ಆ್ಯಪ್ನಗರ

ಕರಾವಳಿ ಕಡಲು ಪ್ರಕ್ಷುಬ್ಧ : ಬಾಲಕ ಬಲಿ, ಮೀನುಗಾರಿಕೆ ಬಂದ್‌

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

Vijaya Karnataka 23 Apr 2018, 8:43 am
ಮಂಗಳೂರು: ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.
Vijaya Karnataka Web sea


ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು , ಉಡುಪಿ ಜಿಲ್ಲೆಯ ಕಟಪಾಡಿ, ಮರವಂತೆಯುದ್ದಕ್ಕೂ ಕಡಲು ಬಿರುಸಾಗಿದ್ದು ಕೆಲವೆಡೆ ತೆಂಗಿನ ಮರಗಳು ಸಮುದ್ರಪಾಲಾಗಿವೆ. ಕಳೆದ ಎರಡು ದಿನಗಳಿಂದ ಮೀನುಗಾರಿಕೆ ಸ್ತಬ್ಧ್ಧಗೊಂಡಿದೆ. ಮಲ್ಪೆಯಲ್ಲಿ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಪ್ರವಾಸಿಗರ ಪ್ರಯಾಣ ನಿಷೇಧಿಸಲಾಗಿದೆ. ಮರವಂತೆ ಬೀಚ್‌ನಲ್ಲಿ ಭಾರಿ ಅಲೆಗೆ ಸಿಲುಕಿ ಬಾಲಕನೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ.

ಮನೆ ಆವರಣಕ್ಕೆ ನೀರು


ಮಂಗಳೂರಿನ ಸೋಮೇಶ್ವರದಲ್ಲಿ ಕೆಲವು ಮನೆಗಳ ಗೋಡೆಗೂ ಸಮುದ್ರ ಅಲೆಗಳು ಬಡಿದಿವೆ. ಉಳ್ಳಾಲ,ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮುಂತಾದ ಪ್ರದೇಶಗಳಲ್ಲಿ ಭಾನುವಾರ ಮುಂಜಾನೆ 5 ಗಂಟೆ ವೇಳೆಗೆ ಹಾಗೂ ಸಂಜೆ 4ರ ನಂತರ ಭಾರಿ ಗಾತ್ರದ ಅಲೆಗಳು ಎದ್ದಿವೆ. ಕಡಲ ಅಲೆಗಳು ಸುಮಾರು 40-50 ಅಡಿಯಷ್ಟು ಹೆಚ್ಚುವರಿ ಪ್ರದೇಶವನ್ನು ಆಕ್ರಮಿಸಿವೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (ಹೈದರಾಬಾದ್‌) ಬಹು ಮಾದರಿ ಆಧಾರಿತ ತರಂಗ ಮುನ್ಸೂಚನಾ ವ್ಯವಸ್ಥೆಯು 2ರಿಂದ 3 ಮೀಟರ್‌ನಷ್ಟು ಎತ್ತರದ ಅಲೆಗಳು ದಡದತ್ತ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿತ್ತು. ಆದರೆ ಒಂದು ದಿನ ಮುಂಚಿತವಾಗಿ ಮಂಗಳೂರು ಕಡಲ ಕಿನಾರೆಯ ಕೆಲವೆಡೆ ಶುಕ್ರವಾರವೇ ಭಾರಿ ಗಾತ್ರದ ಅಲೆಗಳು ಕಾಣಿಸಿಕೊಂಡಿತ್ತು. ಏ.19ರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಈ ಮಧ್ಯೆ ಏ.23ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

30 ಕಿ.ಮೀ. ವೇಗದಲ್ಲಿ ಗಾಳಿ

ಅರಬ್ಬೀ ಸಮುದ್ರದಲ್ಲಿ ಕಳೆದ ಮೂರು ದಿನಗಳಿಂದ ಉಂಟಾಗಿರುವ ಬದಲಾವಣೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಗಂಟೆಗೆ 30 ಕಿಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೀನುಗಾರರು ಹಾಗೂ ಸಾರ್ವಜನಿಕರು ಮುಂದಿನ 24 ತಾಸುಗಳ ಕಾಲ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕಾರಣ ಏನು?

ಮುಂಗಾರು ಪೂರ್ವದಲ್ಲಿ ಸಮುದ್ರದಲ್ಲಾಗುವ ಬದಲಾವಣೆಯಿಂದ ಈ ರೀತಿಯ ಕಡಲ ಅಲೆಗಳು ಏಳುವುದು ಸಾಮಾನ್ಯವಾಗಿದೆ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಪ್ರೊ. ಸಿ.ಎನ್‌ ಪ್ರಭು ತಿಳಿಸಿದ್ದಾರೆ.

ಟ್ರಾಲ್‌ ಬೋಟ್‌ ವಾಪಸ್‌

ಮಂಗಳೂರು ಹಳೆ ಬಂದರು, ಉಳ್ಳಾಲ, ಪಣಂಬೂರು ಸಹಿತ ಕೆಲವೆಡೆ ಭಾನುವಾರ ಕೂಡ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಶನಿವಾರ ರಾತ್ರಿ ಮೀನುಗಾರಿಕೆಗೆ ತೆರಳಲು ಸಿದ್ಧವಾಗಿದ್ದ ಬೋಟ್‌ಗಳ ಯಾನವನ್ನು ಅಂತಿಮ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು. ಉಳ್ಳಾಲದಲ್ಲಿ ಸಮುದ್ರಕ್ಕೆ ತೆರಳಿದ್ದ ಸುಮಾರು 20ರಷ್ಟು ರಾತ್ರಿ ಬುಲ್‌ ಟ್ರಾಲ್‌ಬೋಟ್‌ಗಳು ವಾಪಸು ಬಂದಿವೆ.

ಸರ್ಫಿಂಗ್‌ ಸರಾಗ

ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪಣಂಬೂರು ಬೀಚ್‌ನಲ್ಲಿ ಯಾವಾಗಲೂ ನಡೆಯುತ್ತಿದ್ದ ಸ್ಪೀಡ್‌ ಬೋಟ್‌ ಸಹಿತ ವಿವಿಧ ನೀರಿನಾಟಗಳಿಗೆ ಶನಿವಾರ ಬ್ರೇಕ್‌ ಹಾಕಲಾಯಿತ್ತು. ಆದರೆ ಸಸಿಹಿತ್ಲು ಕಿನಾರೆಯಲ್ಲಿ ಸರ್ಫಿಂಗ್‌ ಸರಾಗವಾಗಿ ನಡೆದಿದೆ. ಎತ್ತರದ ಅಲೆಗಳು ಸರ್ಫಿಂಗ್‌ಗೆ ಪೂರಕವಾಗಿತ್ತು ಎಂದು ಪಣಂಬೂರು ಬೀಚ್‌ ಟೂರಿಸಂ ಡೆವಲಪ್‌ಮೆಂಟ್‌ ಪ್ರಾಜೆಕ್ಟ್ ಸಿಇಒ ಯತೀಶ್‌ಬೈಕಂಪಾಡಿ ತಿಳಿಸಿದ್ದಾರೆ.

ದಡಕ್ಕೆ ಏಡಿಗಳ ದಂಡು

ಭಾರಿ ಗಾತ್ರದ ಅಲೆಗಳು ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಣಂಬೂರು ಸೇರಿದಂತೆ ಹೆಚ್ಚಿನ ಸಮುದ್ರ ಕಿನಾರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಏಡಿಗಳು ಕಾಣಿಸಿಕೊಂಡಿವೆ. ಮಕ್ಕಳು ಏಡಿಯೊಂದಿಗೆ ಆಟವಾಡುವುದು ಕಂಡು ಬಂತು. ಶಾಂತವಾಗಿದ್ದ ಅರಬ್ಬೀ ಸಮುದ್ರದಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಬದಲಾವಣೆ ಕುರಿತು ವಿಜಯ ಕರ್ನಾಟಕ ಇತ್ತೀಚೆಗಷ್ಟೇ ವರದಿ ಮಾಡಿತ್ತು.

ಕರಾವಳಿಯಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡ ಭಾರಿ ಗಾತ್ರದ ಸಮುದ್ರ ಅಲೆಯಲ್ಲಿ ವಿಶೇಷತೆ ಏನೂ ಇಲ್ಲ. ಮುಂಗಾರು ಪೂರ್ವ ಸಮುದ್ರದಲ್ಲಿ ಇಂತಹ ಬದಲಾವಣೆಗಳು ಆಗುತ್ತವೆ.

- ಪ್ರೊ. ಸಿ.ಎನ್‌. ಪ್ರಭು, ವಿಜ್ಞಾನಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ