ಶಾಲಾ, ಕಾಲೇಜಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆದಿದ್ದು, ಜುಲೈ 7 ರಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ - ಕಾಲೇಜುಗಳಿಗೆ, ಸ್ನಾತಕೋತ್ತರ, ಐಟಿಐ, ಎಂಜಿನಿಯರಿಂಗ್ ಕಾಲೇಜು ಸಹಿತ ಗುರುವಾರ ಜುಲೈ 7 ರಂದು ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಆದೇಶ ಹೊರಡಿಸಿದ್ದಾರೆ.
ಎಲ್ಲೆಲ್ಲೂ ಮಳೆ ಅಬ್ಬರ..!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೂಡ ನಗರ ಭಾಗದಲ್ಲಿ ಉತ್ತಮ ಮಳೆಯಾದರೆ ಗ್ರಾಮೀಣ ಭಾಗದಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಜಿಲ್ಲೆಯಲ್ಲಿ 8 ಮನೆಗಳಿಗೆ ಭಾಗಶಃ, 4 ಪೂರ್ಣ ಹಾನಿಯಾಗಿದೆ. ಇದರ ಜತೆಯಲ್ಲಿ 81 ವಿದ್ಯುತ್ ಕಂಬಗಳು ಮುರಿತ, 4 ಟ್ರಾನ್ಸ್ಫರ್ ಪೆಟ್ಟಿಗೆಗೆ ಹಾನಿಯಾಗಿದೆ. ಉಳಿದಂತೆ ಭಾರತೀಯ ಹವಾಮಾನ ಇಲಾಖೆ ಜುಲೈ 7 ರಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಬಳಿಕ ಆರೆಂಜ್ ಅಲರ್ಟ್ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹಲವೆಡೆ ಹಾನಿ, ಅಪಾರ ನಷ್ಟ..
ಮಂಗಳೂರು ನಗರ ಭಾಗದಲ್ಲಿ ಮರೋಳಿಯಲ್ಲಿ ಮನೆಯ ಆವರಣ ಗೋಡೆಯ ಜತೆಯಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ. ಉಳಿದಂತೆ ನಗರ ಭಾಗದಲ್ಲಿ ಮಳೆಯ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಕುರಿತು ದೂರುಗಳು ಮನಪಾದಲ್ಲಿ ದಾಖಲಾಗಿದೆ. ಉಳ್ಳಾಲದ ಉಚ್ಚಿಲ, ಸೀ ಗ್ರೌಂಡ್ನಲ್ಲಿ ಕಡಲ್ಕೊರತೆ ಹೆಚ್ಚಾಗಿದೆ. ಕಿನ್ಯ ಗ್ರಾಮದ ಸಾಂತ್ಯ ಎಂಬಲ್ಲಿ ದೇವಕಿ ಎಂಬುವರ ಮನೆಗೆ ಮಣ್ಣು ಬಿದ್ದು ಭಾಗಶಃ ಹಾನಿಯಾಗಿದೆ. ಅಂಬ್ಲಮೊಗರಿನಲ್ಲಿ ಝೋಹರಾ ಎಂಬುವರ ಮನೆಯ ಪಕ್ಕದ ಗುಡ್ಡೆಯೊಂದು ಕುಸಿದಿದೆ. ಪಜೀರು ಗ್ರಾಮದ ಮುರಾಯಿಯಲ್ಲಿ ಫ್ರಾಂಕಿ ಡಿಸೋಜ ಅವರ ಮನೆಯ ಹತ್ತಿರ ಗುಡ್ಡ ಕುಸಿದು ಅಡಿಕೆ ತೋಟಕ್ಕೆ ಬಹಳಷ್ಟು ಹಾನಿಯಾಗಿದೆ. ಸೋಮೇಶ್ವರ ಗ್ರಾಮದ ಮೂರುಕಟ್ಟೆಯಲ್ಲಿ ಮೋಹಿನಿ ಅವರ ಮನೆ ಆವರಣದಲ್ಲಿದ್ದ ಮನೆಯ ಬಾವಿ ಕುಸಿದು ಬಿದ್ದಿದೆ. ಮೂಲ್ಕಿ ಭಾಗದಲ್ಲಿ ಹಳೆಯಂಗಡಿ, ಏಳಿಂಜೆ, ಬೆಳ್ಳಾಯರು, ಕೊಯಿಕುಡೆ ಭಾಗದಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಪುತ್ತೂರಿನಲ್ಲಿ ಹೆಚ್ಚಿದ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರಿನ ನೆಟ್ಟಣಿಗೆ ಮುಡ್ನೂರಿನಲ್ಲಿ 60.5 ಮಿ. ಮೀ. ಮಳೆಯಾಗುವ ಮೂಲಕ ಜಿಲ್ಲೆಯಲ್ಲೇ ಹೆಚ್ಚು ಮಳೆಯಾಗಿರುವ ಪ್ರದೇಶವಾಗಿದೆ. ಉಳಿದಂತೆ ಈ ಭಾಗದ ಕೊಳ್ತಿಗೆ 50.5 ಮಿ. ಮೀ, ಬಡಗನ್ನೂರು 54.5 ಮಿ. ಮೀ, ನಿಡ್ಪಳ್ಳಿಯಲ್ಲಿ 49.5 ಮಿ. ಮೀ ಮಳೆಯಾಗಿದೆ. ಬಂಟ್ವಾಳದ ಇಡ್ಕಿದು 34.5 ಮಿ. ಮೀ ಮಳೆಯಾಗಿದೆ. ಬೆಳ್ತಂಗಡಿ ಭಾಗದ ಕಳೆಂಜ 50.5 ಮಿ. ಮೀ, ಪುದುವೆಟ್ಟು 52.5 ಮಿ. ಮೀ, ಸುಳ್ಯದ ಆಲೆಟ್ಟಿಯಲ್ಲಿ 51.5 ಮಿ. ಮೀ, ಜಾಲ್ಸೂರಿನಲ್ಲಿ 53.5 ಮಿ. ಮೀ ಮಳೆಯಾಗಿದೆ. ಮಂಗಳೂರಿನ ಮೂಡುಶೆಡ್ಡೆ 44.5 ಮಿ. ಮೀ, ಕಲ್ಲಮೂಡ್ಕೂರಿನಲ್ಲಿ 50.5 ಮಿ. ಮೀ, ಶೀರ್ತಾಡಿಯಲ್ಲಿ 43.5 ಮಿ. ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮನಪಾ ದೂರವಾಣಿ ಸ್ಥಗಿತ
ಮಂಗಳೂರು ಮಹಾನಗರ ಪಾಲಿಕೆಯ ಮಳೆ ಹಾನಿ ವಿಚಾರದಲ್ಲಿ ದೂರು ನೀಡಲು ಬಳಕೆಯಾಗುತ್ತಿದ್ದ 0824-2220306 ದೂರವಾಣಿ ಸ್ಥಗಿತಗೊಂಡಿದೆ. ಈ ಕುರಿತು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ವಿಕಕ್ಕೆ ಮಾಹಿತಿ ನೀಡಿ ಈ ದೂರವಾಣಿ ಸ್ಥಗಿತಗೊಂಡಿದ್ದು, ಮನಪಾದಿಂದ ಪ್ರತ್ಯೇಕವಾದ ಮತ್ತೊಂದು ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಲ್ಲಿವರೆಗೆ ಮನಪಾದ 0824-2220310ಗೆ ಕರೆ ಮಾಡಿ ದೂರು ದಾಖಲಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
24 ಗಂಟೆಯಲ್ಲಿ 110.8 ಮಿ. ಮೀ ಮಳೆ
ಮಂಗಳವಾರ ಬೆಳಗ್ಗೆ 8 ರಿಂದ ಬುಧವಾರ ಬೆಳಗ್ಗೆ 8 ರ ತನಕ ಜಿಲ್ಲೆಯಲ್ಲಿ 110.8 ಮಿ. ಮೀ. ಮಳೆಯಾಗಿದೆ. ಆದರೆ ಸಾಮಾನ್ಯ ಮಳೆ 35.6 ಮಿ. ಮೀ ಇರಬೇಕಿತ್ತು. 24 ಗಂಟೆಯಲ್ಲಿ ಮೂರು ಪಟ್ಟು ಮಳೆ ಹೆಚ್ಚಳವಾಗಿದೆ. 24 ಗಂಟೆಯಲ್ಲಿ ಬೆಳ್ತಂಗಡಿಯಲ್ಲಿ 81.4 ಮಿ. ಮೀ, ಬಂಟ್ವಾಳದಲ್ಲಿ 69.5 ಮಿ. ಮೀ, ಮಂಗಳೂರು 60.2 ಮಿ. ಮೀ, ಪುತ್ತೂರು 53.2 ಮಿ. ಮೀ, ಸುಳ್ಯದಲ್ಲಿ 56.3 ಮಿ. ಮೀ, ಮೂಡುಬಿದಿರೆಯಲ್ಲಿ 83.2 ಹಾಗೂ ಕಡಬದಲ್ಲಿ 65.4 ಮಿ.ಮೀ ಮಳೆಯಾಗಿದೆ. ನದಿಗಳ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದ್ದು ಬಂಟ್ವಾಳದಲ್ಲಿ ನೇತ್ರಾವತಿ ನದಿ ಮಟ್ಟ 7.5 ಮೀಟರ್ ರಷ್ಟಿದೆ. ಆದರೆ ಅಪಾಯ ಮಟ್ಟ 8.5 ಮೀಟರ್ ರಷ್ಟಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮಟ್ಟ 28.07 ಮೀ ಇದ್ದರೆ 31.5 ಮೀ ಅಪಾಯದ ಮಟ್ಟವಾಗಿದೆ.