ಆ್ಯಪ್ನಗರ

ಕ್ರೀಡಾ ಸೌಲಭ್ಯಕ್ಕಾಗಿ 500 ಕೋಟಿ ಬೇಡಿಕೆ: ರಹೀಂ ಖಾನ್‌

ರಾಜ್ಯದ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸೌಲಭ್ಯಕ್ಕಾಗಿ 500 ಕೋಟಿ ರೂ. ಒದಗಿಸಲು ಬಜೆಟ್‌ ಪೂರ್ವ ಸಭೆಯಲ್ಲಿ ಬೇಡಿಕೆ ಇಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು.

Vijaya Karnataka 5 Feb 2019, 5:00 am
ಮಂಗಳೂರು: ರಾಜ್ಯದ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸೌಲಭ್ಯಕ್ಕಾಗಿ 500 ಕೋಟಿ ರೂ. ಒದಗಿಸಲು ಬಜೆಟ್‌ ಪೂರ್ವ ಸಭೆಯಲ್ಲಿ ಬೇಡಿಕೆ ಇಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ಹೇಳಿದರು.
Vijaya Karnataka Web rs 500 crore demand for sports facilities rahim khan
ಕ್ರೀಡಾ ಸೌಲಭ್ಯಕ್ಕಾಗಿ 500 ಕೋಟಿ ಬೇಡಿಕೆ: ರಹೀಂ ಖಾನ್‌


ರಾಜ್ಯವನ್ನು ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ಕರ್ನಾಟಕ ಎಂದು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರ ಸ್ಥಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಕ್ರೀಡಾ ಸೌಲಭ್ಯ ಒದಗಿಸುವ ಯೋಜನೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು.

ತಾಲೂಕು ಮಟ್ಟದಲ್ಲೂ ವಿಶ್ವಮಟ್ಟದ ಕ್ರೀಡಾಂಗಣ ಸ್ಥಾಪಿಸಬೇಕು ಎಂಬ ಬೇಡಿಕೆ ಬಂದಿದೆ. ಜನಪ್ರತಿನಿಧಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಕೆಲವು ಬೇಡಿಕೆಗಳನ್ನು ಸಲ್ಲಿಸುತ್ತಿದ್ದು, ಅದನ್ನೆಲ್ಲಾ ಬಜೆಟ್‌ ಬಳಿಕ ಚರ್ಚಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಗುಲ್ಬರ್ಗದಲ್ಲಿ ಖಾಲಿ ಮೈದಾನದಲ್ಲಿ ಹಾಕಿ ಪಂದ್ಯಾಟಗಳು ನಡೆಯುತ್ತಿವೆ. ಅಲ್ಲಿ ಸಿಂಥೆಟಿಕ್‌ ಟರ್ಫ್‌ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಕ್ರೀಡಾ ಹಾಸ್ಟೆಲ್‌, ಕೋಚ್‌ಗಳ ಸಮಸ್ಯೆ ಇದೆ. ಪ್ರತ್ಯೇಕ ಹಾಸ್ಟೆಲ್‌ಗಳ ನಿರ್ಮಾಣ, ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ ಒದಗಿಸಲು, ಸ್ಟೇಡಿಯಂಗಳ ಸ್ಥಾಪನೆಗೆ ಬಜೆಟ್‌ ಬಳಿಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿ ಅನುಷ್ಠಾನಕ್ಕೆ ಬಾಕಿ ಇರುವ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆಯೂ ಬಜೆಟ್‌ ಬಳಿಕ ಚಿಂತನೆ ನಡೆಯಲಿದೆ. ವಿವಿ ಸ್ಥಾಪನೆ ಯೋಜನೆಯು ಕ್ರೀಡಾ ಇಲಾಖೆಯಿಂದ ವಿಶ್ವವಿದ್ಯಾಲಯ ಇಲಾಖೆಗೆ ವರ್ಗಾವಣೆಗೊಂಡಿದೆ. ಬೆಂಗಳೂರಿನಲ್ಲಿ ಕ್ರೀಡಾ ವಿವಿ ಸ್ಥಾಪನೆ ಬಗ್ಗೆ ಚಿಂತನೆ ಇದೆ ಎಂದರು.

ಕ್ರೀಡಾಂಗಣಗಳಲ್ಲಿ ರಾಜಕೀಯ ಮತ್ತಿತರ ರಾರ‍ಯಲಿ, ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ, ಮೈದಾನಗಳಲ್ಲಿ ನಿರಂತರ ಕಾರ್ಯಕ್ರಮಗಳು, ವಾಣಿಜ್ಯ ವಸ್ತುಪ್ರದರ್ಶನ ಮತ್ತಿತರ ಚಟುವಟಿಕೆ ನಡೆದು, ಆಟೋಟ ಕಾರ್ಯಕ್ರಮ, ಕ್ರೀಡಾಕೂಟ ನಡೆಸಲು ಅಡ್ಡಿಯಾಗುತ್ತಿದೆ. ಈ ಬಗ್ಗೆ ರಾಜ್ಯಾದ್ಯಂತ ನಿಯಮ ರೂಪಿಸಬೇಕಾಗಿದೆ ಎಂದು ರಹೀಂ ಖಾನ್‌ ಹೇಳಿದರು.

ದೇಶದಲ್ಲಿ ಶೇ.50ರಷ್ಟು ಯುವಜನತೆ ಇದೆ. ಕೆಲವರು ತಪ್ಪು ಹವ್ಯಾಸ, ದುಶ್ಚಟಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ರಾಜ್ಯದ ಅಂಥವರಿಗೆ ಚಿಕಿತ್ಸೆ, ಆಪ್ತ ಸಮಾಲೋಚನೆ, ಪುನರ್ವಸತಿ ಕಲ್ಪಿಸಲು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಎರಡು ಕೋಟಿ ರೂ. ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕ್ರೀಡಾ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ಧನ ನೀಡಲು ಎರಡು ವರ್ಷದ ಸುಮಾರು ಐದು ಕೋಟಿ ರೂ. ಬಾಕಿ ಇತ್ತು. ಅದನ್ನು ನೀಡಲು ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. 15 ದಿನದಲ್ಲಿ ಸಮಸ್ಯೆ ಪರಿಹಾರ ನಡೆಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌, ಮುಖಂಡರಾದ ಮಮತಾ ಗಟ್ಟಿ, ಎ.ಸಿ.ವಿನಯರಾಜ್‌, ಮೊಹಮ್ಮದ್‌ ಮೋನು, ಎನ್‌.ಎಸ್‌.ಕರೀಂ, ಈಶ್ವರ್‌ ಉಳ್ಳಾಲ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ