ಆ್ಯಪ್ನಗರ

ಹೆತ್ತವರು ನನ್ನ ಕೊಲ್ಲ ಬೇಕೆಂದಿದ್ದರು, ಬಳಿಕ ಮಾರಿ ಬಿಟ್ಟರು: ಭಾರತದ ಪ್ರಥಮ ತೃತೀಯ ಲಿಂಗಿ ಮಿಸ್‌ ವರ್ಲ್ಡ್‌ ಡೈವರ್ಸಿಟಿ ನಾಝ್‌ ಜೋಶಿ

ವೆಲೆನ್ಸಿಯಾದ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಪರಿವರ್ತನಾ ಚಾರಿಟೆಬಲ್‌ ಟ್ರಸ್ಟ್‌, ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರು ಅಥವಾ ತೃತೀಯ ಲಿಂಗಿಗಳ ದಿನಾಚರಣೆಯಲ್ಲಿ ತಮ್ಮ ಜೀವನಾನುಭವ ಹಂಚಿಕೊಂಡರು.

Vijaya Karnataka 13 Mar 2019, 12:10 pm
ಮಂಗಳೂರು: ಪಂಜಾಬ್ ರಾಜ್ಯದ ಕುಟುಂಬದಲ್ಲಿ ಹುಟ್ಟಿದ್ದೆ. ನನಗೆ ಏಳು ವರ್ಷವಾದಾಗ ನಾನು ತೃತೀಯ ಲಿಂಗಿ ಹೆತ್ತವರಿಗೆ ಗೊತ್ತಾಯಿತು. ಆಗಲೇ ಕೊಲ್ಲಲು ಪ್ರಯತ್ನಿಸಿದರು. ಕೊನೆಗೆ ನನ್ನನ್ನು ಮಾರಾಟ ಮಾಡಿಬಿಟ್ಟರು.
Vijaya Karnataka Web ನಾಝ್‌ ಜೋಶಿ


ಇದು ‘2008ರ ಮಿಸ್ ವರ್ಲ್ಡ್ ಡೈವರ್ಸಿಟಿ ಕಿರೀಟ’ ಮುಡಿಗೇರಿಸಿಕೊಂಡಿರುವ ಭಾರತದ ಪ್ರಥಮ ತೃತೀಯ ಲಿಂಗಿ ನಾಝ್ ಜೋಶಿ ಹೇಳಿದ ತನ್ನ ಜೀವನ ಕಥೆ. ವೆಲೆನ್ಸಿಯಾದ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಪರಿವರ್ತನಾ ಚಾರಿಟೆಬಲ್ ಟ್ರಸ್ಟ್, ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಲೈಂಗಿಕ ಅಲ್ಪಸಂಖ್ಯಾತರು ಅಥವಾ ತೃತೀಯ ಲಿಂಗಿಗಳ ದಿನಾಚರಣೆಯಲ್ಲಿ ತಮ್ಮ ಜೀವನಾನುಭವ ಹಂಚಿಕೊಂಡರು.

ನನ್ನ ಮಾರಾಟ ನಡೆದ ಬಳಿಕ ಮುಂಬಯಿಗೆ ಬರಬೇಕಾಯಿತು. ಅಲ್ಲಿ ಬೀದಿ ಬೀದಿ ಸುತ್ತಾಡುತ್ತಿದ್ದೆ. ಹೊಟ್ಟೆ ತುಂಬಿಸಲು ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದೆ. ಅಸಹಾಯಕಳಾಗಿ, ಇತರ ತೃತೀಯ ಲಿಂಗಿಗಳಂತೆ ಭಿಕ್ಷಾಟನೆ, ಮೈ ಮಾರುವ ದಂಧೆಯಲ್ಲೂ ತೊಡಗಬೇಕಾಯಿತು. ನಾಲ್ಕು ವರ್ಷಗಳ ಕತ್ತಲ ಬದುಕು ನನ್ನದಾಗಿತ್ತು ಎಂದು ಸ್ಮರಿಸಿಕೊಂಡರು. ಮುಂಬಯಿಯಲ್ಲಿ ಶಾಲೆ, ಕಾಲೇಜು ಸೇರಿದೆ. ಖರ್ಚಿಗಾಗಿ ಬಾರ್ ಡ್ಯಾನ್ಸರ್ ಆದೆ. ಅಸಹಾಯಕ ಬದುಕಿನ ನಡುವೆಯೂ ಓದನ್ನು ಮುಂದುವರಿಸಿದೆ. ಫ್ಯಾಶನ್ ಡಿಸೈನರ್, ಮಾಡೆಲ್ ಆದೆ. ಬಹಳ ಪರಿಶ್ರಮ, ಹಲವಾರು ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ ಬಳಿಕ ಕೊನೆಗೊಂದು ದಿನ ವಿಶ್ವದ ಸುಂದರಿಯರ ಜತೆ ರ್ಸ್ಪಸಿ ಮಿಸ್ ಡೈವರ್ಸಿಟಿ ಕಿರೀಟ ಮುಡಿಗೇರಿಸಿಕೊಂಡೆ ಎಂದರು.

ಪ್ರಸಿದ್ಧ ತೆಹೆಲ್ಕಾ, ಅಮೆಝಾನ್ ಇಂಡಿಯಾ ಮುಂತಾದ ಮ್ಯಾಗಝೀನ್‌ಗಳ ಮುಖಪುಟಗಳಲ್ಲಿ ಕಾಣಿಸಿಕೊಂಡೆ. ನಾನು ನೋವು, ಕಷ್ಟಗಳಿಗೆ ಕುಗ್ಗಲಿಲ್ಲ. ಬದಲಾಗಿ ನನ್ನನ್ನು ನಾನು ದೃಢಳಾಗಿಸಿಕೊಂಡು ಮುಂದುವರಿದೆ. ಹೀಗಾಗಿ ಇಂದು ನಾನು ಈ ಸ್ಥಾನಕ್ಕೇರಿದ್ದೇನೆ. ಇಂದು ದೊಡ್ಡ ವೇದಿಕೆಗಳಲ್ಲಿ ಭಾಗವಹಿಸಲು ಹೆಮ್ಮೆ ಎನಿಸುತ್ತಿದೆ ಎಂದರು ನಾಝ್ ಜೋಶಿ.

ನಾವು ಸಮಾಜದ ಒಂದು ಭಾಗ. ನಾವು ಮಾಡುವ ಕೆಲಸದ ಜತೆಗೆ ನಾವು ಪ್ರಾಮಾಣಿಕರಾಗಿದ್ದರೆ ವಿಶ್ವವೇ ನಮ್ಮನ್ನು ಗುರುತಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಪ್ರಾಮಾಣಿಕತೆಯಿಂದ ಮುಂದುವರಿದಾಗ ಜಯ ಸಿಕ್ಕೇ ಸಿಗುತ್ತದೆ ಎಂದು ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷತೆ ವಹಿಸಿದ್ದ ರಮ್ಯಾ ಗೌಡ ಮಾತನಾಡಿ, ನಮ್ಮ ತೃತೀಯ ಲಿಂಗಿಗಳಲ್ಲಿ ಎಲ್ಲ್ಲ ಧರ್ಮೀಯರೂ ಇದ್ದಾರೆ. ನಾವೆಂದೂ ಬೇಧ ಭಾವ ಮಾಡಿಲ್ಲ. ನಾವು ಆಕಾಶದಿಂದ ಭೂಮಿಗೆ ಇಳಿದು ದವರಲ್ಲ. ನಾವೂ ತಾಯಿಯ ಗರ್ಭದಿಂದಲೇ ಜನಿಸಿದವರು. ನಮ್ಮನ್ನು ಸಮಾಜದಿಂದ ದೂರವಿರಿಸಬೇಡಿ ಎಂದು ಮನವಿ ಮಾಡಿದರು.

ನಾವು ಭಿಕ್ಷಾಟನೆ, ವೇಶ್ಯಾವಾಟಿಕೆಯನ್ನೂ ಮಾಡುತ್ತೇವೆ. ಇದು ನಮ್ಮ ಅಸಹಾಯಕತೆ. ಇಂತಹ ಕೆಲಸ ಮಾಡಲು ನಾಚಿಕೆಯಾಗುತ್ತದೆ. ಇದು ಅನಿವಾರ್ಯ. ಸುಪ್ರೀಂ ಕೋರ್ಟ್ ನಮಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿ ಗೌರವಿಸಿದರೂ, ಬಾಡಿಗೆ ಮನೆಯೂ ಸಿಗದಿರುವುದು ದುರಂತ. ಸ್ವಾಭಿಮಾನದ ಬದುಕು ನಡೆಸಲು ಕೈಜೋಡಿಸಿ ಎಂದು ಮನವಿ ಮಾಡಿದರು.

ತೃತೀಯ ಲಿಂಗಿಗಳ ದಿನಾಚರಣೆ ಅಂಗವಾಗಿ ಬಲೂನ್ ಹಾರಿಬಿಟ್ಟು ಕೇಕ್ ಕತ್ತರಿಸಲಾಯಿತು. ಬೆಂಗಳೂರಿನ ತೃತೀಯ ಲಿಂಗಿ ಪವಿತ್ರಮ್ಮ ಮತ್ತು ನಾಝ್ ಜೋಶಿ ಅವರನ್ನು ಸನ್ಮಾನಿಸಲಾಯಿತು. ಗಂಗಮ್ಮ ಎಂಬವರಿಗೆ ಗಾಲಿಕುರ್ಚಿಯನ್ನು ಎಂಆರ್‌ಪಿಎಲ್ ಮಹಾಪ್ರಬಂಧಕಿ ಲಕ್ಷ್ಮೀ ಕುಮಾರನ್ ಹಸ್ತಾಂತರಿಸಿದರು. ರೋಶನಿ ನಿಲಯದ ಪ್ರಿನ್ಸಿಪಾಲ್ ಜೂಲಿಯೆಟ್ ಉಪಸ್ಥಿತರಿದ್ದರು. ಟ್ರಸ್ಟ್‌ನ ಸಂಸ್ಥಾಪಕಿ ವಾಯ್ಲೆಟ್ ಪಿರೇರ ಪ್ರಾಸ್ತಾವಿಕ ಮಾತನಾಡಿದರು. ಸಂಧ್ಯಾ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ