ಪುತ್ತೂರು: ಬಿಜೆಪಿ ಮತ್ತು ಪರಿವಾರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಮುರಳೀಕೃಷ್ಣ ಭಟ್ (38) ಅವರು ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಮೃತಪಟ್ಟಿದ್ದು, ಬುಧವಾರ ಪಾರ್ಥಿವ ಶರೀರದ ಯಾತ್ರೆ, ಅಂತಿಮ ದರ್ಶನ ಗ್ರಾಮದಲ್ಲಿ ನಡೆಯಿತು. ನೂರಾರು ಜನರು ಯುವ ಕಾರ್ಯಕರ್ತನ ದುರ್ಮರಣಕ್ಕೆ ಕಂಬನಿ ಮಿಡಿದರು.
ವಾರವಿಡೀ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವ ಉದ್ದೇಶವಿಟ್ಟುಕೊಂಡಿದ್ದ ಶಾಸಕರು, ಮಂಗಳವಾರ ರಾತ್ರಿ ನಿಷ್ಠಾವಂತ ಕಾರ್ಯಕರ್ತನ ದುರ್ಮರಣದ ಸುದ್ದಿ ತಿಳಿಯುತ್ತಲೇ ಸ್ಥಳೀಯ ನಾಯಕರು, ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡರು. ಬುಧವಾರದ ಕಲಾಪವನ್ನು ಕೈಬಿಟ್ಟು ರಾತ್ರಿಯೇ ಊರಿಗೆ ಹೊರಟರು.
ಅಂತಿಮ ಯಾತ್ರೆ: ಬುಧವಾರ ಬೆಳಗ್ಗೆ ಪುತ್ತೂರಿನ ಶವಾಗಾರದಿಂದ ಪಾರ್ಥಿವ ಶರೀರ ಕೊಂಡೊಯ್ದು ಇರ್ದೆ ಜಂಕ್ಷನ್ ಬಳಿಯಿಂದ ಮೆರವಣಿಗೆ ನಡೆಸಲಾಯಿತು. ಶಾಸಕ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾಒಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಮುಖಂಡರಾದ ರಾಧಾಕೃಷ್ಣ ಬೋರ್ಕರ್, ನಿತೀಶ್ ಕುಮಾರ್ ಶಾಂತಿವನ, ಜಿಲ್ಲಾಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಿಡ್ಪಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ವೆಂಕಟರಮಣ ಬೋರ್ಕರ್, ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಬೆಟ್ಟಂಪಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಪಾಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಸದಾಶಿವ ರೈ ಸೂರಂಬೈಲು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯನಗರ ಪಂಚಾಯಿತಿ ಕಟ್ಟಡದ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ ಮುಂಡೂರು ಸ್ವಗೃಹಕ್ಕೆ ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸಲಾಯಿತು.
ತೋಟದಿಂದ ಕಾರು ಮೇಲಕ್ಕೆ
ಮುರಳೀಕೃಷ್ಣ ಭಟ್, ನವನೀತ್, ದಿಲೀಪ್, ಶಶಿ ಮಂಗಳವಾರ ರಾತ್ರಿ ಕಾರಿನಲ್ಲಿ ಪುತ್ತೂರಿನಿಂದ ಬೆಟ್ಟಂಪಾಡಿ ಕಡೆಗೆ ಹೋಗುತ್ತಿದ್ದಾಗ ಸಂಟ್ಯಾರ್ ಸಮೀಪದ ಬಳಕ್ಕ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಕ್ಕದ ತೋಟಕ್ಕೆ ಉರುಳಿತ್ತು. ಮುರಳೀಕೃಷ್ಣ ಭಟ್ ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ.
ಡಿವೈಎಸ್ಪಿ ವೀರಯ್ಯ ಹಿರೇಮಠ್ ನೇತೃತ್ವದ ಪೊಲೀಸರ ತಂಡ ಸ್ಥಳೀಯರ ಸಹಕಾರದಿಂದ ಕ್ರೇನ್ ಮೂಲಕ ರಾತ್ರಿಯೇ ಕಾರನ್ನು ತೋಟದಿಂದ ಮೇಲೆತ್ತಲಾಯಿತು. ಅಪಘಾತ ನಡೆದ ಸ್ಥಳ ಅಪಾಯಕಾರಿಯಾಗಿದ್ದು, ಇಲ್ಲಿರಸ್ತೆ ಒಂದಷ್ಟು ಉಬ್ಬು ತಗ್ಗು ಮಾದರಿಯಲ್ಲಿದೆ. ಈ ಹಿಂದೆಯೂ ಇಲ್ಲಿ ಹಲವು ಅಪಘಾತಗಳು ಸಂಭವಿಸಿದೆ. ಇಲ್ಲಿವೈಜ್ಞಾನಿಕವಾಗಿ ರಸ್ತೆ ಅಗಲೀಕರಣ ಮಾಡುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅವಿವಾಹಿತ ಯುವಕ
ದಿ. ಶ್ರೀಧರ ಭಟ್ ಮುಂಡೂರು ಅವರ ಪುತ್ರ ಮುರಳೀಕೃಷ್ಣ ಭಟ್ ಬಜರಂಗ ದಳ, ವಿಹಿಂಪ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ನಿಡ್ಪಳ್ಳಿ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರು. ಅವರು ಅವಿವಾಹಿತರಾಗಿದ್ದರು.