ಆ್ಯಪ್ನಗರ

ನೀರಿಗೆ ಪರದಾಟ: ಹೋಟೆಲ್‌ನಲ್ಲಿ ಕಾಗದ ಪ್ಲೇಟ್‌, ಲೋಟ

ನಗರದ ನಿವಾಸಿಗಳಿಗೆ ಮಾತ್ರವಲ್ಲದೆ ಆಸ್ಪತ್ರೆ, ಹೊಟೇಲ್‌, ಶಾಪ್‌, ಮಾಲ್‌ಗಳು ಸೇರಿದಂತೆ ವಾಣಿಜ್ಯ ಸಂಕೀರ್ಣಗಳಿಗೆ ನೀರಿನ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು, ಅಲ್ಲಲ್ಲಿ ನೀರಿನ ಮಿತಬಳಕೆಗೆ ಸ್ಟಿಕ್ಕರ್‌ ಹಾಕಿ ಆಗ್ರಹಗಳು ಕೇಳಿ ಬಂದಿದೆ.

Vijaya Karnataka Web 18 May 2019, 4:07 pm
ಮಂಗಳೂರು: ಕಡಲತಡಿಯ ಮಂಗಳೂರಿಗೆ ಕುಡಿಯುವ ನೀರಿನ ಬರ ಬಿಗಡಾಯಿಸುತ್ತಿದ್ದು, ಇನ್ನು 1 ವಾರದೊಳಗೆ ಮಳೆ ಬಾರದಿದ್ದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಮಂಗಳೂರಿನ ನೀರಿನ ಅಭಾವ ಹೇಗಿದೆಯೆಂದರೆ ಹೋಟೆಲ್‌ಗಳಲ್ಲಿ ಕಾಗದ ಪ್ಲೇಟ್‌, ಪ್ಲಾಸ್ಟಿಕ್‌ ಲೋಟ ಬಳಕೆ ಮಾಡುತ್ತಿದ್ದಾರೆ.
Vijaya Karnataka Web water


ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಗುರುವಾರ ಸಂಜೆಯ ವೇಳೆಗೆ ನೀರಿನ ಮಟ್ಟ 3.7ಮೀ.ಗೆ ಇಳಿಕೆಯಾಗಿದೆ. ಇನ್ನು ನಿರಂತರ ನಾಲ್ಕು ದಿನ ನಗರದಲ್ಲಿ ನೀರು ಸರಬರಾಜು ಆಗಲಿದ್ದು, ಬಳಿಕ 4-4 ಆಧಾರದಲ್ಲಿ ರೇಶನಿಂಗ್‌ ಮುಂದುವರಿಯಲಿದೆ.

ಮಂಗಳೂರಿನ ನಿವಾಸಿಗಳಿಗೆ ಮಾತ್ರವಲ್ಲದೆ ಆಸ್ಪತ್ರೆ, ಹೊಟೇಲ್‌, ಶಾಪ್‌, ಮಾಲ್‌ಗಳು ಸೇರಿದಂತೆ ವಾಣಿಜ್ಯ ಸಂಕೀರ್ಣಗಳಿಗೆ ನೀರಿನ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು, ಅಲ್ಲಲ್ಲಿ ನೀರಿನ ಮಿತಬಳಕೆಗೆ ಸ್ಟಿಕ್ಕರ್‌ ಹಾಕಿ ಆಗ್ರಹಗಳು ಕೇಳಿ ಬಂದಿದೆ. ಮಂಗಳೂರಿನ ಕೆಲವು ವಾಣಿಜ್ಯಸಂಕೀರ್ಣ, ಅಪಾರ್ಟ್‌ಮೆಂಟ್‌ಗಳು, ಹೊಟೇಲ್‌ಗಳು ಸರಿಯಾಗಿ ನೀರಿನ ಸರಬರಾಜುಗಳಿಲ್ಲದೆ ಟ್ಯಾಂಕರ್‌ ನೀರನ್ನು ಆಶ್ರಯಿಸಿವೆ. ಹೊಟೇಲ್‌ಗಳಲ್ಲಿ ನೀರಿನ ಅಭಾವವಿರುವ ಕಾರಣ ಸ್ಟೀಲ್‌ ಪ್ಲೇಟ್‌, ಲೋಟಗಳ ಬದಲು ಕಾಗದ ಪ್ಲೇಟ್‌, ಲೋಟ, ಪ್ಲಾಸ್ಟಿಕ್‌ ಲೋಟಗಳು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

ನಗರದಲ್ಲಿ ವಾಹನಗಳ ತೊಳೆಯುವ ಸರ್ವಿಸ್‌ ಸೆಂಟರ್‌ಗಳು ನೀರಿನ ಕೊರತೆಯಿಂದ ವಾಹನಗಳನ್ನು ಸರ್ವಿಸ್‌ಗೆ ತೆಗೆದುಕೊಳ್ಳುತ್ತಿಲ್ಲ. ನಗರದ ಪಿವಿಎಸ್‌ ಸಮೀಪದ ಕ್ಲಿನಿಕ್‌ ಸೆಂಟರ್‌ನಲ್ಲಿ ನೀರಿನ ಅಭಾವದಿಂದ ಡಾಕ್ಟರ್‌ ಭೇಟಿ ಸಮಯವನ್ನು ಒಂದೇ ಪಾಳಿಗೆ ಸೀಮಿತಗೊಳಿಸಲಾಗಿದೆ.

ಹಳೇ ಡ್ಯಾಂಗಿಂತ ಇಳಿಕೆ
ತುಂಬೆಯಲ್ಲಿ ಹಳೇ ವೆಂಟೆಡ್‌ ಡ್ಯಾಂ 3.9 ಮೀಟರ್‌ ಎತ್ತರವಿದ್ದು ಬುಧವಾರ ಸಂಜೆ ವೇಳೆ ನೀರಿನ ಡ್ಯಾಂ ಹಳೇ ಡ್ಯಾಂಗಿಂತಲೂ ಕೆಳಮಟ್ಟಕ್ಕೆ ಇಳಿದಿದೆ. ಇದರಿಂದ ಹಳೇ ಡ್ಯಾಂ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಳೇ ಡ್ಯಾಂ ತಳದಲ್ಲಿ ಹೂಳು ತುಂಬಿದ್ದು ಆ ವ್ಯಾಪ್ತಿಯಲ್ಲಿ ಹೆಚ್ಚು ನೀರು ಶೇಖರಣೆಯಾಗಿರುವುದು ಅನುಮಾನ ಎನ್ನುತ್ತಾರೆ ಡ್ಯಾಂ ಸಿಬ್ಬಂದಿ. ಈಗ ಸಂಗ್ರಹವಾಗಿರುವ ನೀರನ್ನು 4-4 ರೇಶನಿಂಗ್‌ ಆಧಾರದಲ್ಲಿ ಜೂನ್‌ 5ರ ತನಕ ನೀಡಬಹುದು ಎನ್ನುತ್ತಾರೆ ಅಧಿಕಾರಿಗಳು.

ನಗರದಲ್ಲಿ ಪ್ರಸ್ತುತ 4-4ಮಾದರಿಯಲ್ಲಿ ರೇಷನಿಂಗ್‌ ಮಾಡಲಾಗಿದ್ದು, ತುಂಬೆ ಡ್ಯಾಂನಲ್ಲಿರುವ ನೀರು ಜೂನ್‌ ಮೊದಲ ವಾರದವರೆಗೆ ನಿರ್ವಹಣೆ ಮಾಡಲು ಸಾಧ್ಯವಿದೆ. ಕರಾವಳಿಗೆ ಮಳೆ ಬರುವತನಕ ನೀರು ನಿರ್ವಹಣೆ ಮಾಡಲು ಜಿಲ್ಲಾಡಳಿತ ಸಂಪೂರ್ಣ ಶ್ರಮಿಸುತ್ತಿದ್ದು, ಇದಕ್ಕೆ ಜನರ ಸಹಕಾರ ಮುಖ್ಯವಾಗಿದೆ.
ಸಸಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ