ಆ್ಯಪ್ನಗರ

ಪ್ರಿಯಾಂಕ ಆಗಮನದಿಂದ ಕೈಗೆ ಬಲ ಬಂದಿದೆ, ಮೋದಿಗೆ ನಡುಕ ತಂದಿದೆ: ಪೂಜಾರಿ

ಪ್ರಿಯಾಂಕ ಆಯ್ಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೆ ಕುಟುಂಬ ರಾಜಕಾರಣ ಎದ್ದು ಕಾಣುತ್ತಿದೆಯಲ್ಲವೇ. ಈ ರೀತಿಯ ಕುಟುಂಬ ರಾಜಕಾರಣ ರಾಜ್ಯ ಬಿಜೆಪಿಯಲ್ಲಿಲ್ಲವೇ? ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರನನ್ನು ರಾಜಕೀಯಕ್ಕೆ ಕರೆ ತರಲಿಲ್ಲವೇ?

Vijaya Karnataka Web 24 Jan 2019, 9:06 pm
ಮಂಗಳೂರು: ಗಾಂಧಿ ಕುಟುಂಬದ ಪ್ರಿಯಾಂಕ ಗಾಂಧಿಯವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುರಿಂದ ಕಾಂಗ್ರೆಸ್ ದೊಡ್ಡ ಶಕ್ತಿ ಬಲಬಂದಂತಾಗಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಗೆ ನಡುಕವುಂಟಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
Vijaya Karnataka Web ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ


ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಅವರನ್ನು ಕರೆಸಿರುವುದು ರಾಹುಲ್‌ಗಾಂಧಿ ನಾಯಕತ್ವಕ್ಕೆ ಬಲಬಂದಂತಾಗಿದೆ. ಈ ಉದ್ದೇಶದಿಂದಲೇ ಅವರನ್ನು ಕರೆಸಿಕೊಳ್ಳಲಾಗಿದೆ. ಹಾಗಂತ ರಾಹುಲ್ ಶಕ್ತಿಹೀನ ಎಂದಲ್ಲ, ಅವರಿಗೂ ತಾಕತ್ತು ಇದೆ. ಹೀಗಾಗಿಯೇ ಪ್ರಿಯಾಂಕ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂಬ ಘೋಷಣೆ ಹೊರಬಿದ್ದ ಕೂಡಲೇ ದೇಶದ ಜನತೆ ಸಂಭ್ರಮ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರಿಯಾಂಕ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧದ ನಾನಾ ಹಗರಣಗಳ ಆಪಾದನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ಪೂಜಾರಿ, ಅವರ ಮೇಲಿನ ಆರೋಪ ಮಾತ್ರವಿರುವುದು. ಶಿಕ್ಷೆಯೇನು ಪ್ರಕಟವಾಗಿಲ್ಲವಲ್ಲ ಎಂದರು.

ಪ್ರಿಯಾಂಕಾ ಅವರಲ್ಲಿ ಇಂದಿರಾ ಗಾಂಧಿ ಅವರ ವರ್ಚಸ್ಸು ಕಾಣುತ್ತಿದೆ. ಈಗ ಉತ್ತರ ಪ್ರದೇಶದ ಉಸ್ತುವಾರಿಯನ್ನು ನೀಡಿದ್ದಾರೆ, ಮುಂದೆ ಇವರು ಇಡೀ ದೇಶದ ಜವಾಬ್ದಾರಿ ವಹಿಸಿ ಉನ್ನತ ಅಧಿಕಾರಕ್ಕೆ ಏರಲಿದ್ದಾರೆ. ಪ್ರಿಯಾಂಕ ಆಗಮನದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದರು.

ಪ್ರಿಯಾಂಕ ಆಯ್ಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೆ ಕುಟುಂಬ ರಾಜಕಾರಣ ಎದ್ದು ಕಾಣುತ್ತಿದೆಯಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಈ ರೀತಿಯ ಕುಟುಂಬ ರಾಜಕಾರಣ ರಾಜ್ಯ ಬಿಜೆಪಿಯಲ್ಲಿಲ್ಲವೇ? ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರನನ್ನು ರಾಜಕೀಯಕ್ಕೆ ಕರೆ
ತರಲಿಲ್ಲವೇ? ಪುತ್ರನಿಗೂ ಟಿಕೆಟ್ ನೀಡಲು ಮುಂದಾಗಲಿಲ್ಲವೇ? ಎಂದು ಮರುಪ್ರಶ್ನಿಸಿದರು.

ಮತ್ತೆ ಟಿಕೆಟ್ ಕನವರಿಕೆ: ದ.ಕ. ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದು, ಟಿಕೆಟ್‌ಗಾಗಿ ಶೀಘ್ರವೇ ಹೊಸದಿಲ್ಲಿಗೆ ತೆರಳುವೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಅವರನ್ನು ಭೇಟಿಯಾಗುತ್ತೇವೆ. ನಾನು ಟಿಕೆಟ್ ಆಕಾಂಕ್ಷಿ ಹೌದು ಆದರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾನು ಅವರ ಪರವಾಗಿ ಪ್ರಚಾರ ನಡೆಸಲು ಸಿದ್ಧನಿದ್ದೇನೆ ಎಂದರು.

ಮಾಜಿ ಸಚಿವ ರಮಾನಾಥ ರೆ ಅವರು ಈ ಹಿಂದೆ ‘ನನ್ನನ್ನು ಗೆಲ್ಲಿಸಿದ್ದು ಮುಸ್ಲಿಂ ವೋಟು’ ಎಂದು ಹೇಳುವ ಮೂಲಕ ಬಹಳ ತಪ್ಪು ಮಾಡಿದ್ದಾರೆ. ರಾಜಕೀಯ
ವ್ಯಕ್ತಿಗಳು ಮಾತನಾಡುವಾಗ ಎಚ್ಚರವಹಿಸಬೇಕು. ಟಿಕೇಟ್ ಪಡೆದುಕೊಳ್ಳುವ ತಾಕತ್ತು ಅವರಿಗಿದೆ ಎನ್ನುವುದನ್ನು ಸೂಚ್ಯವಾಗಿ ನೆನಪಿಸಿದರು. ಬಿ.ಕೆ. ಹರಿಪ್ರಸಾದ್ ಅವರು ಹೈಕಮಾಂಡ್‌ನಿಂದಲೇ ಟಿಕೆಟ್ ಗಿಟ್ಟಿಸಿಕೊಳ್ಳಲು ಸಮರ್ಥರಿದ್ದಾರೆ, ಅವರಿಗೆ ನನ್ನ ಶಿಫಾರಸ್ಸು ಅಗತ್ಯವಿಲ್ಲ ಎಂದರು.

ವೀರಪ್ಪ ಮೊಯ್ಲಿ ನನ್ನನ್ನು ರಾಜಕೀಯಕ್ಕೆ ಕರೆತಂದವರು. ಅವರನ್ನು ನಾನು ಅವರನ್ನು ಮರೆಯುವಂತಿಲ್ಲ. ಐವನ್ ಡಿಸೋಜಾ ಅವರಿಗೆ ಈ ಜಗತ್ತಿನಲ್ಲಿ ಯಾವ ಪೋಸ್ಟ್ ಕೊಟ್ಟರೂ ಬೇಕು. ಅವರು ಎಷ್ಟೇ ಪ್ರಯತ್ನಿಸಿದರೂ ಟಿಕೆಟ್ ಸಿಗುವುದಿಲ್ಲ. ಐವನ್ ಡಿಸೋಜಾ ಅವರು ನನ್ನ ಶಿಷ್ಯನಲ್ಲ, ಶಿಷ್ಯನಾಗುವುದೂ ಬೇಡ ಎಂದು ಪೂಜಾರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ