ಆ್ಯಪ್ನಗರ

ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್

ಮಳೆಯ ಪರಿಣಾಮ ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಜು.20ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಮಳೆ ಪರಿಸ್ಥಿತಿಯನ್ನು ಅವಲೋಕಿಸಿ ಜು. 22ರಂದು ಮತ್ತೆ ರಜೆ ನೀಡುವ ಕುರಿತು ತೀರ್ಮಾನಿಸಲಾಗುವುದೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

Vijaya Karnataka Web 19 Jul 2019, 9:08 pm
ಮಂಗಳೂರು: ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಜೂ.23ರ ವರಗೆ ರೆಡ್ ಅಲರ್ಟ್ ಘೋಷಿಸಿದೆ.
Vijaya Karnataka Web ಮಳೆ ಮೋಡ
ಮಳೆ ಮೋಡ


ಈ ನಡುವೆ ಜಿಲ್ಲೆಯ ಎಲ್ಲ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಶನಿವಾರ ರಜೆ ಸಾರಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಆರಂಭವಾದ ಬಳಿಕ ಮೊದಲ ಬಾರಿಗೆ ನದಿ, ಹಳ್ಳ- ಕೊಳ್ಳಗಳೆಲ್ಲ ತುಂಬಿ ಹರಿಯಲಾರಂಭಿದೆ.

ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಕುಮಾರಧಾರ ಹಾಗೂ ಫಲ್ಗುಣಿ ಮೈತುಂಬಿಕೊಂಡಿದೆ. ಮಂಗಳೂರು ನಗರದ ರಾಜ ಕಾಲುವೆಗಳು ತುಂಬಿ ಹರಿಯುತ್ತಿದೆ.

ಶುಕ್ರವಾರ ಮುಂಜಾನೆಯಿಂದಲೇ ಜಿಲ್ಲೆಯಲ್ಲಿ ದಟ್ಟ ಮೋಡ ಆವರಿಸಿ ಮಳೆಯಾಗಲಾರಂಭಿಸಿದೆ. ಮಳೆ ಪರಿಣಾಮ ನಗರದಲ್ಲಿ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿತು. ನಗರದ ಕೆಲವು ಶಾಲೆಗಳು ಶುಕ್ರವಾರ ಮಧ್ಯಾಹ್ನದ ಬಳಿಕ ಮಕ್ಕಳಿಗೆ ರಜೆ ನೀಡಿ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.

ನಗರದ ಹೊರವಲಯದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಅಂಡರ್ ಪಾಸ್‌ನಲ್ಲಿ ಶುಕ್ರವಾರ ಕೂಡ ಸ್ವಲ್ಪ ಮಟ್ಟಿಗೆ ಮಳೆ ನೀರು ಆವರಿಸಿ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಯಿತು. ಪಂಪ್‌ವೆಲ್‌ನಲ್ಲಿ ಫ್ಲೈ ಓವರ್ ಕಾಮಗಾರಿಯಿಂದಾಗಿ ನೀರು ನಿಂತು ವಾಹನ ದಟ್ಟಣೆಯುಂಟಾಯಿತು.

ಪಡೀಲ್‌ನಲ್ಲಿ ರೈಲ್ವೆ ಕೆಳಸೇತುವೆ ಅಡಿಯಲ್ಲಿ ನೀರು ನಿಂತು ವಾಹನಗಳು ನಿಧಾನವಾಗಿ ಎಚ್ಚರಿಕೆಯಿಂದ ಸಂಚರಿಸಿತು. ಬಂಟ್ವಾಳ ತಾಲೂಕಿನ ಕಸ್ಬಾ ಗ್ರಾಮದಲ್ಲಿ ಯಶೋದಾ ಎಂಬವರ ಕಚ್ಚಾ ಮನೆಯೊಂದು ಗುರುವಾರ ರಾತ್ರಿ ಭಾಗಶ: ಹಾನಿಗೀಡಾಗಿದೆ.

ಮೀನುಗಾರರಿಗೆ ಎಚ್ಚರಿಕೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಜುಲೆ 20 ರಿಂದ 22 ರವರೆಗೆ ಎಲ್ಲ ಮೀನುಗಾರರು ಸಮುದ್ರಕ್ಕಿಳಿಯದಂತೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

1077 ಕರೆ ಮಾಡಿ

ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು 1077 ನಂಬರ್‌ಗೆ ಫೋನ್ ಮಾಡಿ ದೂರುಗಳನ್ನು ನೀಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ