ಆ್ಯಪ್ನಗರ

ಮಂದಾರ ತ್ಯಾಜ್ಯ ಸಮಸ್ಯೆ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ: ಸಚಿವ ಕೋಟ

ತ್ಯಾಜ್ಯ ರಾಶಿ ಕುಸಿತದಿಂದ ಸಂತ್ರಸ್ತರಾಗಿರುವ ಪಚ್ಚನಾಡಿ ಸಮೀಪದ ಮಂದಾರ ಪರಿಸರದ 27 ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Vijaya Karnataka 23 Aug 2019, 4:29 pm
ಮಂಗಳೂರು: ತ್ಯಾಜ್ಯ ರಾಶಿ ಕುಸಿತದಿಂದ ಸಂತ್ರಸ್ತರಾಗಿರುವ ಪಚ್ಚನಾಡಿ ಸಮೀಪದ ಮಂದಾರ ಪರಿಸರದ 27 ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
Vijaya Karnataka Web permanent relief for victims ofmandara waste affected families says kota
ಮಂದಾರ ತ್ಯಾಜ್ಯ ಸಮಸ್ಯೆ ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಪರಿಹಾರ: ಸಚಿವ ಕೋಟ


ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರವಾಹ ಹಾನಿ ಬಗ್ಗೆ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಸಂತ್ರಸ್ತರಿಗೆ ಬೇರೆಡೆ ನಿವೇಶನ ನೀಡಿ ಮನೆ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್‌ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ಇನ್ನು ಮುಂದೆ ವಾಸ ಮಾಡುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಆಗಲೇಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ತಜ್ಞರ ವರದಿ ಆಧರಿಸಿ ಪ್ರಸ್ತಾವನೆ ಕಳುಹಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಮಾಹಿತಿ ನೀಡಿ, ಭಾರಿ ಮಳೆಗೆ ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿ ಕುಸಿತಗೊಂಡು ಕೆಳಗಿನ ಮಂದಾರಕ್ಕೆ ಬಂದು ಬಿದ್ದಿದೆ. ಸುಮಾರು 6 ಕಿ.ಮೀ.ಪ್ರದೇಶ ಇದರಿಂದ ಬಾಧಿತವಾಗಿದೆ. ಇಲ್ಲಿರುವ 27 ಕುಟುಂಬಗಳನ್ನು ತಾತ್ಕಾಲಿಕವಾಗಿ ಕರ್ನಾಟಕ ಗೃಹಮಂಡಳಿಯ ನಿವೇಶನಗಳಿಗೆ ಸ್ಥಳಾಂತರಿಸಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದರು.

ಈ ಪ್ರದೇಶದಲ್ಲಿ ವಾಸವಿರುವ ಕುಟುಂಬಗಳಿಗೆ ಬೇರೆಡೆ ನಿವೇಶನಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯ. ಪರ್ಯಾಯ ನಿವೇಶನವನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ. ಆದರೆ ಮನೆ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ. ಇದನ್ನು ಕೂಡ ಪ್ರಾಕೃತಿಕ ವಿಕೋಪ ಎಂದೇ ಪರಿಗಣಿಸಿ ರಾಜ್ಯ ಸರಕಾರ ಮಳೆ ಸಂತಸ್ತರಿಗೆ ಮನೆ ನಿರ್ಮಿಸಲು ನೀಡುತ್ತಿರುವ ವಿಶೇಷ ಪ್ಯಾಕೇಜ್‌ನ್ನು ಇಲ್ಲಿನ ಸಂತ್ರಸ್ತರಿಗೂ ನೀಡಬೇಕು ಎಂದು ಸಚಿವರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.

ಪಚ್ಚನಾಡಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದೆ ಈಗಾಗಲೇ ನಾಲ್ಕು ಮಾದರಿಗಳಿವೆ. ಇವುಗಳಲ್ಲಿ ಯಾವುದು ಆ ಪ್ರದೇಶಕ್ಕೆ ಸೂಕ್ತ ಹಾಗೂ ಶಾಶ್ವತ ಪರಿಹಾರ ನೀಡುತ್ತದೆ ಎಂದು ಪರಿಶೀಲಿಸಿ ಸೆಪ್ಟæ್ಟಂಬರ್‌ ತಿಂಗಳ ಬಳಿಕ ಪೂರಕ ಕ್ರಮ ವಹಿಸಲಾಗುವುದು. ಯೋಜನೆ ಅನುಷ್ಟಾನ ರಾಜ್ಯ ಸರಕಾರದಿಂದಲೇ ನಡೆಯಬೇಕಾಗಿದೆ. ಆದುದರಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಇದಕ್ಕೆ ವಿಶೇಷ ಯೋಜನೆ ರೂಪಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ತ್ಯಾಜ್ಯ ನಿರ್ವಹಣೆಗೆ ವಿಶೇಷ ಯೋಜನೆಯನ್ನು ಸಿದ್ದಪಡಿಸುವಂತೆ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಇದರ ಅನುಷ್ಟಾನಕ್ಕೆ ಕ್ರಮಗಳು ಆಗುವಂತೆ ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.

ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್‌.ಅನಿಲ್‌ ಕುಮಾರ್‌, ಶಾಸಕ ರಾಜೇಶ್‌ ನಾೖಕ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್‌.ಸೆಲ್ವಮಣಿ, ಮಂಗಳೂರು ಪೊಲೀಸ್‌ ಆಯುಕ್ತ ಡಾ.ಹರ್ಷ ಪಿ.ಎಸ್‌., ಮೆಸ್ಕಾಂ ಎಂಡಿ ಸ್ನೇಹಾಲ್‌ ಆರ್‌. ಉಪಸ್ಥಿತರಿದ್ದರು.

ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ ಮನವಿ

ಪಚ್ಚನಾಡಿ ಸಮೀಪದ ಮಂದಾರ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಕುಸಿದು ಸುಮಾರು 27 ಕುಟುಂಬಗಳಿಗೆ ಸಮಸ್ಯೆಯಾದ ಬಗ್ಗೆ ಮಂದಾರ ನಿವಾಸಿಗಳು ಗುರುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು.

ತ್ಯಾಜ್ಯ ಕುಸಿದು ಮಂದಾರ ಜನ ವಸತಿ ಪ್ರದೇಶಗಳಿಗೆ, ಕೃಷಿ ತೋಟಗಳಿಗೆ ಕುಸಿದು ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹಲವು ಮನೆಗಳು ತ್ಯಾಜ್ಯ ರಾಶಿಯಲ್ಲಿ ಬಿದ್ದಿದೆ. ದೈವಸ್ಥಾನ, ನಾಗನ ಸ್ಥಾನಗಳು ತ್ಯಾಜ್ಯದ ಅಡಿಯಲ್ಲಿ ಬಿದ್ದಿವೆ. ಆದ್ದರಿಂದ ಈ ಬಗ್ಗೆ ತಕ್ಷಣ ಗಮನ ಹರಿಸಿ ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವು ನೀಡಬೇಕು ಎಂದು ಮನವಿ ಮಾಡಲಾಯಿತು.

ಮಾಜಿ ಮೇಯರ್‌ಗಳಾದ ಭಾಸ್ಕರ ಕೆ., ಶಶಿಧರ್‌ ಹೆಗ್ಡೆ, ಮಂದಾರ ನಿವಾಸಿ ರಾಜೇಶ್‌ ಭಟ್‌, ಉದಯ ಮತ್ತಿತರರು ಸಚಿವರಿಗೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ