ಆ್ಯಪ್ನಗರ

Mangaluru: ಮಾಲಿನ್ಯಕ್ಕೆ ನಲುಗಿದ ನಂದಿನಿ!- ನದಿ ನೀರಿನ ಬಣ್ಣವೇ ಬದಲು

Nandhini River: ತ್ಯಾಜ್ಯ ನೀರು ವಿಸರ್ಜನೆ, ಉಪ್ಪು ನೀರು ಹಾವಳಿಯಿಂದ ದಕ್ಷಿಣ ಕನ್ನಡದ ನಂದಿನಿ ನದಿ ಮಾಲಿನ್ಯಗೊಂಡಿದೆ. ನದಿ ನೀರು ಉಪ್ಪಾಗಿರುವ ಕಾರಣ ಹಾಗೂ ಮಾಲಿನ್ಯದಿಂದ ಕಪ್ಪಾಗಿರುವುದರಿಂದ ಜಾನುವಾರು ಸಾಕಣೆ ಕಷ್ಟವಾಗಿವೆ . ಈ ಭಾಗದ ಬಾವಿ ನೀರಿನಲ್ಲಿಯೂ ಉಪ್ಪಿನ ಅಂಶವಿದೆ. ಇನ್ನು ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದಿದ್ದು, ಮಳೆಗಾಲದಲ್ಲಿ ಪಾವಂಜೆ, ಖಂಡಿಗೆ, ಕೊಡಿಪಾಡಿ, ಕರಿಕಟ್ಟ, ಮುಕ್ಕ, ಚೇಳ್ಯಾರು ಪ್ರದೇಶಗಳ ಕೃಷಿ ಭೂಮಿಗೆ ನೆರೆ ಎದುರಾಗಲಿದೆ.

Edited byಶ್ರುತಿ ಡಿ | Vijaya Karnataka Web 5 Jun 2023, 11:58 am

ಹೈಲೈಟ್ಸ್‌:

  • ತ್ಯಾಜ್ಯ ನೀರು ವಿಸರ್ಜನೆ, ಉಪ್ಪು ನೀರು ಹಾವಳಿಯಿಂದ ನಂದಿನಿ ಮಲಿನ.
  • ನಂದಿನಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು, ಕೃಷಿಕರಿಗೆ ಸಂಕಷ್ಟ.
  • ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸ್ಥಳೀಯರಿಂದ ಆಗ್ರಹ.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ತ್ಯಾಜ್ಯ ನೀರು ವಿಸರ್ಜನೆ, ನಂದಿನಿ ನದಿ ಮಲಿನ.
ತ್ಯಾಜ್ಯ ನೀರು ವಿಸರ್ಜನೆ, ನಂದಿನಿ ನದಿ ಮಲಿನ.
ಲೋಕೇಶ್‌ ಸುರತ್ಕಲ್‌

ಮಂಗಳೂರು: ಮಳೆ ವಿಳಂಬ ಕಾರಣ ಎಲ್ಲನದಿಗಳು ಬತ್ತಿಹೋಗಿದ್ದು ಕೆಲವೆಡೆ ನೀರಿದ್ದರೂ ತ್ಯಾಜ್ಯ ನೀರಿನಿಂದ, ಉಪ್ಪು ನೀರು ಹಾವಳಿಗೆ ನಂದಿನಿ ನದಿ ಒಳಗಾಗಿದ್ದಾಳೆ. ಇದರಿಂದ ತಾವು ತೊಂದರೆಗೆ ಒಳಗಾಗಿದ್ದೇವೆ ಎಂದು ಮುಕ್ಕ, ಪಾವಂಜೆ, ಖಂಡಿಗೆ, ಕೊಡಿಪಾಡಿ, ಚೇಳ್ಯಾರು ಪರಿಸರದ ನೂರಾರು ಎಕರೆ ಪ್ರದೇಶದ ಕೃಷಿಕರು ಗೋಳು ತೋಡಿಕೊಂಡಿದ್ದಾರೆ.
ಮಿಜಾರು ಬಳಿಯ ಕನಕಬೆಟ್ಟುನಲ್ಲಿ ಹುಟ್ಟಿ ಸುಮಾರು 37 ಮೈಲಿ ಹರಿದು ಸಸಿಹಿತ್ಲು ಬಳಿ ಶಾಂಭವಿ ಜತೆ ಸೇರಿ ಸಮುದ್ರಕ್ಕೆ ಸೇರುವ ಪವಿತ್ರ ನಂದಿನಿ ಕಟೀಲು, ಶಿಬರೂರು, ಪಾವಂಜೆ, ಸಸಿಹಿತ್ಲು ಹೊಯಿಗೆಗುಡ್ಡೆ, ಸೇರಿ ಅನೇಕ ಪುಣ್ಯ ಕ್ಷೇತ್ರಗಳ ಮೂಲಕ ಹಾದು ಹೋಗುತ್ತಿದ್ದಾಳೆ ಎಂದು ಹಿರಿಯರು ಹೇಳುತ್ತಾರೆ.

ತ್ಯಾಜ್ಯ ನೀರು ನದಿಗೆ ವಿಸರ್ಜನೆ
ಪಾವಂಜೆ, ಖಂಡಿಗೆ ಬಳಿ ನಂದಿನಿಗೆ ತಟ್ಟಿರುವ ಮಾಲಿನ್ಯ ಸಮಸ್ಯೆ ಇತ್ತೀಚೆಗೆ ತೀವ್ರವಾಗಿದೆ. ಇದಕ್ಕೆ ಪರಿಹಾರ ನೀಡಿ ಎಂದು ರೈತರ ಆಗ್ರಹವಾಗಿದೆ. ಪಾಲಿಕೆಯ ಮಧ್ಯ ಎಂಬಲ್ಲಿರುವ ಒಳಚರಂಡಿ ವಿಭಾಗದ ಎಸ್‌ಟಿಪಿ ಸ್ಥಾವರದಿಂದ ಹಾಗೂ ಮುಕ್ಕ ಬಳಿ ಖಾಸಗಿಯವರಿಂದ ತ್ಯಾಜ್ಯ ನೀರು ನದಿಗೆ ವಿಸರ್ಜನೆಯಿಂದ ಮಾಲಿನ್ಯ ಸಮಸ್ಯೆ ಅತಿಯಾಗಿದೆ. ನದಿ ನೀರು ದುರ್ವಾಸನೆ ಬರುವ ಮಟ್ಟಕ್ಕೆ ಬಂದು ತಲುಪಿದೆ ಎನ್ನುತ್ತಾರೆ ಚೇಳ್ಯಾರು ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಶೆಟ್ಟಿ.

ರೈತರ ಗೋಳು ಕೇಳುವರೇ ಇಲ್ಲ

ನದಿ ಹೂಳೆತ್ತುವುದಾಗಿ ಹಿಂದಿನ ಡಿಸಿ ಸಮೀಕ್ಷೆ ನಡೆಸಿದ ಬಳಿಕ ನೀಡಿದ್ದ ಭರವಸೆ ಈಡೇರಿಲ್ಲ. ಇದಕ್ಕೆ 5 ಕೋಟಿ ರೂ. ಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನದಿ ನೀರು ಉಪ್ಪಾಗಿರುವ ಕಾರಣ ಹಾಗೂ ಮಾಲಿನ್ಯದಿಂದ ಕಪ್ಪಾಗಿರುವ ಕಾರಣ ಜಾನುವಾರು ಸಾಕಣೆ ಕಷ್ಟವಾಗಿವೆ . ಈ ಭಾಗದ ಬಾವಿ ನೀರಿನಲ್ಲಿಯೂ ಉಪ್ಪಿನ ಅಂಶವಿದೆ. ಪಾವಂಜೆ, ಖಂಡಿಗೆ, ಕೊಡಿಪಾಡಿ, ಕರಿಕಟ್ಟ, ಮುಕ್ಕ, ಚೇಳ್ಯಾರುಗಳಲ್ಲಿ ನೂರಾರು ಎಕರೆ ಪ್ರದೇಶವಿದೆ. ಕೃಷಿ ಭೂಮಿಗೆ ನದಿಯಲ್ಲಿ ಹೂಳು ತುಂಬಿರುವ ಕಾರಣ ಮಳೆಗಾಲದಲ್ಲಿ ನೆರೆಯಿಂದ ನಷ್ಟ ಭೀತಿ, ಹಿಂಗಾರು ಬೆಳೆಗೆ, ತೋಟಗಳಿಗೆ, ಉಪಬೆಳೆಗಳಿಗೆ ಉಪ್ಪು ನೀರು ಹಾವಳಿಯಿಂದ ನಷ್ಟವಾಗುತ್ತಿದೆ. ಒಟ್ಟಿನಲ್ಲಿ ರೈತರ ಗೋಳು ಕೇಳುವರೇ ಇಲ್ಲ. ಈ ಬಗ್ಗೆ ಜನ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳು, ಗಮನ ಹರಿಸಬೇಕಾಗಿದೆ ಎಂದರು ಕೃಷಿಕ ಕೇಶವ ಶೆಟ್ಟಿ ಖಂಡಿಗೆ.
ಕರಾವಳಿಗೆ ವಿಷವುಣಿಸಿ ರುಚಿ ನೀಡುವ ಕೈಗಾರಿಕೆ ! ಪಲ್ಗುಣಿ ನದಿಗೆ ಸೇರುತ್ತಿದೆ ವಿಷಕಾರಿ ರಾಸಾಯನಿಕ
ಲಕ್ಷಾಂತರ ರೂ. ನಷ್ಟ
ಮಧ್ಯ ಎಸ್‌ಟಿಪಿ ಘಟಕದ ತ್ಯಾಜ್ಯ ನೀರು ತಮ್ಮ ಗದ್ದೆಗಳ ಮೂಲಕ ನದಿಗೆ ಹಾದು ಹೋಗುತ್ತಿರುವುದರಿಂದ ಕೃಷಿ ಮಾಡಲಾಗದೆ ತನಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದರು ಪ್ರಶಸ್ತಿ ವಿಜೇತ ಕೃಷಿಕ ಕೊಡಿಪಾಡಿ ಗೋಪಾಲಕೃಷ್ಣ ಪ್ರಭು ಮೊದಲಾದವರು.
ಮಹಾಭಾರತದ ಕುಂತಿ ನಡೆದಾಡಿದ ಕಡಬ ಕುಂತೂರು ಗ್ರಾಮದಲ್ಲಿರುವ ಐತಿಹಾಸಿಕ ಕೆದ್ದೊಟ್ಟೆ ಕೆರೆ ಈಗ ಬಟಾ ಬಯಲು
ತ್ಯಾಜ್ಯ ಸಮಸ್ಯೆಗೆ ಕ್ರಮ
ಕಾಸರಗೋಡಿನ ಮಂಗಲ್ಪಾಡಿ ಪಂಚಾಯಿತಿ ತ್ಯಾಜ್ಯ ಸಮಸ್ಯೆಯ ಕುರಿತು ಜಿಲ್ಲಾಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಜನಪ್ರತಿನಿಧಿಗಳು, ಹಸಿರು ಕ್ರಿಯಾಪಡೆ ಕಾರ್ಯಕರ್ತರು, ವ್ಯಾಪಾರಿ ವ್ಯವಸಾಯಿ ಸದಸ್ಯರು, ಯುವಜನ ಸಂಘಟನಾ ಕಾರ್ಯಕರ್ತರ ಸಹಕಾರದೊಂದಿಗೆ ಸ್ಟೆಪ್‌ ಟುವರ್ಡ್‌ ಕ್ಲೀನ್‌ ಮಂಗಲ್ಪಾಡಿ ಎಂಬ ಮಾಸ್‌ ಕ್ಲೀನಿಂಗ್‌ ಅಭಿಯಾನದ ಮೂಲಕ ಮಂಗಳೂರು-ಕಾಸರಗೋಡು ಅಂತಾರಾಜ್ಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾದ ಲೆಗಸಿ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

ವ್ಯಾಪಾರ ಸಂಸ್ಥೆಗಳಿಗೆ ನೋಟಿಸ್‌

ಕ್ಲೀನ್‌ ಕೇರಳ ಕಂಪೆನಿ ಮೂಲಕ 198 ಟನ್‌ ತ್ಯಾಜ್ಯ ತೆರವುಗೊಳಿಸಲಾಯಿತು. ಹೆಚ್ಚುವರಿ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದಿಸುವ ಉಪ್ಪಳ ಪೇಟೆ ಭಾಗದಲ್ಲಿ ಹಾಗೂ ಪರಿಸರಗಳಲ್ಲಿ ಹೆಚ್ಚುವರಿ ಹಸಿರು ಕ್ರಿಯಾಪಡೆ ಸದಸ್ಯರ ಸೇವೆಯನ್ನು ಕಾಯಂ ಆಗಿ ವ್ಯವಸ್ಥೆಗೊಳಿಸಲಾಗಿದೆ. ಯೂಸರ್‌ಫೀ ನೀಡಲು ನಿರಾಕರಿಸಿದ ವ್ಯಾಪಾರ ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿದೆ. ಪಂಚಾಯಿತಿ ಮಟ್ಟದ ಸಮಿತಿ, ವಾರ್ಡ್ ಮಟ್ಟದ ಸಮಿತಿ, ಕ್ಲಸ್ಟರ್‌ ರಚನೆಗಳನ್ನು ನಡೆಸಿದ್ದು, ಸಮಿತಿಗಳ ಮೇಲ್ನೋಟದಲ್ಲಿ ಮನೆಗಳಲ್ಲಿ, ವಾಸ ಸ್ಥಳಗಳಲ್ಲಿ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಏರ್ಪಡಿಸಿದರುವುದರ ಬಗ್ಗೆ ಮೌಲ್ಯಮಾಪನ ನಡೆಸಲಾಯಿತು.

ದಂಡ ವಸೂಲಿ

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿ ಹಾಕಿದ ಮೂವರಿಂದ ಈಗಾಗಲೇ 16 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಮೇ 6ರಂದು ನಡೆಸಿದ ಮಾಸ್‌ ಕ್ಲೀನಿಂಗ್‌ನ ಅಂಗವಾಗಿ ಲಭಿಸಿದ ಗುರುತು ದಾಖಲೆಗಳ ಆಧಾರದಲ್ಲಿ 26 ಮಂದಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ನೋಟಿಸ್‌ ನೀಡಲಾಯಿತು. ದಂಡ ಪಾವತಿಸದಿದ್ದಲ್ಲಿ ವ್ಯಕ್ತಿಗಳ ವಿರುದ್ಧ ಪ್ರೋಸಿಕ್ಯೂಶನ್‌ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯಾಡಳಿತ ಇಲಾಖೆ ಜತೆ ನಿರ್ದೇಶಕ ಜೇಸನ್‌ ಮ್ಯಾಥ್ಯೂ ಹೇಳಿದ್ದಾರೆ.
ಲೇಖಕರ ಬಗ್ಗೆ
ಶ್ರುತಿ ಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ, ಗುತ್ತಿಗೆ ಆಧಾರದ ಮೇಲೆ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟಿ ಬೆಳೆದಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಬರೆಯುವುದು, ಹಿನ್ನೆಲೆ ಧ್ವನಿ, ಚಾರಣ, ಕವನ ರಚನೆ ನೆಚ್ಚಿನ ಹವ್ಯಾಸ. ಪ್ರಚಲಿತ ವಿದ್ಯಮಾನ, ರಾಜಕೀಯ, ಕೃಷಿ ಆಸಕ್ತಿವುಳ್ಳ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ