ಮೀನುಗಾರಿಕೆ ಬೋಟ್ಗಳಲ್ಲಿ ಚೀನಾ ಎಂಜಿನ್ ಪಾರಮ್ಯ: ಆ.1ರಿಂದ ಮೀನುಗಾರಿಕೆ ಅನುಮಾನ
ಪ್ರಸ್ತುತ ಯಾಂತ್ರೀಕೃತ ಮೀನುಗಾರಿಕೆಗೆ ಜು.31ರವರೆಗೆ ನಿಷೇಧವಿದ್ದು, ಆ.1ರಿಂದ ಮತ್ತೆ ಮೀನುಗಾರಿಕೆ ಆರಂಭವಾಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಗೆ ಬಳಕೆಯಾಗುವ ದೋಣಿಗಳ ಚೀನಾ ನಿರ್ಮಿತ ಎಂಜಿನ್ ಹಾಗೂ ಬಿಡಿಭಾಗಗಳ ಕೊರತೆಯೂ ಎದುರಾಗಿದೆ.
ಮಂಗಳೂರು: ಭಾರತ-ಚೀನಾ ಗಡಿಯಲ್ಲಿಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ದೇಶದೊಳಗೆ ಚೀನಾ ವಸ್ತುಗಳ ನಿಷೇಧದ ಆಕ್ರೋಶ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಇದರ ಪರಿಣಾಮ ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಬಳಕೆಯಾಗುವ ದೋಣಿಗಳ ಚೀನಾ ನಿರ್ಮಿತ ಎಂಜಿನ್ ಹಾಗೂ ಬಿಡಿಭಾಗಗಳ ಕೊರತೆಯೂ ಎದುರಾಗಿದೆ. ದ.ಕ. ಜಿಪಂ ಸಭಾಂಗಣದಲ್ಲಿ ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ನಡೆದ ಸಂವಾದದಲ್ಲಿ ಮೀನುಗಾರಿಕೆ ಮುಖಂಡರು ಈ ಸಮಸ್ಯೆ ತೆರೆದಿಟ್ಟಿದ್ದರು.
ಎಷ್ಟು ಬೋಟ್ಗಳಿವೆ?
ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ನೋಂದಾಯಿತ ಟ್ರಾಲ್ ಬೋಟ್-1331, ಪರ್ಸಿನ್- 57, ಸಾಂಪ್ರದಾಯಿಕ ನಾಡದೋಣಿ 1500, ನಾಡದೋಣಿ ಮೀನುಗಾರಿಕೆಯ 500 ಬೋಟ್ಗಳಿವೆ. ಮಂಗಳೂರು ಹಳೆ ಬಂದರು ದಕ್ಕೆ ಹಾಗೂ ಮಲ್ಪೆಯಲ್ಲಿ 2 ಸಾವಿರಕ್ಕೂ ಅಧಿಕ ಚೀನಾ ನಿರ್ಮಿತ ಎಂಜಿನ್ ಹೊಂದಿರುವ ಮೀನುಗಾರಿಕೆ ಬೋಟ್ಗಳಿವೆ. ಚೀನಾದಿಂದ ಎಂಜಿನ್ನ ಬಿಡಿ ಭಾಗಗಳು ಬಾರದಿದ್ದರೆ ದೇಶದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ.
ಕರಾವಳಿ ಮೀನುಗಾರಿಕೆ ಜತೆಗೆ ಒಳನಾಡು ಮೀನುಗಾರಿಕೆ ಬೆಳೆಯಬೇಕು: ಕೋಟಾ ಶ್ರೀನಿವಾಸ ಪೂಜಾರಿ
ಬೋಟ್ ತಯಾರಿಕೆಯಲ್ಲಿ ಭಾರತ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ!
ಚೀನಾ ನಿರ್ಮಿತ ವೈ-ಚಾಯ್, ಯ್ಯೂ-ಚಾಯ್, ಸಿನೋ ಟ್ರಕ್ ಕಂಪನಿಗಳ ಬೋಟ್ ಎಂಜಿನ್ಗಳು ಕರಾವಳಿ ತೀರದುದ್ದಕ್ಕೂ ಮೀನುಗಾರಿಕೆಗೆ ಬಳಕೆಯಾಗುತ್ತಿವೆ. ಈ ಕಂಪನಿಗಳ ಡೀಲರ್ಶಿಪ್ ಕಚೇರಿಗಳು ಕೊಚ್ಚಿ, ಕೊಲ್ಲಂ, ನಾಗರಕೊಯಿಲ್ನಲ್ಲಿದ್ದು, ಪ್ರತಿ ಮೀನುಗಾರಿಕೆ ದಕ್ಕೆಯಲ್ಲೂ ಇವರ ಶಾಖೆಗಳಿವೆ. ಈ ಎಲ್ಲ ಎಂಜಿನ್ಗಳು ಹೈಡ್ರೋಲಿಕ್ ಗೇರ್ ಹೊಂದಿದ್ದು, ಇದೇ ಮಾದರಿ ಬೋಟ್ಗಳನ್ನು ನಿರ್ಮಿಸುವಲ್ಲಿ ಭಾರತ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಇದರಿಂದ ಚೀನಾದಿಂದ ಎಂಜಿನ್ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ನಾವೇ ಹೆಚ್ಚು ಬಾಳ್ವಿಕೆಯ, ಉತ್ತಮ ಗುಣಮಟ್ಟದ ಬೋಟ್, ಬಿಡಿಭಾಗ ತಯಾರಿಸಿದರೆ ಅನುಕೂಲ ಎನ್ನುತ್ತಾರೆ ಮೋಹನ್ ಬೆಂಗ್ರೆ.
ಬರದ ನಾಡಲ್ಲಿ ಮತ್ಸ್ಯೋದ್ಯಮದ ಮುತ್ತು: ಉದ್ಯಮ ಆರಂಭಿಸುವವರಿಗೆ ಸರಕಾರದಿಂದ ಸಹಾಯಧನ
ದುಬಾರಿ ಎಂಜಿನ್
ಪರ್ಸಿನ್ ಬೋಟೊಂದರ ಎಂಜಿನ್ 20ರಿಂದ 24 ಲಕ್ಷ ರೂ. ಮೌಲ್ಯದ್ದಾಗಿರುತ್ತದೆ. ಒಂದು ಪರ್ಸಿನ್ ಬೋಟ್ಗೆ ಸುಮಾರು 2 ಕೋಟಿ ರೂ. ವೆಚ್ಚವಾಗುತ್ತದೆ. ಇದರಿಂದ ಒಂದು ಬೋಟ್ನಲ್ಲಿ ಸುಮಾರು 40 ಮಂದಿಗೆ ನೇರ ಉದ್ಯೋಗ ಸಾಧ್ಯವಾಗಿದೆ.
ಹೊರ ರಾಜ್ಯದ ಕಾರ್ಮಿಕರು
ಪ್ರಸ್ತುತ ಯಾಂತ್ರೀಕೃತ ಮೀನುಗಾರಿಕೆಗೆ ಜು.31ರವರೆಗೆ ನಿಷೇಧವಿದ್ದು, ಆ.1ರಿಂದ ಮತ್ತೆ ಮೀನುಗಾರಿಕೆ ಆರಂಭವಾಗಲಿದೆ. ಆದರೆ ದ.ಕ. ಜಿಲ್ಲೆಯ ಯಾಂತ್ರೀಕೃತ ಮೀನುಗಾರಿಕೆ ಬಹುತೇಕವಾಗಿ ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕಾರ್ಮಿಕರನ್ನು ಅವಲಂಬಿಸಿದೆ. ಮೀನುಗಾರಿಕೆ ಮಾತ್ರವಲ್ಲದೆ, ಇಲ್ಲಿನ ಐಸ್ಪ್ಲಾಂಟ್, ಫಿಸ್ ಮೀಲ್ ಹಾಗೂ ಮೀನು ಲೋಡಿಂಗ್, ಮೀನು ಸ್ವಚ್ಛತಾ ಕಾರ್ಯದಲ್ಲಿಯೂ ಹೊರ ರಾಜ್ಯಗಳ ಕಾರ್ಮಿಕರು ಬಹಳವಾಗಿ ತೊಡಗಿಸಿಕೊಂಡಿದ್ದಾರೆ. ಲಾಕ್ಡೌನ್ನಿಂದ ಹೊರ ರಾಜ್ಯಗಳ ಬಹುತೇಕ ಕಾರ್ಮಿಕರು ಮಾ.26ರಿಂದಲೇ ತಮ್ಮ ಊರುಗಳಿಗೆ ತೆರಳಿದ್ದಾರೆ ಎನ್ನುತ್ತಾರೆ ಮೋಹನ್ ಬೆಂಗ್ರೆ.
ಶೂನ್ಯ ಬಡ್ಡಿ ದರದಲ್ಲಿಮೀನುಗಾರರಿಗೆ ಸಾಲ
ಆ.1ಕ್ಕೆ ಮೀನುಗಾರಿಕೆ ಅನುಮಾನ
ಕಳೆದೊಂದು ವರ್ಷದಿಂದ ಚಂಡಮಾರುತ, ಬಂದ್, ಲಾಕ್ಡೌನ್ನಿಂದ ನಲುಗಿದ ಮೀನುಗಾರಿಕೆಗೆ ಕೊರೊನಾ ದೊಡ್ಡ ಪ್ರಮಾಣದ ಆಘಾತ ನೀಡಿದೆ. ಕೊರೊನಾದಿಂದಾಗಿ ಕಳೆದ ಮೀನುಗಾರಿಕೆ ಅವಧಿಯ ಕೊನೆಯ ಮೂರು ತಿಂಗಳಲ್ಲಿಸಂಕಷ್ಟಕ್ಕೆ ಸಿಲುಕಿದ್ದ ಯಾಂತ್ರೀಕೃತ ಬೋಟ್ಗಳ ಮೀನುಗಾರರು ಈ ಬಾರಿಯ ಮೀನುಗಾರಿಕೆ ಆ.1ಕ್ಕೆ ಆರಂಭಗೊಳ್ಳುವ ಬಗ್ಗೆ ಆತಂಕಿತರಾಗಿದ್ದಾರೆ.
ಆತಂಕದಲ್ಲಿ ಮೀನುಗಾರರು
ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತಿದೆ. ಈಗಾಗಲೇ ಬಹುತೇಕ ಕಾರ್ಮಿಕರು ತಮ್ಮೂರಿಗೆ ವಲಸೆ ಹೋಗಿದ್ದಾರೆ. ಕಾರ್ಮಿಕರು ಮತ್ತೆ ವಾಪಸಾಗಬೇಕಿದ್ದರೆ ರೈಲುಗಳ ಪ್ರಯಾಣ ಆರಂಭಗೊಳ್ಳಬೇಕಿದೆ. ಹೊರ ರಾಜ್ಯಗಳಿಂದ ಬರುವವರಿಗೆ ಸುಮಾರು 14 ದಿನಗಳ ಹೋಂ ಕ್ವಾರಂಟೈನ್ ಅಗತ್ಯವಾಗಿರುವುದರಿಂದ ಆ.1ರಿಂದ ಮೀನುಗಾರಿಕೆ ಆರಂಭವಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಳೆದ ವರ್ಷದ ಮೀನುಗಾರಿಕಾ ಋುತುವಿನ ಆರಂಭದಲ್ಲಿ ಹವಾಮಾನ ವೈಪರೀತ್ಯ, ಚಂಡಮಾರುತ ಮೀನುಗಾರಿಕೆಗೆ ಅಡ್ಡಿಪಡಿಸಿದ್ದರೆ, ಈ ಬಾರಿ ಕೊರೊನಾ ಆತಂಕ ಮೀನುಗಾರಿಕೆ ಕ್ಷೇತ್ರವನ್ನೂ ತಲ್ಲಣಗೊಳಿಸಿದೆ.
ರಾಜ್ಯದ ಮೀನುಗಾರರಿಗೆ ₹4ಸಾವಿರ ಕೋಟಿ ವಿಶೇಷ ಪ್ಯಾಕೇಜ್: ಕೋಟಾ ಶ್ರೀನಿವಾಸ ಪೂಜಾರಿ
ಮೀನುಗಾರಿಕೆ ಸಂಪೂರ್ಣ ನಲುಗಿದೆ
ದೇಶಾದ್ಯಂತ ಮೀನುಗಾರಿಕೆಗೆ ಚೀನಾ ನಿರ್ಮಿತ ಎಂಜಿನ್ ಬಳಸಲಾಗುತ್ತಿದೆ. ಈ ಬಾರಿ ಡೀಸೆಲ್ ದರ ಹೆಚ್ಚಳ, ಕೊರೊನಾ ಕಾಟ, ಕಾರ್ಮಿಕರ ಕೊರತೆಯಿಂದ ಮೀನುಗಾರಿಕೆ ಸಂಪೂರ್ಣ ನಲುಗಿ ಹೋಗಿದೆ. ಮೀನುಗಾರಿಕೆ ಆರಂಭವಾಗುವುದರ ಜತೆ ಐಸ್ ಉದ್ಯಮ, ಸಂಸ್ಕರಣೆ ಘಟಕ ಆರಂಭವಾಗಬೇಕು, ಇಲ್ಲದಿದ್ದಲ್ಲಿ ತೊಂದರೆಯಾಗಲಿದೆ. ಅಲ್ಲೂ ಕಾರ್ಮಿಕರ ಕೊರತೆ ಇರುವ ಕಾರಣ ಆ.1ಕ್ಕೆ ಮೀನುಗಾರಿಕೆ ಆರಂಭಿಸುವುದು ಕಷ್ಟವಾಗಲಿದೆ.
ಮೋಹನ್ ಬೆಂಗ್ರೆ, ದ.ಕ. ಜಿಲ್ಲಾಅಧ್ಯಕ್ಷರು, ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ