ಕವಿದೆ ಎಂದು ಹೇಳಿ ಪ್ರಚಾರ ಮಾಡುತ್ತೇವೆ, ಅತ್ಯಾಚಾರ ಮಾಡಿರುವುದಾಗಿ ಪೊಲೀಸ್‌ ಠಾಣೆಗೆ ದೂರು ನೀಡುತ್ತೇವೆ' ಎಂದು ಬೆದರಿಸುತ್ತಾರೆ. ಇದರಿಂದ ಬೇಸತ್ತ ಉದ್ಯಮಿ 30 ಸಾವಿರ ರೂ. ನೀಡುತ್ತಾನೆ.

ಪೊಲೀಸರಿಗೆ ದೂರು: ಆರೋಪಿಗಳ ಕೈಯಿಂದ ಬಿಡಿಸಿಕೊಂಡ ಉದ್ಯಮಿ, ಕೃತ್ಯದಿಂದ ಬೇಸತ್ತು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡುತ್ತಾರೆ. ಅದರಂತೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದ್ದು, ಈ ಕೃತ್ಯದಲ್ಲಿಇನ್ನೂ ಧಿಐವಧಿರು ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಅವರಿಗೆ ಶೋಧ ಮುಂದುವರಿದಿದೆ. ಬಂಧಿತ ಆರೋಪಿಗಳಲ್ಲಿ ರೇಶ್ಮಾ ಬೀಡಿ ಕಟ್ಟುತ್ತಿದ್ದರೆ, ಝೀನತ್‌ ಇಧಿನ್ಶೂರೆನ್ಸ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.

5 ರಿಂದ 6 ಕೃತ್ಯ: ಆರೋಪಿಗಳು ಈ ಹಿಂದೆಯೂ ಉದ್ಯಮಿಗಳನ್ನು ಟಾರ್ಗೆಟ್‌ ಮಾಡಿ 3 ತಿಂಗಳಲ್ಲಿ 5 ರಿಂದ 6 ಕೃತ್ಯ ನಡೆಸಿ, ಲಕ್ಷಾಂತರ ರೂ.ಗೆ ಬೇಡಿಕೆಯಿಟ್ಟಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಅದರಲ್ಲೂಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳು ಅವರ ಮೊಬೈಲ್‌ನಲ್ಲಿ ಲಭಿಸಿದ್ದು, ಸಂತ್ರಸ್ತರ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೇರಳ ಮೂಲ: ಬಂಧಿತ ನಾಲ್ವರು ಆರೋಪಿಗಳು ಕೇರಳ ಮೂಲದವರಾಗಿದ್ದು, ಸಾಮಾಜಿಕ ಜಾಲತಾಣ ಮುಖೇನ ಕೇರಳ ಉದ್ಯಮಿಗಳನ್ನು ಸ್ಥಳೀಯ ಭಾಷೆ ಬಳಸಿ ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸುತ್ತಿದೆ ಎಂದು ಕಮಿಷನರ್‌ ತಿಳಿಸಿದರು.

ನಗರ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹರಿರಾಂ ಶಂಕರ್‌, ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್‌ ಆಯುಕ್ತ ವಿನಯ್‌ ಗಾಂವ್ಕರ್‌ ಉಪಸ್ಥಿತರಿದ್ದರು.

ದನ ಸಾಗಾಟದಲ್ಲೂ ಭಾಗಿ


ಹನಿಟ್ರ್ಯಾಪ್‌ ಜಾಲದಲ್ಲಿ ತೊಡಗಿಕೊಂಡ ಆರೋಪಿಗಳು ಕೆಲವು ಸಂದರ್ಭ ತಮ್ಮ ಕಾರಿನ ಸೀಟುಗಳನ್ನು ತೆಗೆಸಿ, ದನಗಳನ್ನು ಸಾಗಾಟ ಮಾಡಿರುವ ಮಾಹಿತಿಯೂ ತನಿಖೆಯಿಂದ ಬಯಲಾಗಿದೆ. ಈ ಆರೋಪಿಗಳಿಗೆ ಬೇರೆ ಹನಿಟ್ರ್ಯಾಪ್‌ ತಂಡಗಳ ಜತೆಗೂ ಸಂಪರ್ಕವಿದೆಯೇ ಧಿಎನ್ನುವುದು ವಿಚಾರಣೆಯಿಂದ ತಿಳಿದು ಬರಬೇಕಿದೆ.

ಶೋಕಿ ಜೀವನಕ್ಕೆ ಬಳಕೆ: ಆರೋಪಿಗಳು ಕೃತ್ಯದಿಂದ ಬಂದ ಹಣವನ್ನು ಶೋಕಿ ಜೀವನಕ್ಕೆ ಬಳಸುತ್ತಿದ್ದು, ಐಷಾರಾಮಿ ಕಾರು, ಆನ್‌ಲೈನ್‌ನಲ್ಲಿ ಖರೀದಿ, ಬ್ರ್ಯಾಂಡೆಡ್‌ ಬಟ್ಟೆ ಖರೀದಿ, ಪಾರ್ಟಿಯಲಿ ಭಾಗವಹಿಸಿ ಶೋಕಿ ಜೀವನ ನಡೆಸುತ್ತಿದ್ದರು. 5 ರಿಂದ 6 ಕ್ರೆಡಿಟ್‌ ಕಾರ್ಡ್‌ ಹೊಂದಿದ್ದರು.

ಆರೋಪಿಗಳು ಫೇಸ್‌ಬುಕ್‌, ವಾಟ್ಸಾಪ್‌‌ ಡಿಪಿಗಳಲ್ಲಿ ನಾನಾ ರೀತಿಯ ಫೋಟೊ ಹಾಕಿ ಹನಿಟ್ರ್ಯಾಪ್‌ ಜಾಲಕ್ಕೆ ಎಳೆಯುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ