ಆ್ಯಪ್ನಗರ

ನದಿಗಳ ಪಾತ್ರವೇ ಬದಲು! ಪ್ರವಾಹದಿಂದ ಹೊಸ ವಿಸ್ಮಯ ಸೃಷ್ಟಿ, ಹಳ್ಳಗಳ ಗಾತ್ರ ದುಪ್ಪಟ್ಟು

ನೇತ್ರಾವತಿ ನದಿ, ಮೃತ್ಯುಂಜಯ ಹೊಳೆ ಮತ್ತು ಚಾರ್ಮಾಡಿ ಹೊಳೆಗಳಲ್ಲಿ ಈ ಅದ್ಭುತ ಗೋಚರಿಸಿದೆ. ರಕ್ಷ ಣಾ ತಂಡಗಳು ಡ್ರೋನ್‌ ಮೂಲಕ ತೆಗೆದ ಚಿತ್ರಗಳು ಈ ವಿಸ್ಮಯದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ನೀಡಿವೆ.

Vijaya Karnataka 13 Aug 2019, 10:02 am
ಪುತ್ತೂರು: ಪ್ರಕೃತಿಯ ಆಟದ ಎದುರು ಮನುಷ್ಯರ ಆಟ ಏನೂ ನಡೆಯದು ಎಂಬ ಹಿರಿಯರ ಮಾತುಗಳು ನಿಜವಾಗಿದೆಯೇ? ನದಿಯೊಂದು ತಾನು ಹರಿಯುತ್ತಾ ಹೋಗುವ ಹಾದಿಯನ್ನು ಶತಮಾನಗಳಿಗೊಮ್ಮೆ ಆಗಾಗ ಬದಲಿಸುತ್ತಾ, ವಿಸ್ತರಿಸುತ್ತಾ, ರೂಪಾಂತರಗೊಳಿಸುತ್ತಾ ಸಾಗುತ್ತದೆ ಎಂಬ ಜನಜನಿತ ನಂಬಿಕೆ ಈಗ ನಮ್ಮ ಕಣ್ಣೆದುರೇ ನಿಜವಾಗಿದೆಯೇ?
Vijaya Karnataka Web ಚಾರ್ಮಾಡಿ ಗ್ರಾಮದಲ್ಲಿ ಹೊಳೆಯು ಹೊಸ ಪಾತ್ರ ಸೃಷ್ಟಿಸಿಕೊಂಡು ಹರಿಯುತ್ತಿರುವ ದೃಶ್ಯ.


-ಹೌದು ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಹಲವು ಉದಾಹರಣೆಗಳು ಸಿಕ್ಕಿವೆ.

ಆ.9ರಂದು ಸಂಭವಿಸಿದ ಭೀಕರ ಪ್ರವಾಹ ದಿನ ಕಳೆದಂತೆ ಹೊಸ ಹೊಸ ಸಂಕಷ್ಟಗಳ ಜತೆಗೆ, ಹೊಸ ಹೊಸ ವಿಸ್ಮಯಗಳನ್ನೂ ಬಿಚ್ಚಿಡುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅರಬ್ಬಿ ಸಮುದ್ರದ ಕಡೆಗೆ ಹರಿಯುವ ನೇತ್ರಾವತಿ ಮತ್ತು ಅದರ ಉಪ ನದಿಗಳು ಅನೇಕ ಕಡೆ ತಮ್ಮ ಪಾತ್ರವನ್ನೇ ಬದಲಿಸಿದ್ದು ಕಂಡುಬಂದಿದೆ. ಬದಲಾದ ಸ್ಥಿತಿ ಹಾಗೇ ಉಳಿದರೆ ಮುಂದಿನ ದಿನಗಳಲ್ಲಿ ನದಿಯ ಹೊಸ ರೂಪ ಶಾಶ್ವತವಾಗಲಿದೆ.


ನೇತ್ರಾವತಿ ನದಿ, ಮೃತ್ಯುಂಜಯ ಹೊಳೆ ಮತ್ತು ಚಾರ್ಮಾಡಿ ಹೊಳೆಗಳಲ್ಲಿ ಈ ಅದ್ಭುತ ಗೋಚರಿಸಿದೆ. ರಕ್ಷ ಣಾ ತಂಡಗಳು ಡ್ರೋನ್‌ ಮೂಲಕ ತೆಗೆದ ಚಿತ್ರಗಳು ಈ ವಿಸ್ಮಯದ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ನೀಡಿವೆ.

ಕೊಲ್ಲಿ, ಕಾಜೂರು, ಕಿಲ್ಲೂರು, ದಿಡುಪೆ, ಚಾರ್ಮಾಡಿ ಹೊಸಮಠ ಮುಂತಾದ ಕಡೆ ನದಿಗಳು ತಮ್ಮ ಮೂಲ ಗತಿಯನ್ನು ಬಿಟ್ಟು ಪಕ್ಕದ ಪ್ರದೇಶಗಳನ್ನು ಆಪೋಷನ ಪಡೆದುಕೊಂಡು ಮುಂದಕ್ಕೆ ಹರಿದಿದೆ. ನೀರಿನೊಂದಿಗೆ ಬಂದ ಮರದ ರಾಶಿಗಳು ಸೇತುವೆಯ ಕಿಂಡಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ನೀರಿನ ಸರಾಗಕ್ಕೆ ಅಡ್ಡಿಯಾಗಿದ್ದು, ರಭಸದ ಪ್ರವಾಹ ಪಕ್ಕಕ್ಕೆ ವಾಲಿ ರಸ್ತೆಯನ್ನೂ ಕೊಚ್ಚಿಕೊಂಡು ಹೋಗಿದ್ದಲ್ಲದೆ, ತೋಟ, ಮನೆಗಳನ್ನೂ ಸ್ವಾಹಾ ಮಾಡಿದೆ.

ಚಾರ್ಮಾಡಿ ಹೊಸಮಠ ಪರಿಸರದಲ್ಲಿ ಅದಾವ ಭೀಕರತೆ ಸೃಷ್ಟಿಯಾಗಿದೆ ಎಂದರೆ ನದಿಯು ಪಕ್ಕದಲ್ಲಿ ಹೊಸ ಕವಲು ಸೃಷ್ಟಿಸಿ ಸುಮಾರು 200 ಮೀ.ನಷ್ಟು ಹೆಚ್ಚುವರಿಯಾಗಿದೆ. ಅಲ್ಲಿದ್ದ ಮನೆಗಳು, ತೋಟಗಳೆಲ್ಲ ಕೊಚ್ಚಿ ಹೋಗಿವೆ. ವಸತಿ ಪ್ರದೇಶದಲ್ಲಿ ಪೂರ್ತಿ ಮರಳು ತುಂಬಿದೆ. ಸಮುದ್ರದ ದಂಡೆಯಂತೆ ಗೋಚರಿಸುತ್ತಿದೆ. ಇಲ್ಲಿ ಮನೆಗಳಿದ್ದವು, ತೋಟಗಳಿದ್ದವು ಎಂಬ ಕುರುಹೇ ಇಲ್ಲ. ಒಂದು ಕಡೆ ಕೇವಲ ಒಂದು ಬಸಳೆ ಚಪ್ಪರ ಮಾತ್ರ ಉಳಿದುಕೊಂಡಿದೆ.

ದಿಡುಪೆ ಭಾಗದಲ್ಲೂ ಅನೇಕ ಕಡೆ ನೇತ್ರಾವತಿ ಹೊಸ ಕವಲು ಸೃಷ್ಟಿಸಿಕೊಂಡು ಹರಿಯುತ್ತಿದೆ. ಹಳ್ಳಗಳು ತಮ್ಮ ಗಾತ್ರ ವೃದ್ಧಿಸಿಕೊಂಡು ದುಪ್ಪಟ್ಟು ಅಗಲವಾಗಿದ್ದರೆ, ನದಿಗಳು ಹೊಸ ಹಾದಿ ಸೃಷ್ಟಿಸಿಕೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ