ಆ್ಯಪ್ನಗರ

ಪ್ರೊ. ಪರಮೇಶ್ವರ ಭಟ್ಟರ ಸಮಗ್ರ ಸಂಪುಟಗಳ ಲೋಕಾರ್ಪಣೆ

ಕನ್ನಡ ಸಾರಸ್ವತ ಲೋಕದ ಬಹು ದೊಡ್ಡ ಹೆಸರು ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರ ಸಾಹಿತ್ಯ ಕೃಷಿಯ ಪರಿಚಯಿಸುವ ಸಮಗ್ರ ಸಂಪುಟಗಳ ಲೋಕಾರ್ಪಣೆಯನ್ನು ನಗರದ ಸೈಂಟ್‌ ಅಲೋಶಿಯಸ್‌ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಭಾನುವಾರ ನೆರವೇರಿಸಿದರು.

Vijaya Karnataka 11 Feb 2019, 4:24 pm
ಮಂಗಳೂರು: ಕನ್ನಡ ಸಾರಸ್ವತ ಲೋಕದ ಬಹು ದೊಡ್ಡ ಹೆಸರು ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರ ಸಾಹಿತ್ಯ ಕೃಷಿಯ ಪರಿಚಯಿಸುವ ಸಮಗ್ರ ಸಂಪುಟಗಳ ಲೋಕಾರ್ಪಣೆಯನ್ನು ನಗರದ ಸೈಂಟ್‌ ಅಲೋಶಿಯಸ್‌ ಕಾಲೇಜಿನ ಸಭಾಂಗಣದಲ್ಲಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಭಾನುವಾರ ನೆರವೇರಿಸಿದರು.
Vijaya Karnataka Web 10my svp


ಏಳು ಸಂಪುಟಗಳ ಸಮಗ್ರ ಕೃತಿಗಳಲ್ಲಿ ಮೂರು ಕಾವ್ಯ ಸಂಪುಟ, ಎರಡು ಗದ್ಯ ಸಂಪುಟ ಹಾಗೂ ಎರಡು ಕುವೆಂಪು ದರ್ಶನ ವಿಮರ್ಶೆ ಸಂಪುಟಗಳು ಸೇರಿವೆ. ಒಟ್ಟು 3556 ರೂ. ಬೆಲೆಯ ಸಮಗ್ರ ಸಂಪುಟವನ್ನು ಬೆಂಗಳೂರಿನ ಪುಸ್ತಕ ಪ್ರದರ್ಶನ ಮಳಿಗೆಯಲ್ಲಿ ಸೋಮವಾರದಿಂದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಶೇ.15ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ಡಾ. ಎಸ್‌. ವಿ. ಪರಮೇಶ್ವರ ಭಟ್ಟ ಅವರ ಸಮಗ್ರ ಸಂಪುಟವು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಇನ್ನೊಂದು ಗರಿಯನ್ನು ಮೂಡಿಸಿದೆ, ರಾಜ್ಯಕ್ಕೆ ಗೌರವವನ್ನು ತಂದಿದೆ. ಸಂಪುಟವನ್ನು ರಾಜ್ಯದ ಉದ್ದÜ್ಧಗಲಕ್ಕೂ ತಲುಪಿಸುವ ಕೆಲಸವನ್ನು ಪ್ರಾಧಿಕಾರ ಮಾಡಲಿದೆ. ಬೆಂಗಳೂರಿನಲ್ಲಿ ಸಂಪುಟ ಬಿಡುಗಡೆಯಾದ ಮೊದಲ ದಿನವೇ 3 ಲಕ್ಷ ರೂ. ವ್ಯಾಪಾರವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೊ. ಪರಮೇಶ್ವರ ಭಟ್ಟರ ಕೃತಿ ಕುರಿತು ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಾಧಿಕಾರವು ಪ್ರತಿ ವರ್ಷ ಮೂರು ತಿಂಗಳ ಕಾಲ ತನ್ನ ಎಲ್ಲ ಪ್ರಕಾಶನ ಪುಸ್ತಕಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡುತ್ತದೆ. ಕಳೆದ ಒಂದು ವರ್ಷದಲ್ಲಿ ಮಳಿಗೆಗಳ ಮೂಲಕ 6 ಲಕ್ಷ ಹಾಗೂ ಆನ್‌ಲೈನ್‌ನಲ್ಲಿ ಒಂದು ಲಕ್ಷ ಪುಸ್ತಕ ಮಾರಾಟವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪ್ರೊ.ಬಿ.ಎ. ವಿವೇಕ ರೈ, ಸಂತ ಅಲೋಶಿಯಸ್‌ ಕಾಲೇಜಿನ ಪ್ರಿನ್ಸಿಪಾಲ್‌ ರೆ. ಡಾ. ಪ್ರವೀಣ್‌ ಮಾರ್ಟಿಸ್‌ ಭಾಗವಹಿಸಿದ್ದರು. ಪ್ರೊ. ಪರಮೇಶ್ವರ ಭಟ್ಟ ಅವರ ಪುತ್ರ ಎಸ್‌.ವಿ. ರಾಮಚಂದ್ರ ಹಾಗೂ ಸೊಸೆ ಉಷಾ ರಾಮಚಂದ್ರ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.

ಡಾ. ನಾ.ದಾ. ಶೆಟ್ಟಿ ಸ್ವಾಗತಿಸಿದರು. ಡಾ. ಸರಸ್ವತಿ ವಂದಿಸಿದರು. ಡಾ. ನರಸಿಂಹ ಮೂರ್ತಿ ಆರ್‌. ಕಾರ್ಯಕ್ರಮ ನಿರೂಪಿಸಿದರು.


ಕನ್ನಡ ನಾಟಕ ಲೋಕಕ್ಕೆ ಎಸ್‌ವಿಪಿ
ಕೊಡುಗೆ ಅಪಾರ: ಡಾ. ಕಂಬಾರ


ಕನ್ನಡದ ಮೇರು ಸಾಹಿತಿ ಡಾ. ಎಸ್‌.ವಿ. ಪರಮೇಶ್ವರ ಭಟ್ಟ ಅವರು ಕನ್ನಡ ನಾಟಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಸಂಸ್ಕೃತ ಹಾಗೂ ಶೇಕ್ಸ್‌ ಪಿಯರ್‌ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ಮೂಲಕ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹೇಳಿದರು.

ಡಾ. ಪರಮೇಶ್ವರ ಭಟ್ಟ ಅವರ ಸಮಗ್ರ ಸಂಪುಟಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, 1968ರಲ್ಲಿ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರು ಮಂಗಳೂರಿಗೆ ಆಗಮಿಸಿದರು. ಮಂಗಳೂರಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ 1974ರ ವರೆಗೆ ಕಾರ್ಯನಿರ್ವಹಿಸಿದರು. 1968ರಲ್ಲಿ ಬಂಟ್ವಾಳದಲ್ಲಿ ಭಾರಿ ನೆರೆ ಉಂಟಾದ ಪರಿಣಾಮ ಅವರಿಗೆ ಮಂಗಳೂರಿಗೆ ಬರಲು ಸಾಧ್ಯವಾಗದೆ ಬಂಟ್ವಾಳದಲ್ಲಿ ತಂಗಿದ್ದರು. ನಂತರ ಏರ್ಯ ಲಕ್ಷ್ಮೇನಾರಾಯಣ ಆಳ್ವ ಅವರ ಸಹಾಯದಿಂದ ಮಂಗಳೂರು ತಲುಪಿದರು. ಇಡೀ ಜಿಲ್ಲೆಯಲ್ಲಿ ಕನ್ನಡವನ್ನು ಪಸರಿಸುವ ಕಾರ್ಯವನ್ನು ಪ್ರೊ. ಎಸ್‌.ವಿ.ಪಿ. ಮಾಡಿದ್ದಾರೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ