ಆ್ಯಪ್ನಗರ

ಅಮ್ಮ ಬೈದಿದ್ದಕ್ಕೆ ಮನೆ ಬಿಟ್ಟ ಬಾಲೆ ರಿಕ್ಷಾ ಚಾಲಕನ ಸಮಯ ಪ್ರಜ್ಞೆಯಿಂದ ಮನೆ ಸೇರಿದಳು!

ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಅಮ್ಮ ಬೈದರೆಂಬ ಕಾರಣಕ್ಕೆ ಮನೆ ಬಿಟ್ಟ ಯುವತಿ 5 ದಿನದಲ್ಲಿ 4 ಊರು ಸುತ್ತಿದ್ದಲ್ಲದೆ ಶುಕ್ರವಾರ ಮಂಗಳೂರು ನಗರಕ್ಕೆ ಬಂದ ಬಳಿಕ ರಿಕ್ಷಾ ಚಾಲಕರ ಸಮಯಪ್ರಜ್ಞೆಯಿಂದ ಮರಳಿ ಪೋಷಕರ ಮಡಿಲು ಸೇರಿದ ಘಟನೆ ನಡೆದಿದೆ.

Vijaya Karnataka 17 Jun 2018, 10:16 am
ಮಂಗಳೂರು: ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಅಮ್ಮ ಬೈದರೆಂಬ ಕಾರಣಕ್ಕೆ ಮನೆ ಬಿಟ್ಟ ಯುವತಿ 5 ದಿನದಲ್ಲಿ 4 ಊರು ಸುತ್ತಿದ್ದಲ್ಲದೆ ಶುಕ್ರವಾರ ಮಂಗಳೂರು ನಗರಕ್ಕೆ ಬಂದ ಬಳಿಕ ರಿಕ್ಷಾ ಚಾಲಕರ ಸಮಯಪ್ರಜ್ಞೆಯಿಂದ ಮರಳಿ ಪೋಷಕರ ಮಡಿಲು ಸೇರಿದ ಘಟನೆ ನಡೆದಿದೆ.
Vijaya Karnataka Web auto


ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅಮ್ಮನ ಮೇಲಿನ ಕೋಪದಿಂದ ಜು.11ರಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಆ ದಿನವೇ ರಾತ್ರಿ ಹೆಗ್ಗನಹಳ್ಳಿ ಪೊಲೀಸ್‌ ಠಾಣೆಗೆ ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದು, ಅಪಹರಣ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನಿಂದ ಹೊರಟ ವಿದ್ಯಾರ್ಥಿನಿ ಕೆಎಸ್ಸಾರ್ಟಿಸಿ ಬಸ್‌ ಹಿಡಿದು ಮೈಸೂರಿಗೆ ಹೋಗಿದ್ದಾಳೆ. ಅಲ್ಲಿಂದ ಹಾಸನಕ್ಕೆ ತೆರಳಿದ್ದಾಳೆ. ಅಲ್ಲೂ ಅದೇ ರೀತಿ ಬಸ್‌ಗಳಲ್ಲಿ ಊರೂರು ಸುತ್ತಾಡಿ ಚಿಕ್ಕಮಗಳೂರಿಗೆ ಹೋಗಿದ್ದಾಳೆ. ರಾತ್ರಿ ವೇಳೆ ದೂರದ ಜಿಲ್ಲೆಗೆ ಹೋಗುವ ಬಸ್‌ ಹಿಡಿದು ಪ್ರಯಾಣಿಸುತ್ತಿದ್ದ ಯುವತಿ ಜು.15ರಂದು ಮಂಗಳೂರು ತಲುಪಿದ್ದಾಳೆ.

ರಿಕ್ಷಾ ಚಾಲಕರ ಸಮಯಪ್ರಜ್ಞೆ: ಜು.15ರಂದು ರಾತ್ರಿ 11 ಗಂಟೆಗೆ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ತಂಗುದಾಣಕ್ಕೆ ಬಂದಿದ್ದಾಳೆ. ಈಕೆಯ ಚಲನ ವಲನದಿಂದ ರಿಕ್ಷಾ ಚಾಲಕರಿಗೆ ಅನುಮಾನ ಬಂದು ಆಕೆಯನ್ನು ಪ್ರಶ್ನಿಸಿದರು. ಆಕೆ ಬೆಂಗಳೂರಿಗೆ ಹೋಗುತ್ತಿರುವೆ ಎಂದುತ್ತರಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಕ್ಯಾಬ್‌ನ ಚಾಲಕನೊಬ್ಬನು ಬಂದು ಆಕೆಯ ಜತೆ ಮಾತನಾಡುವುದನ್ನು ಚಾಲಕರು ಗಮನಿಸಿದರು. ಅರ್ಧಗಂಟೆ ಬಿಟ್ಟು ಇನ್ನೊಬ್ಬನ ಜತೆ ಮರಳಿ ಬಂದ ಕ್ಯಾಬ್‌ ಚಾಲಕ
ವಿದ್ಯಾರ್ಥಿನಿಯನ್ನು ಕ್ಯಾಬ್‌ಗೆ ಹತ್ತಿಸಿದ. ಕೂಡಲೇ ರಿಕ್ಷಾ ಚಾಲಕರು ಕ್ಯಾಬ್‌ನ ಬಳಿ ಹೋಗಿ ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಆತ ಕೊಟ್ಟ ಉತ್ತರದಿಂದ ಸಂಶಯಗೊಂಡ ರಿಕ್ಷಾ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದರು. ಆಕೆ ಕೊಟ್ಟ ಮಾಹಿತಿಯಿಂದ ಬರ್ಕೆ ಪೊಲೀಸರು ವಿದ್ಯಾರ್ಥಿನಿ ಪತ್ತೆಯಾದ ಬಗ್ಗೆ ಹೆಗ್ಗನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಪೋಷಕರ ಜತೆ ಮಂಗಳೂರಿಗೆ ಬಂದು ಯುವತಿಯನ್ನು ವಶಕ್ಕೆ ಪಡೆದುಕೊಂಡು ಆಕೆಯ ಪೋಷಕರಿಗೆ ಒಪ್ಪಿಸಿದರು.

ತಂದೆಗೆ ಅನಾರೋಗ್ಯ: ವಿದ್ಯಾರ್ಥಿನಿಯ ತಂದೆ ಅನಾರೋಗ್ಯಕ್ಕೀಡಾಗಿದ್ದು ಮನೆಯಲ್ಲಿಯೇ ಇದ್ದಾರೆ. ತಾಯಿ ಗೃಹಿಣಿಯಾಗಿದ್ದು, ತಂಗಿ ಓದುತ್ತಿದ್ದಾಳೆ. ಸುರಕ್ಷಿತವಾಗಿ ಮಗಳು ಮನೆಗೆ ಬಂದಿದ್ದರಿಂದ ಪೋಷಕರು ನಿರಾಳವಾಗಿದ್ದು, ಆಟೋಚಾಲಕರಿಗೆ ಕೃತಜ್ಞತೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ