ಆ್ಯಪ್ನಗರ

ಕರಾವಳಿಯಲ್ಲಿ ಸದ್ದು ಮಾಡ್ತಿದೆ #EducationInTulu ಟ್ರೆಂಡ್..! ಏನಿದು ಹ್ಯಾಶ್‌ಟ್ಯಾಗ್ ಅಭಿಯಾನ?

ತುಳು ಭಾಷೆಗೆ ಸಾಂವಿಧಾನಿಕವಾಗಿ ಸಿಗಬೇಕಾದ ಅರ್ಹತೆ ಮತ್ತು ಸ್ಥಾನಮಾನಗಳು ಸಿಗಬೇಕು ಎನ್ನುವ ಕೂಗು ಎದ್ದಿದ್ದು, ಇದೇ ಆಗಸ್ಟ್ 16ರಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ನಡೆಸಲು ತುಳುವರು ನಿರ್ಧರಿಸಿದ್ದಾರೆ.

Vijaya Karnataka Web 14 Aug 2020, 12:15 pm
ಮಂಗಳೂರು: ತುಳು ಭಾಷೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ತುಳುನಾಡಿಗರ ಮಾತೃಭಾಷೆ. ಮನೆಯಿಂದ ಹಿಡಿದು ಹಾದಿಬೀದಿಯಲ್ಲಿ ಸಿಕ್ಕ ಜನರೂ ಕೂಡ ತಮ್ಮ ಮಾತೃಭಾಷೆ ಯಾವುದೇ ಇದ್ದರೂ ವ್ಯಾವಹಾರಿಕವಾಗಿ ಬಳಸುವಾಗ ತುಳುವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯ, ಹೊರ ದೇಶಗಳಲ್ಲಿಯೂ ತಮ್ಮ ನೆಲೆಯನ್ನು ಕಂಡುಕೊಂಡಿರುವ ತುಳುವರು ಅಲ್ಲೂ ತಮ್ಮ ತಾಯ್ನೆಲದ ಕಂಪನ್ನು ಸೂಸಿದ್ದಾರೆ.
Vijaya Karnataka Web Education in Tulu


ಕರ್ನಾಟಕದಲ್ಲಿ ಕನ್ನಡದ ನಂತರ ಅತೀ ಹೆಚ್ಚಾಗಿ ಬಳಸಲ್ಪಡುವ ತುಳು ಭಾಷೆಗೆ ಇನ್ನೂ ಸಾಂವಿಧಾನಿಕ ಸ್ಥಾನಮಾನ ಸಿಕ್ಕಿಲ್ಲ ಅನ್ನುವ ಕೊರಗು ತುಳುವರದ್ದು. ಇದಕ್ಕಾಗಿ ಕಳೆದ ಹಲವು ವರ್ಷಗಳಿಂದ ಅನೇಕ ಹೋರಾಟಗಳು, ಅಭಿಯಾನಗಳು ನಡೆಯುತ್ತಾ ಬಂದಿವೆ. ಇದಿಗ ಮತ್ತೊಮ್ಮೆ ತುಳು ಭಾಷೆಗೆ ಸಾಂವಿಧಾನಿಕವಾಗಿ ಸಿಗಬೇಕಾದ ಅರ್ಹತೆ ಮತ್ತು ಸ್ಥಾನಮಾನಗಳು ಸಿಗಬೇಕು ಎನ್ನುವ ಕೂಗು ಎದ್ದಿದ್ದು, ಇದೇ ಆಗಸ್ಟ್ 16ರಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ನಡೆಸಲು ತುಳುವರು ನಿರ್ಧರಿಸಿದ್ದಾರೆ.

ಕರಾವಳಿ ಭಾಗದಲ್ಲಿ ಅನೇಕ ತುಳುಪರ ಕಾರ್ಯಕ್ರಮಗಳನ್ನು ಮಾಡಿ ಜನಮನ್ನಣೆ ಪಡೆದಿರುವ ‘ಜೈ ತುಳುನಾಡ್’ ಸಂಘಟನೆ ಈ ಸಾಮಾಜಿಕ ಅಭಿಯಾನದ ನೇತೃತ್ವದ ವಹಿಸಿಕೊಂಡಿದ್ದು ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸಲು ಆರಂಭಿಸಿದೆ. ಈ ಹಿಂದೆ ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಬೇಕು, ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಮತ್ತು ತುಳು ಲಿಪಿಯನ್ನು ಸಾರ್ವಜನಿಕರಿಗೆ ಕಲಿಸುವಂತಹ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ‘ಜೈ ತುಳುನಾಡ್ ಸಂಘಟನೆ’ ಈ ವರ್ಷ ತುಳು ಭಾಷೆಯಲ್ಲಿ ಶಿಕ್ಷಣ ನೀಡಬೇಕು ಅನ್ನುವಂತಹ ಅಭಿಯಾನವನ್ನು ಆರಂಭಿಸಿದೆ.

ಅದರಂತೆ ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವ ಬಗೆಗೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು ಇದೇ ಆಗಸ್ಟ್ 16ರಂದು ಟ್ವೀಟ್ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ತುಳು ಭಾಷಾಪ್ರೇಮಿಗಳು ಪಾಲ್ಗೊಳ್ಳುವಂತೆ ಜೈ ತುಳುನಾಡ್ ಸಂಘಟನೆ ವಿನಂತಿಸಿಕೊಂಡಿದ್ದು, #EducationInTulu ಅನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತೆ ಸರ್ಕಾರವನ್ನು ಜನರು ಎಚ್ಚರಿಸಬೇಕೆಂದು ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ