ಆ್ಯಪ್ನಗರ

ಸೋಮವಾರ 'ಕಂಬಳವೀರ' ದಿಲ್ಲಿಗೆ, ದೇಶದ ಅತ್ಯುನ್ನತ ಕೋಚ್‌ಗಳಿಂದ ಟ್ರಯಲ್ಸ್‌

ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಪರೀಕ್ಷೆಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಟ್ಟೀಟ್‌ ಮಾಡಿದ್ದಾರೆ.

Vijaya Karnataka 15 Feb 2020, 3:37 pm

ಹೊಸದಿಲ್ಲಿ: ಉಸೇನ್‌ ಬೋಲ್ಟ್‌ರನ್ನು ಮೀರಿಸಿದ ವೇಗದಲ್ಲಿ ಕಂಬಳ ಗದ್ದೆಯಲ್ಲಿ ಶ್ರೀನಿವಾಸ ಗೌಡ ಓಡಿರುವ ಸುದ್ದಿ ಕೊನೆಗೂ ಕೇಂದ್ರ ಕ್ರೀಡಾ ಸಚಿವರನ್ನು ತಲುಪಿದೆ.
Vijaya Karnataka Web Kambala Srinivasa Gowda


ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು, “ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದಲ್ಲಿ ಯಾವುದೇ ಪ್ರತಿಭೆಗಳನ್ನು ಪರೀಕ್ಷಿಸದೆ ಬಿಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸುತ್ತೇನೆ," ಎಂದು ಅವರು ಹೇಳಿದ್ದಾರೆ.


ಇದಕ್ಕೂ ಮೊದಲು ಉದ್ಯಮಿ ಆನಂದ್‌ ಮಹೀಂದ್ರಾ ಶ್ರೀನಿವಾಸ ಗೌಡ ಬಗೆಗಿನ ಸುದ್ದಿಗೆ, “ಒಮ್ಮೆ ಅವರ ಮೈಕಟ್ಟನ್ನು ನೋಡಿ. ಈ ಮನುಷ್ಯ ಅಸಾಧಾರಣ ಅಥ್ಲೆಟಿಕ್ ಸಾಹಸಗಳನ್ನು ಮಾಡಲು ಸಮರ್ಥನೆಂದು ನಿಮಗೆ ತಿಳಿದಿದೆ. ಈಗ ಅವರಿಗೆ ಕಿರಣ್‌ ರಿಜಿಜು 100 ಮೀ ಓಟಗಾರನ ತರಬೇತಿ ನೀಡಬೇಕು ಅಥವಾ ನಾವು ಕಂಬಳವನ್ನು ಒಲಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕು. ಯಾವುದೇ ರೀತಿಯಲ್ಲಿ, ಶ್ರೀನಿವಾಸ ಅವರಿಗೆ ಚಿನ್ನದ ಪದಕ ಬೇಕು!" ಎಂದು ಟ್ಟೀಟ್‌ ಮಾಡಿದ್ದರು.

ಉಸೇನ್‌ ಬೋಲ್ಟ್‌ಗಿಂತ ವೇಗವಾಗಿ ಓಡಿದ ಮೂಡುಬಿದಿರೆಯ ಕಂಬಳವೀರ!

ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮೂಡಬಿದಿರೆ ಮೀಯಾರಿನ ಶ್ರೀನಿವಾಸಗೌಡ ಅವರು 142.50 ಮೀಟರ್‌ ಉದ್ದದ ಕಂಬಳದ ಗದ್ದೆಯಲ್ಲಿ ಕೇವಲ 13.62 ಸೆಕೆಂಡುಗಳಲ್ಲಿ ಕೋಣಗಳನ್ನು ಓಡಿಸಿಕೊಂಡು ಗುರಿ ತಲುಪಿದ್ದರು. ಇದನ್ನು 100 ಮೀಟರ್‌ ಇಳಿಸಿದರೆ ತಗುಲುವ ಸೆಕೆಂಡುಗಳು ಕೇವಲ 9.55! ಅಂದರೆ ಉಸೇನ್‌ ಬೋಲ್ಟ್‌ ನಿರ್ಮಿಸಿದ ದಾಖಲೆಗಿಂತ 0.3 ಸೆಕೆಂಡ್‌ ಕಡಿಮೆ ಅವಧಿಯಲ್ಲೇ ತಲುಪಿದ್ದರು.

ಈ ಸುದ್ದಿ ಗುರುವಾರ, ಶುಕ್ರವಾರವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಹಲವರು ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ಕ್ರೀಡಾಕೂಟದಲ್ಲಿ ಅವರನ್ನು ಓಡಿಸುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೀಗ ಕಿರಣ್‌ ರಿಜಿಜು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ದಿಲ್ಲಿಗೆ

ಸದ್ಯದ ಮಾಹಿತಿಗಳ ಪ್ರಕಾರ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ಅಧಿಕಾರಿಗಳು ಶ್ರೀನಿವಾಸ ಗೌಡ ಅವರನ್ನು ಸಂಪರ್ಕಿಸಿದ್ದಾರೆ. ಅವರಿಗೆ ರೈಲ್ವೆ ಟಿಕೆಟ್‌ ಕೂಡ ಕಾದಿರಿಸಲಾಗಿದ್ದು ಸೋಮವಾರ ಅವರು ಎಸ್‌ಎಐ ಕೇಂದ್ರವನ್ನು ತಲುಪಲಿದ್ದಾರೆ. ಉನ್ನತ ರಾಷ್ಟ್ರೀಯ ತರಬೇತುದಾರರು ಅವರ ಟ್ರಯಲ್‌ ನಡೆಸಲಿದ್ದಾರೆ ಎಂದು ಕಿರಣ್‌ ರಿಜಿಜು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ