ಆ್ಯಪ್ನಗರ

'ರಾಜ್ಯ ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ದೂಷಣೆ ಸರಿಯಾಗಿದೆ': ರಮಾನಾಥ ರೈ

'ದಿಲ್ಲಿ ಚುನಾವಣೆ ಮುಗಿದ ಬಳಿಕ ಕೇಂದ್ರ ಸರಕಾರ ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಜನತೆಗೆ ಬರೆ ಎಳೆದಿದೆ. ರಾಜ್ಯದಲ್ಲೂ ನೆರೆ ಸಂತ್ರಸ್ತರಿಗೆ ಸೂಕ್ತವಾಗಿ ಪರಿಹಾರ ನೀಡದೆ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ' - ರಮಾನಾಥ ರೈ, ಮಾಜಿ ಸಚಿವ

Vijaya Karnataka Web 14 Feb 2020, 5:52 pm
ಮಂಗಳೂರು: ರಾಜ್ಯದಲ್ಲಿರುವ ಬಿಜೆಪಿ ಸರಕಾರ ದರಿದ್ರ ಸರಕಾರ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂಷಣೆ ಸರಿಯಾಗಿಯೇ ಇದೆ ಎಂದು ಮಾಜಿ ಸಚಿವ ರಮಾನಾಥ ರೈ ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಪುನರುಚ್ಚರಿಸಿದ್ದಾರೆ.
Vijaya Karnataka Web ramanath rai and siddu
'ರಾಜ್ಯ ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಎಂಬ ಸಿದ್ದರಾಮಯ್ಯ ದೂಷಣೆ ಸರಿಯಾಗಿದೆ': ರಮಾನಾಥ ರೈ


ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಡೆಸಿದ ರೈ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬಿಜೆಪಿಯವರು ಹೋಸದೇನಾದರೂ ಕೊಟ್ಟಿದ್ದಾರಾ ಎಂದು ನೋಡಿದರೆ ಯಾವುದೇ ಯೋಜನೆಗಳಿಲ್ಲ. ಕೇಳಿದರೆ ಹಣ ಇಲ್ಲ ಎಂಬ ಉತ್ತರ ಬರುತ್ತಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಅವರು ಈ ಸರಕಾರವನ್ನು ದರಿದ್ರ ಎಂದು ಹೇಳಿದ್ದಾರೆ ಎಂದು ರಮಾನಾಥ ರೈ ವಿವರಿಸಿದರು.

ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಅನೇಕ ಜನೋಪಯೋಗಿ ಯೋಜನೆಗಳೇ ಈಗಲೂ ಮುಂದುವರಿಯುತ್ತಿದೆ. ಬಿಜೆಪಿ ಸರಕಾರ ಯಾವುದೇ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿಲ್ಲ. ಸಿದ್ದರಾಮಯ್ಯ ಸರಕಾರ ಜಾರಿಗೆ ತಂದ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಅನ್ನಭಾಗ್ಯ ಯೋಜನೆಗಳನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಆಶ್ರಯ, ಬಸವ ವಸತಿ ಯೋಜನೆಗಳಿಗೆ ಹಣ ಬರುತ್ತಿಲ್ಲ. ಆಶ್ರಯ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಪಂಚಾಯಿತಿ ವ್ಯಾಪ್ತಿಯಿಂದ ಶಾಸಕರಿಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ಈ ಮೂಲಕ ಪಂಚಾಯಿತಿ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.

ಕೇಂದ್ರದಿಂದ ಜುಜುಬಿ ಪರಿಹಾರ: ಸಿದ್ದರಾಮಯ್ಯ

ನರೇಗಾ ಯೋಜನೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ 2,800 ಕೋಟಿ ರೂ. ಮೊತ್ತ ಬರಬೇಕಾಗಿದೆ. ಇದಲ್ಲದೆ ಈ ವರ್ಷದ 9 ಸಾವಿರ ಕೋಟಿ ರೂ. ಸೇರಿ ಒಟ್ಟಾರೆ 30 ಸಾವಿರ ಕೋಟಿ ರೂ. ಜಿಎಸ್‌ಟಿ ಪಾಲು ರಾಜ್ಯಕ್ಕೆ ಸಿಗಬೇಕು. ಈ ಬಾಕಿ ಮೊತ್ತವನ್ನು ತರಿಸುವ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿಲ್ಲ ಎಂದು ರಮಾನಾಥ ರೈ ಕಿಡಿಕಾರಿದರು.

ದಿಲ್ಲಿ ಚುನಾವಣೆ ಮುಗಿದ ಬಳಿಕ ಕೇಂದ್ರ ಸರಕಾರ ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಜನತೆಗೆ ಬರೆ ಎಳೆದಿದೆ. ರಾಜ್ಯದಲ್ಲೂ ನೆರೆ ಸಂತ್ರಸ್ತರಿಗೆ ಸೂಕ್ತವಾಗಿ ಪರಿಹಾರ ನೀಡದೆ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ. ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ವಿರುದ್ಧ ಫೆಬ್ರವರಿ 15ರಂದು ಸಂಜೆ 5 ಗಂಟೆಗೆ ಕಾಂಗ್ರೆಸ್‌ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ರಮಾನಾಥ ರೈ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಿಗೆ ರೈ ಟಾಂಗ್

ಎಂಟು ಬಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಅನುಭವದಷ್ಟು ವಯಸ್ಸಾಗದ ಇಲ್ಲಿನ ರಾಜಕೀಯ ಮುಖಂಡರೊಬ್ಬರು ಖರ್ಗೆ ಅವರನ್ನು ದೂಷಣೆ ಮಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸಿದೆ ಎಂದು ರಾಮಾನಾಥ ರೈ ವ್ಯಂಗ್ಯವಾಡಿದ್ದಾರೆ. ಖರ್ಗೆ ಅವರಿಗೆ ಸುದೀರ್ಘ ರಾಜಕೀಯ ಇತಿಹಾಸವಿದೆ. ಮೂರು ಬಾರಿ ಸಂಸದರು, 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ವಿರುದ್ಧ ಮಾತನಾಡಲು ಇವರಿಗೆ ನೈತಿಕತೆಯೇ ಇಲ್ಲಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಹೆಸರೆತ್ತದೆ ಕಿಡಿ ಕಾರಿದ್ದಾರೆ. ದಲಿತ ಮುಖಂಡ ಖರ್ಗೆ ವಿರುದ್ಧ ಮಾತನಾಡುವ ಈ ಮುಖಂಡನಿಗೆ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಮುಖಂಡ, ಹಿರಿಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಲು ಇನ್ನೂ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಸೋಂಬೇರಿ ಸಂಸದ ಎಂದ ರಮಾನಾಥ್ ರೈ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ