ಆ್ಯಪ್ನಗರ

ಮಾಲ್‌ಗಳಲ್ಲಿ ಪಾರ್ಕಿಂಗ್‌ ಶುಲ್ಕ : ಮೈಸೂರು ಪಾಲಿಕೆ ನಿಯಮಾವಳಿ ತರಿಸಿ ಚರ್ಚಿಸಿ ಕ್ರಮ

ಮಾಲ್‌ಗಳಲ್ಲಿ ನಿಯಮಾವಳಿ ಪ್ರಕಾರ ಪಾರ್ಕಿಂಗ್‌ ಶುಲ್ಕ ವಿಧಿಸುವಂತಿಲ್ಲ. ಮೈಸೂರಿನಲ್ಲಿ ಈ ಕುರಿತು ಪಾಲಿಕೆ ಹೊಸ ನಿಯಮ ಜಾರಿಗೆ ತಂದಿದೆ. ನಗರದಲ್ಲೂ ಅದೇ ಮಾದರಿ ಅನುಸರಿಸಲು ಮೈಸೂರಿನಿಂದ ನಿಯಮಾವಳಿ ತರಿಸಿ ಮಂಗಳೂರು ಮಹಾನಗರಪಾಲಿಕೆ ಜತೆ ಚರ್ಚಿಸಲಾಗುವುದು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್‌ ಆಯುಕ್ತ ಲಕ್ಷ್ಮೇ ಗಣೇಶ್‌ ಹೇಳಿದರು.

Vijaya Karnataka 10 Aug 2019, 4:26 pm
ಮಂಗಳೂರು: ನಗರದ ಮಾಲ್‌ಗಳಲ್ಲಿ ನಿಯಮಾವಳಿ ಪ್ರಕಾರ ಪಾರ್ಕಿಂಗ್‌ ಶುಲ್ಕ ವಿಧಿಸುವಂತಿಲ್ಲ. ಮೈಸೂರಿನಲ್ಲಿ ಈ ಕುರಿತು ಪಾಲಿಕೆ ಹೊಸ ನಿಯಮ ಜಾರಿಗೆ ತಂದಿದೆ. ನಗರದಲ್ಲೂ ಅದೇ ಮಾದರಿ ಅನುಸರಿಸಲು ಮೈಸೂರಿನಿಂದ ನಿಯಮಾವಳಿ ತರಿಸಿ ಮಂಗಳೂರು ಮಹಾನಗರಪಾಲಿಕೆ ಜತೆ ಚರ್ಚಿಸಲಾಗುವುದು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್‌ ಆಯುಕ್ತ ಲಕ್ಷ್ಮೇ ಗಣೇಶ್‌ ಹೇಳಿದರು.
Vijaya Karnataka Web 9my phone in


ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಲ್‌ಗಳಲ್ಲಿ ಪಾರ್ಕಿಂಗ್‌ ಶುಲ್ಕ ವಿಧಿಸುವುದರಿಂದ ಮಾಲ್‌ ಹೊರಭಾಗದಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್‌ ಮಾಡಲಾಗುತ್ತದೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.

ಇದಕ್ಕೆ ಉತ್ತರ ನೀಡಿದ ಡಿಸಿಪಿ, ಮಾಲ್‌ಗಳಲ್ಲಿ ಪಾರ್ಕಿಂಗ್‌ಗೆ ದುಡ್ಡು ನೀಡಿ, ಟೋಕನ್‌ ಪಡೆದು ಮಾಲ್‌ನಲ್ಲಿ ಖರೀದಿ ವೇಳೆ ಕೂಪನ್‌ ರೀತಿಯಲ್ಲಿ ಬಳಸಲಾಗುತ್ತದೆ. ಇದೊಂದು ಉತ್ತಮ ಕ್ರಮವಾಗಿದ್ದು, ಮನಪಾ ಕಮಿಷನರ್‌ ಜತೆ ಚರ್ಚಿಸಲಾಗುವುದು ಎಂದರು.

ಕೋಟ್ಪಾ ಪರಿಣಾಮಕಾರಿ ಜಾರಿ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದರೂ, ಕೆಲವು ಕಡೆ ಧೂಮಪಾನ ರಾಜಾರೋಷವಾಗಿ ನಡೆಯುತ್ತಿದೆ. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿಯೂ ಧೂಮಪಾನ ಸಾರ್ವಜನಿಕವಾಗಿ ಮಾಡುವಂತಿಲ್ಲ. ಧೂಮಪಾನ ನಡೆಸುವವರ ವಿರುದ್ಧ ಕೋಟ್ಪಾ ಕಾಯಿದೆಯಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹನುಮಂತರಾಯ ಹೇಳಿದರು.

ಫ್ಲೆಕ್ಸ್‌ ಬ್ಯಾನರ್‌ಗಳಿಗಿಲ್ಲ ನಿಷೇಧ: ಅಂಗಡಿಗಳಲ್ಲಿ ಮಾರಾಟ ಮಾಡುವ ಪ್ಲಾಸ್ಟಿಕ್‌ ಚೀಲಕ್ಕೂ ನಿಷೇಧ ಹೇರಲಾಗಿದೆ. ಆದರೆ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳು ಪ್ಲಾಸ್ಟಿಕ್‌ನಿಂದ ಮಾಡಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಮೂಲ್ಕಿಯಲ್ಲಿ ಇಂತಹ ಸಾಕಷ್ಟು ಫ್ಲೆಕ್ಸ್‌ಗಳನ್ನು ಕಾಣಬಹುದು ಎಂದು ಸಾರ್ವಜನಿಕರೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ಅನಧಿಕೃತವಾಗಿ ಪ್ಲೆಕ್ಸ್‌, ಬ್ಯಾನರ್‌ ಹಾಕುವಂತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಲಪಾಡಿಯಿಂದ ಪಂಪ್‌ವೆಲ್‌ ಹೋಗುವ ದಾರಿಯಲ್ಲಿ ನೇತ್ರಾವತಿ ಸೇತುವೆಯ ಅಂಚಿನ ಎರಡೂ ಕಡೆಗಳಲ್ಲಿ ಸೇತುವೆಯ ಕಾಂಕ್ರೀಟ್‌ ರಸ್ತೆಗೆ ಸಮಾಂತರವಾಗಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗಮನಕ್ಕೆ ತರುವುದಾಗಿ ಡಿಸಿಪಿ ತಿಳಿಸಿದರು.

ಮನಪಾದಿಂದ ಸ್ಪಂದನೆಯೇ ಇಲ್ಲ: ನಗರದಲ್ಲಿರುವ ಫುಟ್‌ಪಾತ್‌ಗಳ ಕುರಿತು, ಫುಟ್‌ಪಾತ್‌ ಅಭಿವೃದ್ಧಿ ಕುರಿತು ಮಾಹಿತಿ ನೀಡುವಂತೆ ಮಹಾನಗರ ಪಾಲಿಕೆಗೆ ಹಲವು ಸಮಯದ ಹಿಂದೆಯೇ ಮಾಹಿತಿ ಕೇಳಲಾಗಿತ್ತು. ಆದರೆ ಇದುವರೆಗೆ ನೀಡಿಲ್ಲ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ಹೇಳಿದರು.

ಎಸಿಪಿ ಮಂಜುನಾಥ್‌, ವಿನಯ್‌ ಗಾಂವ್ಕರ್‌ ಹಾಗೂ ಗೋಪಾಲಕೃಷ್ಣ ಭಟ್‌, ಗುರು ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.


ಅಧಿಕಾರಿಗಳ ವಿರುದ್ಧ ಕ್ರಮ

ಮೋಟಾರು ವಾಹನ ಕಾಯಿದೆಯಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಹಾಕುವ ಕ್ರಮವಿದೆ. ಹಾಗೆಯೇ ರಸ್ತೆಗಳಲ್ಲಿ ಗುಂಡಿಗಳಿದ್ದು, ಇದರಿಂದ ವಾಹನ ಸವಾರರಿಗೆ ತೊಂದರೆ ಆದಲ್ಲಿ ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಬಹುದಲ್ಲವೇ ಎಂದು ಸಾರ್ವಜನಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಪಿ ಲಕ್ಷ್ಮೇ ಗಣೇಶ್‌, ಬೆಂಗಳೂರಿನಲ್ಲಿ ಈ ರೀತಿ ಕೆಲವು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಹೊಸ ದಂಡ ಜಾರಿಯಾಗಿಲ್ಲ: ಮೋಟಾರು ವಾಹನ ಕಾಯಿದೆಯಡಿ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಜಾರಿಗೊಂಡ ಹೊಸ ದಂಡ ಪ್ರಕ್ರಿಯೆಗೆ ಸಂಬಂಧಿಸಿ ಇನ್ನೂ ನೋಟಿಫಿಕೇಶನ್‌ ಆಗಿಲ್ಲ. ಹೊಸ ನಿಯಮದ ಪ್ರಕಾರ ಪ್ರಸ್ತುತ ದಂಡ ಸಂಗ್ರಹ ಆರಂಭಿಸಲಾಗಿಲ್ಲ ಎಂದು ಡಿಸಿಪಿ ಲಕ್ಷ್ಮೇ ಗಣೇಶ್‌ ತಿಳಿಸಿದರು.


*ಕೂಳೂರು-ಕಾವೂರು-ಪಂಜಿಮೊಗರು ರಸ್ತೆಯಲ್ಲಿ ಸಂಚಾರ ದಟ್ಟಣೆಯ ಸಂದರ್ಭ ಬಸ್‌ಗಳಲ್ಲಿ ನೇತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ.

*ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದ ಬಳಿ ನೋ ಎಂಟ್ರಿಯಿಂದ ವಾಹನ ಚಲಾಯಿಸುತ್ತಾರೆ.

*ಭಾರತ್‌ ಮಾಲ್‌ ಎದುರು ಫುಟ್‌ಪಾತೇ ಇಲ್ಲ. ಪ್ರಯಾಣಿಕರಿಗೆ ನಡೆದಾಡಲು ತೊಂದರೆಯಾಗುತ್ತಿದೆ.

*ಬಹುತೇಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಬ್ರೇಕ್‌ ಲೈಟ್‌ ಇಲ್ಲ.

*ಪಣಂಬೂರು, ಹೊನ್ನಕಟ್ಟೆ ಬಳಿ ಹಲವು ಮಂದಿ ಸಿಗ್ನಲ್‌ ಜಂಪ್‌ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ