ಆ್ಯಪ್ನಗರ

ಮುಚ್ಚಬೇಕಿದ್ದ ಸರಕಾರಿ ಶಾಲೆ ಹೌಸ್‌ಫುಲ್‌!

ರಾಜ್ಯದ ಕೆಲವೆಡೆ ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಭೀತಿಯಲ್ಲಿದ್ದರೆ, ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಸೀಟು ದೊರಕುವುದೇ ಅದೃಷ್ಟ ಎಂಬ ಮಾತು ಕೇಳಿ ಬರುವವರೆಗೆ ತನ್ನ ಛಾಪು ಮೂಡಿಸಿದೆ.

Vijaya Karnataka Web 10 May 2019, 5:08 pm
ಹರೀಶ ಮಾಂಬಾಡಿ ಬಂಟ್ವಾಳ
Vijaya Karnataka Web school

ಇದು ಬರೇ ನಾಲ್ಕು ವರ್ಷಗಳ ಹಿಂದಿನ ಕತೆ. 33 ಮಕ್ಕಳನ್ನು ಹೊಂದಿದ್ದು, ಮುಂದಿನ ವರ್ಷ ಅವರೂ ಬರಲಿಕ್ಕಿಲ್ಲ ಎಂಬ ಭೀತಿಯಿಂದ ಬೀಗ ಜಡಿಯುವ ಸ್ಥಿತಿಯಲ್ಲಿತ್ತು ಬಂಟ್ವಾಳ ತಾಲೂಕು ದಡ್ಡಲಕಾಡು ಎಂಬಲ್ಲಿರುವ ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ. ಇದನ್ನು ನೋಡಿದ ಸ್ಥಳೀಯ ಯುವಕರ ತಂಡ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ಹೆಸರಲ್ಲಿ ಒಟ್ಟುಗೂಡಿ ಇಡೀ ಶಾಲೆಯನ್ನು ಉಳಿಸಿ, ಬೆಳೆಸಲು ಪಣತೊಟ್ಟು ಯಶಸ್ವಿಯಾಗಿ ರಾಜ್ಯಪಾಲರೇ ಬರುವಂತೆ ಮಾಡಿದ ಭಗೀರಥ ಪ್ರಯತ್ನದ ಫಲ ಇದು. ಇಂದು ಶಾಲೆಯೀಗ ಹೌಸ್‌ ಫುಲ್‌!

ಒಂದನೇ ತರಗತಿಗೇ ಮಕ್ಕಳ ಸೇರ್ಪಡೆ 110. ಎಲ್‌ಕೆಜಿ, ಯುಕೆಜಿಗೆ 134 ಒಟ್ಟಾರೆಯಾಗಿ ಈ ವರ್ಷ 235 ಮಕ್ಕಳ ಸೇರ್ಪಡೆಯೊಂದಿಗೆ ಇಡೀ ಶಾಲೆಯಲ್ಲಿ 650ಕ್ಕೂ ಅಧಿಕ ಮಕ್ಕಳ ಕಲರವ.

ರಾಜ್ಯದ ಕೆಲವೆಡೆ ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಭೀತಿಯಲ್ಲಿದ್ದರೆ, ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಸೀಟು ದೊರಕುವುದೇ ಅದೃಷ್ಟ ಎಂಬ ಮಾತು ಕೇಳಿ ಬರುವವರೆಗೆ ತನ್ನ ಛಾಪು ಮೂಡಿಸಿದೆ.

ಶಾಲೆಗೆ ಬರ್ತಾರೆ, ಸೀಟು ಉಂಟಾ ಕೇಳ್ತಾರೆ: ಈ ಸಾಲಿನ ಶೈಕ್ಷ ಣಿಕ ವರ್ಷಕ್ಕೆ ಒಂದನೇ ತರಗತಿಗೆ 110 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಸರಕಾರಿ ಶಾಲೆಗಳ ಮಕ್ಕಳ ಸೇರ್ಪಡೆಯಲ್ಲೇ ದಾಖಲೆ ಬರೆದಿದೆ. ಮನೆ ಮನೆ ಭೇಟಿ ಕಾರ್ಯಕ್ರಮವಿಲ್ಲದೆ, ಪ್ರಚಾರಕ್ಕಾಗಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸದೇ ಇದ್ದರೂ ಈ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿದ್ಯಾರ್ಥಿಗಳ ಪೋಷಕರು ಶಾಲೆಗೇ ಬರುತ್ತಾರೆ. ಸೀಟು ಉಂಟಾ ಎಂದು ಕೇಳುತ್ತಿದ್ದಾರೆ.

ಹೇಗಿತ್ತು, ಹೇಗಾಯ್ತು?: 2015-16ರಲ್ಲಿ 33 ಮಕ್ಕಳಿಂದ ಮುಚ್ಚುವ ಸ್ಥಿತಿಗೆ ಬಂದಿದ್ದ ದಡ್ಡಲಕಾಡು ಶಾಲೆಯನ್ನು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ದತ್ತು ಸ್ವೀಕರಿಸಿಕೊಂಡ ಬಳಿಕ ಶಾಲೆಯ ಅಭಿವೃದ್ಧಿಯಲ್ಲಿ ಕ್ರಾಂತಿಯಾಗಿದೆ. ಶಾಲೆಗೆ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯಗಳನ್ನು ಒದಗಿಸುವ ಜತೆಗೆ ಗುಣಮಟ್ಟದ ಶಿಕ್ಷ ಣ ನೀಡಿದ ಕಾರಣ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಎಲ್‌ಕೆಜಿ, ಯುಕೆಜಿಗೆ ಒಟ್ಟು 134 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು , ಮುಂದಿನ ದಿನಗಳಲ್ಲಿ ಕೊಠಡಿ ಸಮಸ್ಯೆ ಎದುರಾಗುವ ಕಾರಣ ದಾಖಲಾತಿಯನ್ನು ಪೂರ್ಣಗೊಳಿಸಲಾಗಿದೆ, ಒಂದನೇ ತರಗತಿಗೆ ಈಗಾಗಲೇ 110 ಮಕ್ಕಳು ಸೇರ್ಪಡೆಗೊಂಡಿರುವುದರಿಂದ ಮೂರು ವಿಭಾಗಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಮೌರೀಸ್‌ ಡಿಸೋಜ ತಿಳಿಸಿದ್ದಾರೆ.

ಸ್ಮಾರ್ಟ್‌ ಶಾಲೆ: ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಅವರ ನಿರಂತರ ಹೋರಾಟದ ಫಲವಾಗಿ ದಡ್ಡಲಕಾಡು ಸರಕಾರಿ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಬೆಳೆಯುತ್ತಿದ್ದು , ಸಮುದಾಯದ ಸಹಕಾರದೊಂದಿಗೆ ಮುನ್ನುಗುತ್ತಿದೆ. ಉಚಿತ ಸ್ಮಾರ್ಟ್‌ ಕ್ಲಾಸ್‌, ಯೋಗ, ನೃತ್ಯ, ಕರಾಟೆ, ಸಂಗೀತದೊಂದಿಗೆ ಕ್ರೀಡೆ, ಕೃಷಿ ಹಾಗೂ ಸಂಸ್ಕಾರಯುತ ಶಿಕ್ಷ ಣವನ್ನು ಈ ಶಾಲೆಯಲ್ಲಿ ನೀಡಲಾಗುತ್ತಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿಯರೆಗೆ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಕಲಿಕೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆಯೂ ಇರುವುದರಿಂದ ಸಹಜವಾಗಿಯೇ ಪೋಷಕರ ಒಲವು ದಡ್ಡಲಕಾಡು ಶಾಲೆಯತ್ತ ಬೀರಿದೆ.

ಪೋಷಕರಿಂದಲೇ ಶ್ರಮದಾನ: ದಡ್ಡಲಕಾಡು ಶಾಲೆಯ ಮೂರನೇ ಹಂತದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಹೊಸ ಕೊಠಡಿಗಳು, ಆವರಣ ಗೋಡೆ, ಸಭಾಂಗಣ ನಿರ್ಮಾಣಗೊಳ್ಳಲಿದೆ.

ಸರಕಾರಿ ಶಾಲೆಯೊಂದರ ಕಟ್ಟಡ ಉದ್ಘಾಟನೆಗೆ ರಾಜ್ಯಪಾಲರನ್ನು ಆಹ್ವಾನಿಸಿದ ಸಂದರ್ಭ ಅವರು ಬರಬಹುದೇ ಎಂದು ಹುಬ್ಬೇರಿಸಿದವರು ಹಲವರು. ಆದರೆ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಅನಂತಕುಮಾರ್‌, ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟನೆಗೆ ರಾಜ್ಯಪಾಲರು ಬಂದು ಶಾಲೆಯ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ಮೂರನೇ ಅಂತಸ್ತು ನಿರ್ಮಾಣವಾಗುತ್ತಿದೆ. ದೊಡ್ಡ ಕಾರ‍್ಯಕ್ರಮವನ್ನು ಸಂಘಟಿಸಿ ದೇಶವೇ ನೋಡುವಂತೆ ಉದ್ಘಾಟನಾ ಸಮಾರಂಭ ನಡೆಸುವ ಚಿಂತನೆ ನಡೆದಿದೆ ಎನ್ನುತ್ತಾರೆ ಪ್ರಕಾಶ್‌ ಅಂಚನ್‌.

ಪೋಷಕರು ಶಾಲೆಯ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯಾದ್ಯಂತ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಸಂಚಲನ ಉಂಟಾಗಿದೆ.
ಪ್ರಕಾಶ್‌ ಅಂಚನ್‌, ರಾಜ್ಯಾಧ್ಯಕ್ಷರು, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ