ಆ್ಯಪ್ನಗರ

ಮಂಗಳೂರು ದಸರಾ ಮಹೋತ್ಸವ ವೈಭವ ಗಣಪತಿ, ನವದುರ್ಗೆ ಸಹಿತ ಶಾರದೆ ಪ್ರತಿಷ್ಠಾಪನೆ , ಅತ್ಯಾಕರ್ಷಕ ದರ್ಬಾರು ಮಂಟಪ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾಗಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

Vijaya Karnataka 30 Sep 2019, 5:00 am
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾಗಿ ಶ್ರೀ ಮಹಾಗಣಪತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.
Vijaya Karnataka Web 29my kuduruli (4)


ಬೆಳಗ್ಗೆ 10.45ಕ್ಕೆ ಶಾರದಾ ಮಾತೆಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಮಂಟಪಕ್ಕೆ ಕರೆತರಲಾಯಿತು. ಬ್ಯಾಂಡ್‌, ಕೊಂಬು ವಾದ್ಯ, ಚೆಂಡೆ ತಂಡ, ಶಾರದಾ ಹುಲಿವೇಷ ತಂಡ ನರ್ತನ ಮೂಲಕ ಮೆರುಗು ನೀಡಿದವು. ಬಳಿಕ ಶಾರದೆ ಮೂರ್ತಿಯನ್ನು ದರ್ಬಾರು ಮಂಟಪಕ್ಕೆ ಕೊಂಡೊಯ್ಯಲಾಯಿತು.

10.55ಕ್ಕೆ ಮಹಾಗಣಪತಿಯ ಪ್ರತಿಷ್ಠಾಪನೆ, ಬಳಿಕ ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ, ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆ, ಪೂಜೆ ನಡೆಯಿತು. ಮಂಗಳೂರು ಪೊಲೀಸ್‌ ಕಮಿಷನರ್‌ ಡಾ. ಪಿ.ಎಸ್‌. ಹರ್ಷ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. 11.20ಕ್ಕೆ ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಿತು. 12.30ಕ್ಕೆ ಪುಷ್ಪಾಲಂಕಾರ ನಡೆದು ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ಆರಂಭಗೊಂಡಿತು.

ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ರವೀಶ್‌ ಶಂಕರ್‌ ಮಿಜಾರು, ಕೆ. ಮಹೇಶ್ಚಂದ್ರ, ಮಾಲತಿ ಜನಾರ್ದನ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್‌, ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್‌, ಬಿ.ಜಿ. ಸುವರ್ಣ, ಶೇಖರ್‌ ಪೂಜಾರಿ, ಜತಿನ್‌ ಅತ್ತಾವರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್‌, ಅನಸೂಯ ಬಿ.ಟಿ. ಸಾಲಿಯಾನ್‌, ಲೀಲಾಕ್ಷ ಬಿ. ಕರ್ಕೇರ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಜಯಂತ್‌ ನಡುಬೈಲ್‌ ಮತ್ತಿತರರು ಉಪಸ್ಥಿತರಿದ್ದರು.

ಮೊದಲ ದಿನವೇ ಭಕ್ತರ ದಂಡು: ಮಂಗಳೂರು ದಸರಾ ಮಹೋತ್ಸವ ಮೊದಲ ದಿನವೇ ಭಾನುವಾರವಾದ ಕಾರಣ ಬೆಳಗ್ಗಿನಿಂದಲೇ ದೇವಾಲಯಕ್ಕೆ ಭಕ್ತರ ದಂಡು ಹೆಚ್ಚಿತ್ತು. ಪ್ರತಿಷ್ಠಾಪನೆಯ ಹೊತ್ತು ಇಡೀ ದರ್ಬಾರು ಮಂಟಪ ಜನಸಾಗರದಲ್ಲಿತುಂಬಿ ತುಳುಕುತ್ತಿತ್ತು. ಮಧ್ಯಾಹ್ನ 8 ಸಾವಿರಕ್ಕೂ ಅಧಿಕ ಮಂದಿ ದೇವರ ಅನ್ನಪ್ರಸಾದ ಸ್ವೀಕರಿಸಿದರು.

ಧಾರ್ಮಿಕ, ಸಂಸ್ಕೃತಿಯ ಅನಾವರಣ: ಕಮಿಷನರ್‌

ಮಂಗಳೂರು ದಸರಾ ಮಹೋತ್ಸವ ಅತ್ಯಂತ ವಿಶಿಷ್ಟವಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ, ಕಲಾ ವೈಭವ ಈ ಕ್ಷೇತ್ರದಲ್ಲಿಸಾಕಾರಗೊಂಡಿದೆ. ಅತ್ಯಂತ ಮನೋಜ್ಞ, ಅರ್ಥಪೂರ್ಣವಾಗಿ ದಸರಾ ವೈಭವ ಅನಾವರಣಗೊಂಡಿದ್ದು, ಈ ಮುಖೇನ ಮಂಗಳೂರಿನ ಸಮೃದ್ಧ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸವಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ತಿಳಿಸಿದರು.

ಮಂಗಳೂರು ನಗರ ದಸರಾ ಮಹೋತ್ಸವಕ್ಕೆ ಬೇರೆ ಬೇರೆ ಜಿಲ್ಲೆ, ರಾಜ್ಯದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದು, ಈ ಉತ್ಸವ ಯಶಸ್ವಿಯಾಗಿ ನಡೆಸಲು ಪೊಲೀಸರು ಸರ್ವ ರೀತಿಯ ಸಹಕಾರ ನೀಡಲಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಭೆ ನಡೆಸಲಾಗಿದ್ದು, ಭದ್ರತೆ ವಿಷಯದಲ್ಲೂಹೆಚ್ಚಿನ ನಿಗಾಯಿಡಲಾಗಿದೆ ಎಂದರು.


ಆಕರ್ಷಕ ದರ್ಬಾರು ಮಂಟಪ

ಮಂಗಳೂರು ದಸರಾದ ದರ್ಬಾರ್‌ ಮಂಟಪದ ವಿನ್ಯಾಸವನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದ್ದು, ಗುಂಬಜ್‌ ಮಾದರಿಯಲ್ಲಿರಚಿಸಲಾಗಿದೆ. ಆ್ಯಂಟಿಕ್‌ ಕಲರ್‌ ಬಳಕೆ ಮಾಡಿರುವುದರಿಂದ ಸ್ವರ್ಣ ಶೋಭೆಯಲ್ಲಿಮತ್ತಷ್ಟು ವೈಭವ ಎದ್ದು ಕಾಣುತ್ತದೆ. ಶಾರದಾ ಮಂಟಪದ 14 ಅಕ್ರಿಲಿಕ್‌ ಝೂಮರ್‌ ಬಳಕೆ ಮಾಡಲಾಗಿದ್ದು, ಇದು ವಿದ್ಯುದ್ದೀಪಾಲಂಕಾರಗೊಂಡು ಮತ್ತಷ್ಟು ವೈಭವಯುತವಾಗಿ ಶೋಭಿಸುತ್ತಿದೆ.

1991ರಿಂದ ಚಂದ್ರಶೇಖರ್‌ ಸುವರ್ಣ ಮೂಲ್ಕಿ ನೇತೃತ್ವದ ತಂಡ ದರ್ಬಾರು ಮಂಟಪ ರಚನೆ ಮಾಡುತ್ತಿದ್ದು, 20 ಮಂದಿಯ ತಂಡ ಸುಮಾರು 18 ದಿನಗಳಿಂದ ರಾತ್ರಿ ಹಗಲೆನ್ನದೆ ದುಡಿಯುತ್ತಿದೆ.

ನವರಂಗ್‌ ಶೋಭಿತ ಶಾರದೆ

ನವರಾತ್ರಿ ಸುಸಂದರ್ಭ ವಿಜಯ ಕರ್ನಾಟಕ ಆಯೋಜಿಸುತ್ತಿರುವ 'ನವರಂಗ್‌' ರಾಜ್ಯಾದ್ಯಂತ ಜನಮನಸೂರೆಗೊಂಡಿದ್ದು, ಭಾನುವಾರ ನವರಂಗ್‌ನಲ್ಲಿಕಿತ್ತಾಳೆ(ಆರೆಂಜ್‌) ಬಣ್ಣವಾಗಿತ್ತು. ಮಂಗಳೂರು ದಸರಾ ಮಹೋತ್ಸವದ ಶಾರದೆಯೂ ಕಿತ್ತಾಳೆ ಬಣ್ಣದೊಂದಿಗೆ ಶೋಭಿಸುತ್ತಿದ್ದು ಎಲ್ಲರ ಗಮನ ಸೆಳೆಯಿತು.

ವೀಣಾಧಾರಿಯಾಗಿರುವ ಶಾರದೆ ಸ್ವರ್ಣಾಭರದೊಂದಿಗೆ ಸರ್ವಾಲಂಕೃತಗೊಂಡು, ಕೈಯಲ್ಲಿತಾವರೆ ಹಿಡಿದುಕೊಂಡು, ಏಲಕ್ಕಿ ಮಾಲಾಧಾರಿಯಾಗಿ ಸ್ವರ್ಣಲೇಪಿತ ಕಿರೀಟದೊಂದಿಗೆ ಮಂದಸ್ಮಿತಳಾಗಿ ಭಕ್ತರನ್ನು ಹರಸುತ್ತಿದ್ದಳು. ಶಾರದೆಯ ಎಡಭಾಗದಲ್ಲಿರಜತ ಮಯೂರ ಶೋಭಿಸುತ್ತಿತ್ತು. ಶಾರದೆಯ ವೈಭವ ವೀಕ್ಷಿಸುತ್ತಿದ್ದ ಭಕ್ತಸಮೂಹ ದೂರದಲ್ಲೇ ಸೆಲ್ಫಿ, ಫೊಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದರು.

ಶಾರದೆಗೆ ಸ್ವರ್ಣ ಲೇಪಿತ ಕಿರೀಟ: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಈ ಬಾರಿ ಗೋಲ್ಡನ್‌(ಸ್ವರ್ಣ) ಪೈಂಟಿಂಗ್‌ ಬಳಿದಿರುವುದರಿಂದ ದೇಗುಲ ಸ್ವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ. ಅದರಲ್ಲೂಕತ್ತಲಾಗುತ್ತಿದ್ದಂತೆ ವಿದ್ಯುದ್ದೀಪಾಲಂಕಾರದಲ್ಲಿಮತ್ತಷ್ಟು ಕಳೆಗಟ್ಟಿದೆ. ಅದರಂತೆ ದರ್ಬಾರು ಮಂಟಪ ಸ್ವರ್ಣ ಶೋಭೆಯಲ್ಲಿಕಣ್ಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ರಜತ ಕಿರೀಟದಲ್ಲಿಶೋಭಿಸುತ್ತಿದ್ದ ಶಾರದೆ ಈ ಬಾರಿ ಸ್ವರ್ಣ ಲೇಪಿತ ಕಿರೀಟದಲ್ಲಿಭಕ್ತರಿಗೆ ಮತ್ತಷ್ಟು ಮುದ ನೀಡುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ