ಆ್ಯಪ್ನಗರ

ಬಂಟ್ವಾಳದಲ್ಲಿ ಮಳೆಯ ಅಬ್ಬರ: ಹಲವೆಡೆ ಅಪಘಾತ, ಹಾನಿ

ಬಂಟ್ವಾಳದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಅನಾಹುತಗಳು ಸಂಭವಿಸಿದ್ದು, ಕೆಲವೆಡೆ ರಸ್ತೆ ಬ್ಲಾಕ್‌ ಆಗಿದ್ದರೆ, ಇನ್ನು ಕೆಲವೆಡೆ ಮಣ್ಣು ಕುಸಿದ ಘಟನೆ ಸಂಭವಿಸಿವೆ.

Vijaya Karnataka Web 5 Aug 2020, 9:07 am
ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳವಾರ ಬೆಳಗ್ಗೆ ನೇತ್ರಾವತಿ ನದಿ 5.9 ಮೀಟರ್‌ ಎತ್ತರದಲ್ಲಿ ಹರಿಯುತ್ತಿದ್ದು, ಅಪಾಯದ ಮಟ್ಟ 8.5 ಮೀಟರ್‌ ಆಗಿದೆ. ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿದೆ. ಕೆಲವೆಡೆ ಅಪಘಾತಗಳಿಂದ ರಸ್ತೆ ಬ್ಲಾಕ್‌ ಆಗಿದ್ದರೆ, ಇನ್ನು ಕೆಲವೆಡೆ ಮಣ್ಣು ಕುಸಿದ ಘಟನೆಗಳೂ ಸಂಭವಿಸಿವೆ.
Vijaya Karnataka Web ಸಾಂದರ್ಭಿಕ ಚಿತ್ರ


ಅಲ್ಲಲ್ಲಿ ತೊಂದರೆ
ಮೇಲ್ಕಾರ್‌ ಸಮೀಪ ಬೋಳಂಗಡಿ ಎಂಬಲ್ಲಿ ಸಂಜೆ ವೇಳೆ ಲಾರಿಯೊಂದು ಹೆದ್ದಾರಿಯಲ್ಲಿಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಿ.ಸಿ.ರೋಡ್‌ ಕಡೆಯಿಂದ ಮಾಣಿ ಕಡೆಗೆ ಮರದ ತುಂಡುಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಮೇಲ್ಕಾರ್‌ ಸಮೀಪ ಬೋಳಂಗಡಿ ತಿರುವಿಗೆ ಬರುತ್ತಿದ್ದಂತೆ ಮಗುಚಿ ಬಿದ್ದಿದೆ. ಬಳಿಕ ಕ್ರೇನ್‌ ಬಳಸಿ ಲಾರಿಯನ್ನು ಬದಿಗೆ ಸರಿಸಲಾಯಿತು. ಸೂರಿಕುಮೇರು ಎಂಬಲ್ಲಿ ಹಳೆಯದಾದ ಆಲದ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಯಿತು. ನಿರಂತರವಾಗಿ ಸುರಿಯುವ ಮಳೆಗೆ ಗುಡ್ಡ ಜರಿದು ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್‌ ಕಾಮಗಾರಿ ಪಿಲ್ಲರ್‌ ಗಳು ಮಣ್ಣಿನೊಳಗೆ ಸಿಲುಕಿರುವ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲಾಯಿ ಎಂಬಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಸಿದ್ಧಕಟ್ಟೆಯಲ್ಲಿ ಕಂಬಗಳು ಉರುಳಿದರೆ, ಸಾಲೆತ್ತೂರು ಸಮೀಪ ಕರೈ ಎಂಬಲ್ಲಿ ಮರವೊಂದು ಉರುಳಿದ್ದು, ಸ್ಥಳೀಯರು ಸುಗಮ ಸಂಚಾರಕ್ಕೆ ಸಹಕರಿಸಿದರು. ತಾಲೂಕಿನ ಹಲವೆಡೆ ಅಲ್ಲಲ್ಲಿ ಸಣ್ಣಪುಟ್ಟ ರಸ್ತೆ ಅಪಘಾತಗಳು ಸಂಭವಿಸಿವೆ. ಬೋಳಂಗಡಿಯಲ್ಲಿ ಕ್ರೇನ್‌ ಮೂಲಕ ಲಾರಿಯನ್ನು ಬದಿಗೆ ಸರಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದವು.

ತಾಲೂಕಾಡಳಿತ ಸಂಭಾವ್ಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಯಾರಾಗಿದೆ. ಈಗಾಗಲೇ ಗೃಹರಕ್ಷಕ ದಳದ ಸಿಬ್ಬಂದಿ ಅಹರ್ನಿಶಿ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಅಗತ್ಯ ಬಿದ್ದರೆ, ಪ್ರಾಕೃತಿಕ ವಿಕೋಪ ದಳವೂ ಆಗಮಿಸುತ್ತದೆ.
ರಶ್ಮಿ ಎಸ್‌.ಆರ್‌., ತಹಸೀಲ್ದಾರ್‌ ಬಂಟ್ವಾಳ

ಮಾಣಿ ಸಮೀಪ ವಾಹನವೊಂದರ ಮೇಲೆ ಮರ ಬಿದ್ದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಯಾರಿಗೂ ಪ್ರಾಣಾಪಾಯ ಆಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ