ಆ್ಯಪ್ನಗರ

ಸಂಘಟಿತ ಪ್ರಯತ್ನದಿಂದ ಬಿಜೆಪಿ ಗೆಲುವು: ನಳಿನ್‌ ಕುಮಾರ್ ಕಟೀಲ್

'ನಾನು ನಾಯಕನಲ್ಲ, ಸಾಮಾನ್ಯ ಕಾರ್ಯಕರ್ತ. ನನಗೆ ಪಕ್ಷದ ಹಿರಿಯರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಸಾಮೂಹಿಕ ನಾಯಕತ್ವದಡಿ ಬಿಜೆಪಿ ಗೆಲುವು ಸಾಧ್ಯ ಎಂಬುವುದಕ್ಕೆ ಈ ಉಪಚುನಾವಣೆ ಸಾಕ್ಷಿಯಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Vijaya Karnataka Web 11 Nov 2020, 6:20 am
ಮಂಗಳೂರು: ಭಾರತೀಯ ಜನತಾ ಪಕ್ಷದ ನಾಯಕರು, ಕಾರ್ಯಕರ್ತ ಸಂಘಟಿತ ಪ್ರಯತ್ನದಿಂದ ಉಪಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ. ಪ್ರಜ್ಞಾವಂತ ಮತದಾರರು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪನವರ ಅಭಿವೃದ್ಧಿ ಪರವಾದ ಆಡಳಿತವನ್ನು ಬೆಂಬಲಿಸಿ ಚುನಾವಣೆಯಲ್ಲಿ ಆಶೀರ್ವದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
Vijaya Karnataka Web ನಳೀನ್ ಕುಮಾರ್ ಕಟೀಲ್


ಆರ್‌.ಆರ್‌.ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ದ.ಕ ಜಿಲ್ಲಾ ಬಿಜೆಪಿ ಕಚೇರಿ ಎದುರು ಮಂಗಳವಾರ ನಡೆದ ವಿಜಯೋತ್ಸವ ಕಾರ್ಯಕ್ರಮ ಬಳಿಕ ಅವರು ಮಾತನಾಡಿದರು.
ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ? ಸ್ಪಷ್ಟನೆ ನೀಡಿದ ಯಡಿಯೂರಪ್ಪ

ಬಿಜೆಪಿ ಶಿರಾದಲ್ಲಿಇತಿಹಾಸ ಸೃಷ್ಟಿಸಿದರೆ, ಆರ್‌.ಆರ್‌.ನಗರದಲ್ಲಿ ನಿರೀಕ್ಷೆ ಮೀರಿ ಗೆಲುವು ಸಾಧಿಸಿದೆ. ಯಡಿಯೂರಪ್ಪರ ನಾಯಕತ್ವ, ಆರ್‌.ಅಶೋಕ್‌, ಅರವಿಂದ ಲಿಂಬಾವಳಿ, ವಿಜಯೇಂದ್ರ, ರವಿಕುಮಾರ್‌, ನಾರಾಯಣ ಸ್ವಾಮಿ, ಸುರೇಶ್‌ ಗೌಡ, ಪ್ರತಾಪ ಸಿಂಹ ಮೊದಲಾದವರ ಸಾಮೂಹಿಕ ಶ್ರಮ ಕೂಡ ಗೆಲುವಿಗೆ ಕಾರಣ ಎಂದರು.
ಬೈ ಎಲೆಕ್ಷನ್: ಶಿರಾ, ಆರ್.ಆರ್. ನಗರದಲ್ಲಿ ಬಿಜೆಪಿ ಗೆಲುವಿಗೆ ನೆರವಾಯ್ತಾ ಜೆಡಿಎಸ್..?!
ಜಯಭೇರಿ ಮುಂದುವರಿಕೆ
ರಾಜ್ಯ ವಿಧಾನ ಪರಿಷತ್‌ 4 ಸ್ಥಾನ, ವಿಧಾನಸಭೆಯ 2 ಹಾಗೂ ಲೋಕಸಭೆಯ ಒಂದು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಮುಂದುವರಿಸಲಿದೆ. ದೇಶದ ಅಭಿವೃದ್ಧಿ, ರಕ್ಷಣೆಗೆ ನರೇಂದ್ರ ಮೋದಿ, ಬಿಜೆಪಿ ಬೇಕು ಎಂಬ ಭಾವನೆ ಜನರಲ್ಲಿದೆ. ಬಿಹಾರ, ಮಧ್ಯಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಮೋದಿ ಅವರ ಆಡಳಿತವನ್ನು ಮೆಚ್ಚಿ ಆಶೀರ್ವಾದ ಮಾಡುತ್ತಿದ್ದಾರೆ ಎಂದರು.
ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಜಯಭೇರಿ..! ಬಿಎಸ್‌ವೈ ಸಿಎಂ ಕುರ್ಚಿಗಿಲ್ಲ ಕಂಟಕ..? ಸಂಪುಟ ವಿಸ್ತರಣೆ ಸುಗಮ..?
ನಾನು ಸಾಮಾನ್ಯ ಕಾರ್ಯಕರ್ತ
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಅವರು, 'ನಾನು ನಾಯಕನಲ್ಲ, ಸಾಮಾನ್ಯ ಕಾರ್ಯಕರ್ತ. ನನಗೆ ಪಕ್ಷದ ಹಿರಿಯರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ಸಾಮೂಹಿಕ ನಾಯಕತ್ವದಡಿ ಬಿಜೆಪಿ ಗೆಲುವು ಸಾಧ್ಯ ಎಂಬುವುದಕ್ಕೆ ಈ ಉಪಚುನಾವಣೆ ಸಾಕ್ಷಿಯಾಗಿದೆ' ಎಂದರು.

ಬಿಜೆಪಿ ವಿಜಯೋತ್ಸವದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರು ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭ ಮೂಡಾ ಅಧ್ಯಕ್ಷ ರವಿಶಂಕರ್‌ ಮಿಜಾರು, ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾರ್ಪೊರೇಟರ್‌ಗಳಾದ ಪ್ರೇಮಾನಂದ್‌ ಶೆಟ್ಟಿ, ಸಂದೀಪ್‌ ಗರೋಡಿ, ಮನೋಹರ್‌ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ಮುಖಂಡರಾದ ಜಗದೀಶ್‌ ಶೇಣವ, ಸಂತೋಷ್‌ ಶೆಟ್ಟಿ ಬೊಳಿಯಾರು, ಜೆಸಿಂತಾ ಡಿಸಿಲ್ವಾ, ವಸಂತ್‌ ಪೂಜಾರಿ ಉಪಸ್ಥಿತರಿದ್ದರು.
ಬೈ ಎಲೆಕ್ಷನ್: ಕಾಂಗ್ರೆಸ್‌ನಲ್ಲಿ ಇದ್ದವರಿಂದಲೇ 'ಕೈ'ಗೆ ತಿರುಮಂತ್ರ..! ಫಲಿಸಿತು ಬಿಜೆಪಿ ತಂತ್ರ..!

ಹುಲಿಯಾ, ಬಂಡೆ ಯಾವುದೂ ಇಲ್ಲ

ಕಾಂಗ್ರೆಸ್‌ನ ಪಕ್ಷದ ಕೆಲವು ನಾಯಕರು ತಮ್ಮನ್ನು ತಾವೇ ಬಂಡೆ, ಹುಲಿಯಾ, ಟ್ರಬಲ್‌ ಶೂಟರ್‌ ಎಂಬಿತ್ಯಾದಿಯಾಗಿ ಕರೆದುಕೊಂಡಿದ್ದರು. ಆದರೆ ಜನರ ಆಶೀರ್ವಾದದ ಎದುರು ಅದ್ಯಾವುದೂ ಇಲ್ಲ. ಕಾಂಗ್ರೆಸ್‌ ಮುಖಂಡರು ಅಹಂಕಾರದ ವರ್ತನೆ ತೋರಿದ್ದಾರೆ ಎಂದು ನಳಿನ್‌ ಆರೋಪಿಸಿದರು. ಜಾತಿ ರಾಜಕಾರಣದ ಮೂಲಕ ಜಾತಿಗಳನ್ನು ಎತ್ತಿಕಟ್ಟಲು ಯತ್ನಿಸಿದರು. ಗೂಂಡಾಗಿರಿ ನಡೆಸಿದ್ದಲ್ಲದೆ, ರಾಜ್ಯದ ಮುಖ್ಯಮಂತ್ರಿ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಅಭಿವೃದ್ಧಿಯ ಎದುರು ಗೂಂಡಾಗಿರಿ ನಡೆಯಲಿಲ್ಲ. ಜನತೆ ಬಿಜೆಪಿ ಮೇಲಿಟ್ಟ ವಿಶ್ವಾಸಕ್ಕೆ ತಕ್ಕಂತೆ ಶಾಸಕರು ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದು ನಳಿನ್‌ ಹೇಳಿದರು.

ಉಪಚುನಾವಣೆ ಗೆಲುವು: ಬಿಜೆಪಿ ವಿಜಯೋತ್ಸವ
ಆರ್‌.ಆರ್‌.ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಂಗಳೂರಿನಲ್ಲಿರುವ ಬಿಜೆಪಿ ಜಿಲ್ಲಾಕಚೇರಿ ಎದುರು ಪಕ್ಷದ ಧ್ವಜ ಹಿಡಿದು ವಿಜಯೋತ್ಸವ ಘೋಷಣೆ ಕೂಗಿದರು. ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, 'ನರೇಂದ್ರ ಮೋದಿಯವರು ಮತ್ತು ಯಡಿಯೂರಪ್ಪನವರ ಅಭಿವೃದ್ಧಿಪರವಾದ ಆಡಳಿತಕ್ಕೆ ಜನ ಆಶೀರ್ವಾದ ಮಾಡಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರ ಸಾಮೂಹಿಕ ಶ್ರಮದಿಂದ ಗೆಲವು ಸಾಧ್ಯವಾಗಿದೆ' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ