ಉಪ್ಪಿನಂಗಡಿ: 27ನೇ ರಾಜ್ಯ ಮಟ್ಟದ ಅಂತರ್ಶಾಖಾ ಕರಾಟೆ ಸ್ಪರ್ಧೆ- 2016 ಡಿ.3 ಮತ್ತು 4ರಂದು ಉಪ್ಪಿನಂಗಡಿಯಲ್ಲಿ ನಡೆಯಲಿದ್ದು, 750ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, 60ಕ್ಕೂ ಹೆಚ್ಚು ರೆಫ್ರಿಗಳು ತೀರ್ಪುಗಾರರಾಗಿ ಸಹಕರಿಸಲಿದ್ದಾರೆ ಎಂದು ಕರಾಟೆ ಸ್ಪರ್ಧೆಯ ಸಂಘಟನಾ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ ತಿಳಿಸಿದರು.
ಮಂಗಳವಾರ ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಮಲೇಶ್ಯಾ ಇದರ ಅಂಗ ಸಂಸ್ಥೆಯಾದ ಇನ್ಸ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಆರ್ಟ್ಸ್ ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ಆಶ್ರಯದಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಸ್ಪರ್ಧೆ ನಡೆಯಲಿದೆ. ಈ ಹಿಂದೆಲ್ಲಾ ನಗರ ಪ್ರದೇಶದಲ್ಲಿ ಮಾತ್ರ ಆಯೋಜಿಸಲ್ಪಡುತ್ತಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯು ಈ ಬಾರಿ ಉಪ್ಪಿನಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲ್ಪಟ್ಟಿದೆ. 14 ರ ವಯೋಮಾನದ ಒಳಗಿನ ಸ್ಪರ್ಧಾಳುಗಳಿಗೆ ಡಿ.3ರಂದು ಸ್ಪರ್ಧೆ ನಡೆಯಲಿದ್ದು, 14 ರ ಮೇಲ್ಪಟ್ಟ ಸ್ಪರ್ಧಾಳುಗಳಿಗೆ ಡಿ.4ರಂದು ಸ್ಪರ್ಧೆಯು ನಡೆಯಲಿದೆ. ವಯೋಮಾನ ಹಾಗೂ ದೇಹದ ತೂಕವನ್ನಾಧರಿಸಿ ಕಟ್ಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರು, ಹಾವೇರಿ, ಹೊನ್ನಾವರ, ಶಿವಮೊಗ್ಗ, ಉಡುಪಿ, ದ.ಕ ಸೇರಿದಂತೆ ರಾಜ್ಯದ ಹಲವೆಡೆಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದು, ಸ್ಪರ್ಧಾಳುಗಳ ಹಾಗೂ ಸ್ಪರ್ಧಾ ಅಧಿಕಾರಿಗಳ ಅನುಕೂಲತೆಗಾಗಿ ವಸತಿ ವ್ಯವಸ್ಥೆ ಸಹಿತ ಇನ್ನಿತರ ವ್ಯವಸ್ಥೆಗಳನ್ನು ಈಗಾಗಲೇ ಅಂತಿಮ ಗೊಳಿಸಲಾಗಿದೆ ಎಂದ ಅವರು, ವಿಶಾಲವಾದ ಅಡಿಟೋರಿಯಂ ನಲ್ಲಿ ಆಯೋಜಿಸಲ್ಪಡುವ ಈ ಕರಾಟೆ ಸ್ಪರ್ದೆಯ ವಿವಿಧ ಆಯಾಮಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
27 ನೇ ರಾಜ್ಯ ಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧೆ -2016 ರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಅಶೋಕ್ ಕುಮಾರ್ ರೈ, ಜಿಲ್ಲಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ನಿರಂಜನ್ ರೈ ಬಾವಂತಬೆಟ್ಟು, ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ, ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಸಹಕಾರಿ ಯೂನಿಯನ್ ಒಕ್ಕೂಟದ ಜಿಲ್ಲಾಧ್ಯಕ್ಷ ಹರೀಶ್ ಆಚಾರ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ಜನ ಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಧನ್ಯ ಕುಮಾರ್ ರೈ, ಉಪ್ಪಿನಂಗಡಿ ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧ ಭಾಗವಹಿಸಲಿದ್ದಾರೆ.
ಡಿ. 4 ರಂದು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ. ಸದಸ್ಯ ಶಾಹುಲ್ ಹಮೀದ್ ಕೆ.ಕೆ, ಎಎಸ್ಪಿ ರಿಷಂತ್ ಸಿ.ಬಿ. , ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ, ಧಾರ್ಮಿಕ ಮುಂದಾಳು ಕರುಣಾಕರ ಸುವರ್ಣ, ಉಪ್ಪಿನಂಗಡಿ ಮಾಲಿಕ್ ದೀನಾರ್ ಮಸೀದಿಯ ಅಧ್ಯಕ್ಷ ಮುಸ್ತಾಫ ಕೆಂಪಿ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇಗುಲದ ಧರ್ಮಗುರು ರೋನಾಲ್ಡ್ ಪಿಂಟೋ, ಉದ್ಯಮಿ ಯು. ರಾಮ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರಾಟೆ ಸ್ಪರ್ಧಾ ಸಂಘಟಕ ಸೆನ್ಸಾಯ್ ಪ್ರವೀಣ್ ರೈ ಪಿ., ಸಂಯೋಜಕ ಕೆ. ಉಮೇಶ್ ಆಚಾರ್ಯ ಸವಣಾಲು, ಸಮಿತಿ ಕಾರ್ಯದರ್ಶಿಗಳಾದ ರವಿ ಇಳಂತಿಲ, ಹಾಗೂ ನವೀನ್ ಕುಮಾರ್ ನಟ್ಟಿಬೈಲ್ ಉಪಸ್ಥಿತರಿದ್ದರು.