ಆ್ಯಪ್ನಗರ

ಹಿಂದೂ ಯುವತಿಯ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ

ಜಾತಿ, ಧರ್ಮವನ್ನು ಮರೆತು ಹೆಣ್ಣುಮಗಳ ಬಾಳಿಗೆ ಬೆಳಕಾಗುವ ಮೂಲಕ ಈ ಮುಸ್ಲಿಂ ಯುವಕರ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

Vijaya Karnataka Web 20 Mar 2019, 2:40 pm
ಉಪ್ಪಿನಂಗಡಿ: ತೀರಾ ಬಡ ಕುಟುಂಬದ ಹಿಂದೂ ಧರ್ಮದ ಯುವತಿಯ ಮದುವೆಯೊಂದನ್ನು ನೆರೆಯ ಮುಸ್ಲಿಂಮರೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ದತೆ ಮೆರೆದ ಘಟನೆ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಸೋಮವಾರ ನಡೆದಿದೆ.
Vijaya Karnataka Web Marriage


ತೀರಾ ಬಡ ಕುಟುಂಬದ ರೇವತಿ ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದು, ಈಕೆಗೆ ಸಾಲ್ಮರದ ಯುವಕ ಶರತ್‌ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಈಕೆಗೆ ತಂದೆ ತಾಯಿ ಇದ್ದರೂ ಮುಂದೆ ನಿಂತು ಮದುವೆ ಮಾಡಿಸುವಷ್ಟು ಅವರು ಶಕ್ತರಾಗಿರಲಿಲ್ಲ. ಹೀಗಿರುವಾಗ ಅವರ ನೆರವಿಗೆ ಬಂದಿದ್ದು, ಅವರ ಮನೆ ಸಮೀಪದ ಮುಸ್ಲಿಮ್‌ ಯುವಕರು.


ಮಾನವೀಯತೆಯ ನಂಟಿನಿಂದ ಹುಡುಗಿಯ ಪರವಾಗಿ ಹುಡುಗನ ಮನೆಯವರನ್ನು ಮಾತನಾಡಿಸಿ ಮದುವೆಗೆ ದಿನ ನಿಗದಿ ಪಡಿಸಿದರು. ಈ ಸಂದರ್ಭ ಅವರೊಂದಿಗೆ ಯುವತಿಯ ಕೆಲ ಬಂಧುಗಳು ಕೂಡಿಕೊಂಡರು. ಅಕ್ಕ ಪಕ್ಕದ ಮನೆಗಳಿಂದ ಸೋಗೆಯನ್ನು ತಂದು ಚಪ್ಪರ ಹಾಕಿದರು.

ಲತೀಫ್‌ ಎಂಬವರ ಮನೆಯಲ್ಲಿ ಮದುಮಗಳನ್ನು ಶೃಂಗರಿಸಿ ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದರು. ಮದುವೆಯ ಅಂಗವಾಗಿ 150 ಮಂದಿಗೆ ಮಾಂಸದೂಟವನ್ನೂ ಸಿದ್ಧಪಡಿಸಿ ಉಣಬಡಿಸಿದರು. ಮಾಂಗಲ್ಯ ಸೂತ್ರ, ಮದುಮಗಳ 2 ಜತೆ ವಸ್ತ್ರವನ್ನೊಳಗೊಂಡಂತೆ ಎಲ್ಲ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಲತೀಫ್‌, ನಿಹಾ ಡ್ರೆಸ್ಸಸ್‌ನ ಮಾಲೀಕ ಕೆ. ಅಬೂಬಕ್ಕರ್‌, ಶಬೀರ್‌, ಅಶ್ರಫ್‌, ಕಬೀರ್‌, ಶಮೀರ್‌, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದರು.

ಜಾತಿ, ಧರ್ಮವನ್ನು ಮರೆತು ಹೆಣ್ಣುಮಗಳ ಬಾಳಿಗೆ ಬೆಳಕಾಗುವ ಮೂಲಕ ಈ ಮುಸ್ಲಿಂ ಯುವಕರ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ