- ಸುಧಾಕರ ಸುವರ್ಣ ಪುತ್ತೂರು/ಪ್ರಕಾಶ್ ಸುಬ್ರಹ್ಮಣ್ಯ
2012ರ ಆಗಸ್ಟ್ ತಿಂಗಳಲ್ಲಿ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಪಳ್ಳಿಗದ್ದೆ ಎಂಬಲ್ಲಿನ ಐದು ಮನೆಗಳಿಗೆ ಭೇಟಿ ನೀಡಿದ್ದ ಶಂಕಿತ ನಕ್ಸಲರು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ 3ರಂದು ರಾತ್ರಿ ಬಿಸಿಲೆ ಪ್ರದೇಶದಲ್ಲಿ ಎಎನ್ಎಫ್ ನಡುವಿನ ಎನ್ಕೌಂಟರ್ನಲ್ಲಿ ನಕ್ಸಲ್ ಯಲ್ಲಪ್ಪ ಪ್ರಾಣ ಕಳೆದುಕೊಂಡಿದ್ದ. ಇದರ ಬೆನ್ನಲ್ಲೇ ಪುಷ್ಪಗಿರಿ ತಪ್ಪಲಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚುನಾವಣಾ ಕಾಲಘಟ್ಟದಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಘೋಷಿಸಲಾಗಿತ್ತು.
ಪ್ರತೀ ಚುನಾವಣೆಯಲ್ಲೂ..
2013ರಲ್ಲಿ ನಡೆದ ವಿಧಾನಸಭೆ ಚುನಾವಣೆ, 2014ರ ಲೋಕಸಭೆ ಚುನಾವಣೆ, 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಯೂ ಸೇರಿದಂತೆ ಸ್ಥಳೀಯಾ ಡಳಿತ ಚುನಾವಣೆಗಳಲ್ಲಿ ಕುಲ್ಕುಂದ, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರ್ ಮತಗಟ್ಟೆಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿತ್ತು. ಹೀಗಾಗಿ ಇಲ್ಲಿಸುಗಮ ಮತ್ತು ಭಯಮುಕ್ತ ಮತದಾನ ನಡೆಸಲು ಭದ್ರತಾ ಕ್ರಮ ಅನುಸರಿಸಲಾಗಿತ್ತು.ವರ್ಷಗಳು ಉರುಳಿದಂತೆ 2012ರ ನಕ್ಸಲ್ ಸಕ್ರಿಯತೆಯ ಭೀತಿ ಜನಮಾನಸ ದಿಂದ ದೂರವಾಗುತ್ತಾ ಬಂದಿದ್ದು, ಜನ ನಕ್ಸಲ್ ಚಟುವಟಿಕೆಯನ್ನೇ ಮರೆತಿದ್ದರು. ಆರೇಳು ವರ್ಷ ನಿರಂತರ ಕೂಂಬಿಂಗ್ ನಡೆಸುತ್ತಿದ್ದ ಎಎನ್ಎಎಫ್ ಪಡೆಗಳು ಇತ್ತೀಚಿನ ನಾಲೈದು ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುವ ಅನಿವಾರ್ಯತೆ ಉಂಟಾಗಿರಲಿಲ್ಲ.
ಪೊಲೀಸ್ ಇಲಾಖೆ ವರದಿ ಚುನಾವಣೆಗೆ ಒಂದು ತಿಂಗಳಿದೆ. ಮತಗಟ್ಟೆಗಳ ಪರಿಸ್ಥಿತಿ ಅಧ್ಯಯನ ಕಾರ್ಯ ನಡೆಯಲಿದೆ. ನಕ್ಸಲ್ ಸಕ್ರಿಯ ಪ್ರದೇಶಗಳ ಮತಗಟ್ಟೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಬರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಇದೀಗ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಎರಡೆರಡು ಬಾರಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಲ್ಲದೆ, ಈ ಭಾಗದ ಸುಮಾರು ಐದಾರು ಗ್ರಾಮ ವ್ಯಾಪ್ತಿಗಳು ಮತ್ತು ಅವುಗಳ ಮೇಲ್ತುದಿ ಯಲ್ಲಿರುವ ಅರಣ್ಯ ಭಾಗದಲ್ಲಿ ತಮ್ಮ ಪಾರಮ್ಯವಿದೆ ಎಂದು ತೋರಿಸಿಕೊಡುವ ಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏ.26ರಂದು ನಡೆಯುವ ಲೋಕಸಭೆ ಚುನಾವಣೆಯನ್ನು ಗರಿಷ್ಠ ಭದ್ರತೆಯಡಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸುವ ಸಾಧ್ಯತೆ ಇದೆ.
ಮತಗಟ್ಟೆಗಳ ವಿವರ
ಸುಬ್ರಹ್ಮಣ್ಣ ಗಾಪಂ ವ್ಯಾಪ್ತಿಯ ಐನೆಕಿದು ಮತ್ತು ಕುಲ್ಕುಂದ ಗ್ರಾಮಗಳಲ್ಲಿ ಸುಮಾರು 1,300 ಮತಗಳಿವೆ. ಐನೆಕಿದು ಶಾಲೆಯಲ್ಲಿ ಮತಗಟ್ಟೆ ಇದ್ದು, ಇದುವರೆಗೆ ಇದು ಸಾಮಾನ್ಯ ಮತಗಟ್ಟೆಯಾಗಿದೆ. ಕುಲ್ಕುಂದ ಶಾಲೆ ಮತಗಟ್ಟೆ ಕಳೆದ 12 ವರ್ಷಗಳಿಂದ ಸೂಕ್ಷ್ಮ ಮತಗಟ್ಟೆಯಾಗಿದೆ. ಹರಿಹರ ಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,500 ಮತಗಳಿವೆ. ಬಾಳುಗೋಡು ಶಾಲೆ ಮತ್ತು ಹರಿಹರ ಶಾಲೆಯಲ್ಲಿ ಮತಗಟ್ಟೆಗಳಿದ್ದು, ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ. ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,000 ಮತಗಳಿವೆ. ಕಲ್ಮಕಾರ್ ಶಾಲೆ ಮತ್ತು ಕೊಲ್ಲಮೊಗ್ರು ಶಾಲೆಯ ಮತಗಟ್ಟೆಗಳು ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ.ಈ ಬಗ್ಗೆ ವಿಜಯ ಕರ್ನಾಟಕದೊಂದಿಗೆ ಮಾತನಾಡಿರುವ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ, ಪರಿಸ್ಥಿತಿ ಅಧ್ಯಯನ ಈ ಹಿಂದೆ ಈ ಪ್ರದೇಶದಲ್ಲಿ ಸೂಕ್ಷ್ಮವೆಂದು ಪರಿಗಣಿಸಲಾದ ಮತಗಟ್ಟೆಗಳನ್ನು ಅದೇ ರೀತಿ ಮುಂದುವರಿಸಿ ಸೂಕ್ತ ಭದ್ರತೆ ನೀಡಲಾಗುವುದು. ಇನ್ನೂ ಹೆಚ್ಚಿನ ಮತಗಟ್ಟೆಗಳಿಗೆ ಆದ್ಯತೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಳಮಟ್ಟದ ವರದಿ ಪಡೆದು, ಅಗತ್ಯವಿದ್ದಲ್ಲಿ ಸೂಕ್ತ ಶಿಫಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.