ಆ್ಯಪ್ನಗರ

ತುರ್ತು ಸಂದರ್ಭದಲ್ಲೂ ಅಂಬುಲೆನ್ಸ್‌ಗೆ ನೀಡಿಲ್ಲ ಪ್ರವೇಶ! ಮಂಗಳೂರಿನಲ್ಲೊಂದು ಅಮಾನವೀಯ ಘಟನೆ

ಕೊರೊನಾ ಕಾರಣದಿಂದಾಗಿ ಕರ್ನಾಟಕ- ಕೇರಳ ಗಡಿಭಾಗಗಳನ್ನು ಸಂಪೂರ್ಣ ಮುಚ್ಚಿದ್ದು, ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್‌ಗೂ ಅವಕಾಶ ನೀಡದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಪೊಲೀಸರ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Vijaya Karnataka Web 29 Mar 2020, 4:02 pm
ಮಂಗಳೂರು: ಕರ್ನಾಟಕ-ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನಿಂದ ವೃದ್ದೆಯೊಬ್ಬರ ತುರ್ತು ಚಿಕಿತ್ಸೆಗಾಗಿ ಬಂದಿದ್ದ ಅಂಬುಲೆನ್ಸ್‌ಗೆ ಮಂಗಳೂರು ಪ್ರವೇಶಿಸಲು ಅವಕಾಶ ನಿರಾಕರಿಸಿದ ಅಮಾನವೀಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ವೃದ್ದೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Vijaya Karnataka Web kerala


ಶನಿವಾರ ಗಡಿ ಜಿಲ್ಲೆಯಾದ ಕಾಸರಗೋಡಿನ ಮಂಜೇಶ್ವರದಲ್ಲಿ ಕುಟುಂಬಸ್ಥರ ಮನೆಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು, ಬಿ.ಸಿ.ರೋಡಿನ ನಿವಾಸಿ ಪಾತುಂಞ(70) ಎಂಬುವವರಿಗೆ ವಯೋ ಸಹಜ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಪಕ್ಕದ ಜಿಲ್ಲೆಯಾದ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬುಲೆನ್ಸ್‌ನಲ್ಲಿ ಕರೆತರಲಾಗಿತ್ತು.

ಆದರೆ ಮಂಗಳೂರಿನ ತಲಪಾಡಿಯಲ್ಲಿ ರಸ್ತೆಯನ್ನು ಸಂಪೂರ್ಣ ಬ್ಲಾಕ್‌ ಮಾಡಲಾಗಿತ್ತು. ತುರ್ತು ಸಂದರ್ಭದಲ್ಲಿ ವಾಹನಗಳನ್ನು ಬಿಡಲು ಅವಕಾಶವಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಅಂಬುಲೆನ್ಸ್‌ ಮಂಗಳೂರಿಗೆ ಹೋಗಲು ಅನುಮತಿ ನೀಡಿಲ್ಲ.

ಕೊರೊನಾ ನಿಯಂತ್ರಣ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ನೀಡಿದ ಸಲಹೆಗಳು ಹೀಗಿವೆ

ಇದರಿಂದ ಮತ್ತೆ ವಾಪಸ್‌ ಕಾಸರಗೋಡಿನ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋದರೂ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದ ಕಾರಣದಿಂದಾಗಿ ವೃದ್ದೆ ಮೃತಪಟ್ಟಿದ್ದಾರೆ. ಅಂಬುಲೆನ್ಸ್‌ಗೆ ಅವಕಾಶ ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಹುತೇಕ ಕನ್ನಡಿಗರನ್ನೇ ಒಳಗೊಂಡಿರುವ ಗಡಿ ಜಿಲ್ಲೆಯಾದ ಕಾಸರಗೋಡಿನ ಜನರು ಮಂಗಳೂರಿನ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಹೀಗಿದ್ದರೂ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಮಂಗಳೂರಿಗೆ ಬರಲು ಅವಕಾಶ ನೀಡದಿರುವುದು ಗಡಿ ಭಾಗದ ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯಪುರ: ದಾರಿ ಕಾಣದಾಗಿದ್ದ ರಾಜಸ್ಥಾನ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತ

ಕೇರಳ-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪರಿಣಾಮ ಹೆರಿಗೆ ಸೇರಿದಂತೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಜನರು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರು ಜಿಲ್ಲಾಡಳಿತ ಸ್ಪಂದಿಸಬೇಕು ಎಂದು ಗಡಿಭಾಗದ ಜನರು ಒತ್ತಾಯಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ