ಆ್ಯಪ್ನಗರ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾತನ ರಕ್ಷಣೆ

ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ವಿ.ಜಿ ಸಿದ್ಧಾರ್ಥ ಸಾವಿನ ಪ್ರಕರಣ ಮಾಸುವ ಮುನ್ನವೇ, ಉಳ್ಳಾಲದ ನೇತ್ರಾವತಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Vijaya Karnataka Web 4 Aug 2019, 8:47 pm
ಮಂಗಳೂರು: ಉಳ್ಳಾಲ ಸೇತುವೆಯಿಂದ ಭಾನುವಾರ ಸಂಜೆ ನದಿಗೆ ಹಾರಿದ ವ್ಯಕ್ತಿಯೊಬ್ಬರು ಕೊನೇ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿ ದಡದತ್ತ ಈಜಿಕೊಂಡು ಬಂದಿದ್ದು, ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಿದ್ದಾರೆ.
Vijaya Karnataka Web Girish


ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಆತ್ಮಹತ್ಯೆಗೆ ಯತ್ನಿಸಿದವರು. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿರೀಶ್ ನಗರದ ಉರ್ವ ಸ್ಟೋರ್‌ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದು, ಅವರ ಪತ್ನಿ ನಗರದ ಕೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟ್ರರ್ಸ್‌ನಲ್ಲಿ ವಾಸಿಸುತ್ತಿದ್ದರು.

ಭಾನುವಾರ ಸಂಜೆ ನಗರದಿಂದ ಉಳ್ಳಾಲ ಕಡೆಗೆ ತೆರಳಿದ ಗಿರೀಶ್ ಸೇತುವೆಯಿಂದ ನೇತ್ರಾವತಿ ನದಿ ನೀರಿಗೆ ಹಾರಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ. ಆದರೆ ನೀರಿಗೆ ಜಿಗಿದ ಬಳಿಕ ಪತ್ನಿ, ಮಗುವಿನ ನೆನಪಾಗಿ ಈಜಿ ದಡ ಸೇರುವೆ ಪ್ರಯತ್ನ ಮಾಡಿದ್ದಾರೆ. ಗಿರೀಶ್ ನದಿಗೆ ಹಾರಿದ್ದನ್ನು ತೊಕ್ಕೊಟ್ಟು ಕಡೆಯಿಂದ ಬರುವವರು ಮತ್ತು ಮೀನುಗಾರರು ನೋಡಿದ್ದಾರೆ. ಈ ಸಂದರ್ಭ ಗಿರೀಶ್ ನೀರಿನಲ್ಲಿ ಈಜಿಕೊಂಡು ದಡದತ್ತ ಬರುವುದನ್ನು ಗಮನಿಸಿ ಕೂಡಲೇ ತೆರಳಿ ಅವರನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಪೊಲೀಸರು ಹಾಗೂ ಸಾರ್ವಜನಿಕರು ಗಿರೀಶ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮಾಸದ ಕಹಿನೆನಪು: ಜು. 29ರಂದು ಉದ್ಯಮಿ ಸಿದ್ದಾರ್ಥ್ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾಗಿದ್ದರು. ಜು.31ರಂದು ಅವರ ಮೃತದೇಹ ಬೆಳಗ್ಗೆ ಹೊಯ್ಗೆಬಜಾರ್ ಬಳಿ ಪತ್ತೆಯಾಗಿದ್ದು, ಈ ನೆನಪು ಮಾಸುವ ಮುನ್ನವೇ ಮತ್ತೊಬ್ಬ ವ್ಯಕ್ತಿ ಅದೇ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ಒಂದು ಕ್ಷಣ ಪ್ರತ್ಯಕ್ಷದರ್ಶಿಗಳನ್ನು ಆತಂಕಕ್ಕೆ ತಳ್ಳಿತ್ತು.

ಮೊದಲು ಸಮುದ್ರದಲ್ಲಿ ಸಾಯುವುದಕ್ಕಾಗಿಯೇ ಹೊರಗಿನಿಂದ ಜನ ಬರುವವರಿದ್ದರು. ನೇತ್ರಾವತಿ ನದಿಯಲ್ಲಿ ಸಾಯಲು ಧರ್ಮಸ್ಥಳ ಆಯ್ದುಕೊಳ್ಳುವವರೂ ಇದ್ದರು. ಮೊನ್ನೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದ ಬಳಿಕ ಉಳ್ಳಾಲ ಸೇತುವೆಯೂ ಸುಸೈಡ್ ಪಾಯಿಂಟ್ ಆಗಿ ಕುಖ್ಯಾತಿ ಪಡೆಯವ ಅಪಾಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ