ಮಂಗಳೂರು: ನನಗೆ ಬದುಕಲು ಒಂಚೂರು ಇಷ್ಟವಿರಲಿಲ್ಲ. ಪ್ರತಿದಿನ ಸಾಯುವ ನಿರ್ಧಾರವೊಂದೇ ಬದುಕಿನ ಗುರಿಯಾಗಿತ್ತು.ಬದುಕಿನಲ್ಲಿ ಮೂರು ಬಾರಿ ಬದುಕು ಬೇಡ ಎಂದೇ ಆತ್ಮಹತ್ಯೆ ಮಾಡಲು ಪ್ರಯತ್ನ ಪಟ್ಟು ಸೋತು ಹೋದೆ. ಅಲ್ಲಿನ ಸೋಲು ಈಗ ಸಾವಿರಾರು ಅನಾಥ ಮಕ್ಕಳ ತಾಯಿಯಾಗಿ ಉಳಿಯುವ ಭಾಗ್ಯ ಬಂತು ಎಂದರು ಮಹಾರಾಷ್ಟ್ರದ ಪುಣೆಯ ಅನಾಥ ಮಕ್ಕಳ ತಾಯಿ ಖ್ಯಾತಿಯ ಸಮಾಜಸೇವಕಿ ಸಿಂಧೂತಾಯಿ ಸಪ್ಕಲ್.
ಅವರು ಮಂಗಳೂರು ಪುರಭವನದಲ್ಲಿ ಶನಿವಾರ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಲತ್ವ ವಿಶ್ವ ಪ್ರಶಸ್ತಿ-2017 ಸ್ವೀಕರಿಸಿ ಮಾತನಾಡಿದರು.
ಸಾಯುವ ನಿರ್ಧಾರ ನನಗೆ ಎಂದಿಗೂ ಗೆಲುವು ತಂದು ಕೊಡಲಿಲ್ಲ. ರೈಲ್ವೆ ಫ್ಲ್ಯಾಟ್ ಫಾರಂನಲ್ಲಿ ಹಾಡುಗಳನ್ನು ಹಾಡಿ ಹೊಟ್ಟೆ ತುಂಬಿಸಿ ಬಿಡುತ್ತಿದ್ದೆ. ನನ್ನ ಹಾಡುಗಳನ್ನು ಕೇಳಿದ ಬಳಿಕ ಅವರು ತಿನ್ನಲು ಏನಾದರೂ ಕೊಡುತ್ತಿದ್ದರು. ನಾನು ತಿಂದು ಉಳಿದ ಆಹಾರವನ್ನು ಫ್ಲ್ಯಾಟ್ ಫಾರಂನಲ್ಲಿ ಮಲಗುತ್ತಿದ್ದ ಭಿಕ್ಷುಕರಿಗೆ ನೀಡುತ್ತಿದ್ದೆ. ಕಾರಣ ಈ ಭಿಕ್ಷುಕರು ರಾತ್ರಿ ಹೊತ್ತು ನನಗೆ ರಕ್ಷಣೆ ಕೊಡುತ್ತಿದ್ದರು. ನಾನು ಅವರ ನಡುವೆ ಮಲಗಿ ಬಿಡುತ್ತಿದ್ದೆ. ಅವರು ಬೇಗನೆ ಮಲಗಿ ಬಿಡುತ್ತಿದ್ದರು. ನಾನು ನಿಜವಾದ ಭಿಕ್ಷುಕಿ ಅಲ್ಲದೇ ಇರುವುದರಿಂದ ನನಗೆ ನಿದ್ದೆ ಬರುತ್ತಿರಲಿಲ್ಲ ಎಂದು ಸಂಕಷ್ಟದ ಬದುಕಿನ ಪುಟವನ್ನು ತೆರೆದಿಟ್ಟರು ಸಪ್ಕಲ್.
ಸಶ್ಮಾನದಲ್ಲಿ ಮಲಗಿದೆ !
ಫ್ಲ್ಯಾಟ್ಫಾರಂನಲ್ಲಿ ಮಲಗಿಕೊಳ್ಳುವುದನ್ನು ಬಿಟ್ಟು ಸಶ್ಮಾನದಲ್ಲಿ ಮಲಗಲು ಆರಂಭ ಮಾಡಿದೆ. ಅಲ್ಲಿ ರಾತ್ರಿ ಹೊತ್ತು ಯಾರು ಕೂಡ ಬರುತ್ತಿರಲಿಲ್ಲ. ಸಶ್ಮಾನದಲ್ಲಿ ಭದ್ರತೆ ಇತ್ತು. ಜನರಿಗೆ ಸಶ್ಮಾನದಲ್ಲಿ ನಾನು ಇರುವುದನ್ನು ನೋಡಿ ಸಿಂಧೂ ತಾಯಿ ಭೂತ ಎಂದೇ ಭಾವಿಸಿ ಬಿಟ್ಟಿದ್ದರು. ಯಾರು ಕೂಡ ಬರುತ್ತಿರಲಿಲ್ಲ. ಇದೇ ಸಮಯದಲ್ಲಿ ನನ್ನ ಇಂತಹ ಬದುಕು ಬೇಡ ಎಂದು ಸಾಯಲು ನಿರ್ಧಾರ ಮಾಡಿದೆ. ರೈಲ್ವೆ ಫ್ಲ್ಯಾಟ್ ಫಾರಂನಲ್ಲಿ ಹಾಡನ್ನು ಹಾಡಿ ಸಾಕಷ್ಟು ಆಹಾರವನ್ನು ತಿಂದು ಮತ್ತೆ ಸ್ವಲ್ಪ ಬಟ್ಟೆಯಲ್ಲಿ ಕಟ್ಟಿಕೊಂಡು ಸಾಯಲು ನಿರ್ಧಾರ ಮಾಡಿದೆ. ಆದರೆ ಸರಿಸುಮಾರು ರಾತ್ರಿ 2 ಗಂಟೆಯ ಸುಮಾರಿಗೆ ಸಾಯುತ್ತೇನೆ ಎಂದು ಸಶ್ಮಾನದ ಕಡೆಗೆ ಸಾಗಿದಾಗ ಅಲ್ಲಿ ಯಾರೋ ಜೋರಾಗಿ ಅಳುತ್ತಿರುವ ಶಬ್ದ ಕೇಳಿಸಿತು. ಈ ಒಂದು ಆಳು ನನ್ನ ಬದುಕಿಗೆ ತಿರುವು ಕೊಟ್ಟಿತು. ನಾನು ಸಾಯುತ್ತೇನೆ.ಒಂಚೂರು ನೀರು ಕೊಡಿ ಎಂದು ಬೊಬ್ಬೆ ಹಾಕುತ್ತಿದ್ದ ಆತನ ಬಳಿ ನಾನು ಹೋಗಿ ನೀರು ಕೊಟ್ಟೆ .ನನ್ನ ಬಳಿ ಇದ್ದ ರೊಟ್ಟಿಯನ್ನೂ ಕೊಟ್ಟೆ .ಅವನು ಬದುಕಿದ .ನಾನು ಅಲ್ಲಿ ಯೋಚನೆ ಮಾಡಿ ನಾನೇಕೆ ಸಾಯಬೇಕು. ಇಂತವರಿಗೆ ನೆರವು ನೀಡಬೇಕು ಎಂದು ಕೊಂಡೆ. ಇದು ನನ್ನ ಇಂದಿನ ಬದುಕಿಗೆ ಮುನ್ನುಡಿ ಬರೆದ ವಿಚಾರವಾಗಿತ್ತು ಎಂದು ನೆನಪಿಸಿದರು ಸಪ್ಕಲ್.
ಸಾಧನೆಗೆ ಭಗವಂತನ ಕೊಟ್ಟ ಅವಕಾಶ
ಒಂದು ಬಾರಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಸ್ನಲ್ಲಿ ಬರುತ್ತಿದ್ದಾಗ ಟಿಕೆಟ್ ಕಲೆಕ್ಟರ್ ನನಗೆ ಟಿಕೆಟ್ ಕೊಡಲು ಹಿಂದೇಟು ಹಾಕಿ ಬಸ್ನಿಂದ ಇಳಿಯಲು ಸೂಚನೆ ಕೊಟ್ಟ. ನನ್ನ ಕೂದಲು, ನನ್ನ ಬಟ್ಟೆ ನೋಡಿ ಬಸ್ನಿಂದ ಇಳಿಯಲೇ ಬೇಕು ಎಂದು ಪಟ್ಟು ಹಿಡಿದ. ನಾನು ವಾಗ್ವಾದ ಮಾಡಿದೆ. ರಾತ್ರಿ ಹೊತ್ತು, ಜೋರಾದ ಮಳೆ, ಗುಡುಗು ಸಿಡಿಲಿನ ಅರ್ಭಟ ಬೇರೆ ಇತ್ತು. ಇದೇ ಸಮಯದಲ್ಲಿ ಭಿಕಾರಿಯೊಬ್ಬ ಬಸ್ನಲ್ಲಿದ್ದ .ನೀವು ರೈಲ್ವೆ ಫ್ಲ್ಯಾಟ್ ಫಾರಂನಲ್ಲಿ ರಾತ್ರಿ ಭಜನೆಯೊಂದನ್ನು ಹಾಡಿದ್ದೀರಿ ಅಲ್ವಾ ಎಂದು ಪ್ರಶ್ನಿಸಿದ .ಹೌದು ಎಂದೇ ಬನ್ನಿ ಬಸ್ಸಿನಿಂದ ಇಳಿಯೋಣ ಚಾ ಕುಡಿಯೋಣ ಅಂದು ಬಿಟ್ಟ .ನಾನು ಒಪ್ಪಿ ಇಳಿದೆ. ಬಸ್ ಕೊಂಚ ದೂರಕ್ಕೆ ಹೋದಾಗ ಬಸ್ನ ಮೇಲೆ ಸಿಡಿಲು ಬಡಿಯಿತು ಎಲ್ಲವೂ ಭಸ್ಮವಾಯಿತು. ಭಗವಂತ ನನಗೊಂದು ಬದುಕಲು ಅವಕಾಶ ಕೊಟ್ಟ ಎಂದು ಕೊಂಡು ಬಿಟ್ಟೆ ಎಂದು ಸಪ್ಕಲ್ ತನ್ನ ಬದುಕಿನ ಪುಟಗಳನ್ನು ಮಾತಿನಲ್ಲಿ ತಿರುವಿ ಹಾಕಿದರು.
ಪತಿ ಕೂಡ ಅತ್ತು ಬಿಟ್ಟ
ನಾನು ಜಾಸ್ತಿ ಓದಿಲ್ಲ. ನಾಲ್ಕನೇ ಕ್ಲಾಸ್ ಓದಿದ್ದು. ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಸಿದರು. ಪತಿ ನನ್ನನ್ನು ಮನೆಯಿಂದ ಹೊರಗಡೆ ಹಾಕಿದ ನಂತರ ನಾನು ಭಿಕ್ಷುಕಿಯಾದೆ. ಆದರೆ ಸಾವಿರಕ್ಕೂ ಅಧಿಕ ಮಕ್ಕಳನ್ನು ಸಾಕಿ ಪ್ರಶಸ್ತಿಗಳನ್ನು ನನ್ನನ್ನು ಹುಡುಕಿಕೊಂಡು ಬಂದಾಗ ಪತಿ ಹಾಗೂ ಆತನ ಮನೆಯವರು ನನ್ನನ್ನು ಸತ್ಕಾರ ಮಾಡಿದರು. ಪತಿ ನನ್ನ ಈಗಿನ ಸ್ಥಿತಿ ನೋಡಿ ಅತ್ತು ಬಿಟ್ಟ. ನಾನು ಹೋಗಿ ಅವನನ್ನು ಸಮಾಧಾನ ಮಾಡಿದೆ. ಆದರೆ ಪತಿಯಾಗಿ ನೀನು ನನ್ನ ಜತೆಯಲ್ಲಿ ಬರಕೂಡದು.ಮಗುವಾಗಿ ಬರಬೇಕು ಎಂದು ಬಿಟ್ಟೆ. ಆತ ಈಗ ನನಗೆ ಮಗು. ನಾನು ಸಾಕಿದ ದತ್ತು ಮೂರು ಮಕ್ಕಳಾದ ದೀಪಕ್, ಶ್ಯಾಮ್ ಹಾಗೂ ವಿನಯ್ ಎಲ್ಲರೂ ಉನ್ನತ ಸ್ಥಾನದಲ್ಲಿದ್ದಾರೆ. ದೀಪಕ್ವಂತೂ ನಾನು ಮೊದಲು ಎತ್ತಿಕೊಂಡು ಸಾಕಿದ ಮಗು. ನನ್ನ ಮೇಲೆ ಪುಣೆ ವಿವಿಯಲ್ಲಿ ಪಿಎಚ್ಡಿ ಮಾಡುತ್ತಿದ್ದಾನೆ. ಈಗ ನನಗೆ ವಯಸ್ಸಾಗಿದೆ. ಆದರೆ ಅನಾಥ ಮಕ್ಕಳಿಗೆ ದಾರಿ ದೀಪವಾಗಬೇಕು ಎನ್ನುವ ಕನಸು ಮಾತ್ರ ಗಟ್ಟಿಯಾಗಿದೆ ಎಂದರು. ಅಂದಹಾಗೆ ಸಿಂಧೂತಾಯಿ ಸಪ್ಕಲ್ ಅವರು ಸರಿಸುಮಾರು 2 ಸಾವಿರಕ್ಕೂ ಅಧಿಕ ಅನಾಥ ಮಕ್ಕಳನ್ನು ಸಾಕಿ ಅವರಿಗೆ ಉದ್ಯೋಗದ ಹಾದಿ ಹಿಡಿಸಿದ್ದಾರೆ. 786ಕ್ಕೂ ಅಧಿಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದೆ.
ಪ್ರಶಸ್ತಿ ಪ್ರದಾನ
ಸಿಂಧೂ ಸಪ್ಕಲ್ಗೆ ಪ್ರದಾನ ಮಾಡಿ ಮಾತನಾಡಿದ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನಗುಂದ, ಬಡವ, ಶ್ರೀಮಂತ ಎನ್ನುವ ಕಲ್ಪನೆ ಬಿಟ್ಟು ಗುರಿ ಸಾಧನೆ ಕಡೆಗೆ ಒಲವು ಮೂಡಿಸಿದಾಗ ಮಾತ್ರ ವ್ಯಕ್ತಿ ಶ್ರೇಷ್ಠರಾಗುತ್ತಾರೆ. ಸಾವಿರಾರು ಮಕ್ಕಳ ಪಾಲಿನ ಅಮ್ಮ ಸಿಂಧೂತಾಯಿ ಇಂತಹ ಸಾಧನೆಯಲ್ಲಿ ನಿಲುಕುವವರು ಎಂದು ಹೇಳಿದರು.
ಸರಕಾರವು ಬಾಲಕ, ಬಾಲಕಿಯರಿಗೆ ವಸತಿಗೃಹಗಳನ್ನು ನಿರ್ಮಿಸುತ್ತವೆ. ಆ ಮೂಲಕ ಮಕ್ಕಳ ಪೋಷಣೆ, ರಕ್ಷಣೆ ನಡೆಯುತ್ತದೆ ಎನ್ನುವ ಉದ್ದೇಶ ಇರುತ್ತದೆ. ಆದರೆ ನಿಜವಾದ ಅರ್ಥದಲ್ಲಿ ಬರೀ ನಾಮಫಲಕಕಷ್ಟೇ ವಸತಿಗೃಹಗಳು ಸೀಮಿತವಾಗಿದೆ. ಅಲ್ಲಿ ಪೋಷಣೆಯೂ ಇಲ್ಲ ರಕ್ಷಣೆಯೂ ಇಲ್ಲದ ಸ್ಥಿತಿಯಿದೆ ಎಂದು ಅವರು ಹೇಳಿದರು.
ಮೂಲತ್ವ ವಿಶ್ವ ಪ್ರಶಸ್ತಿ ಹಾಗೂ ಒಂದೂವರೆ ಲಕ್ಷದ ಮೌಲ್ಯದ ಚೆಕ್ನ್ನು ಸಪ್ಕಲ್ ಅವರಿಗೆ ಪ್ರದಾನ ಮಾಡಲಾಯಿತು. ನಿವೃತ್ತ ಬ್ರಿಗೇಡಿಯರ್ ಐ.ನಂಜಪ್ಪ ರೈ, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿದರು. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಪ್ರಕಾಶ್ ಮೂಲತ್ವ ಅವರು ತಮ್ಮ ಟ್ರಸ್ಟ್ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ವಿವರ ನೀಡಿದರು. ರಾಜ್ಮೋಹನ್ ರಾವ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ನಾಗಪುರ ಎಆರ್ಪಿಎಫ್ನ ಎಎಸ್ಐ ಆರ್ಒ ಅಹಲ್ಯ, ಕೊಯಮತ್ತೂರು ಸೆಂಟರ್ ಫಾರ್ ಕೆರಿಯರ್ ಇನ್ ಯೂನಿಫಾರಂ ಸರ್ವಿಸ್ನ ತರಬೇತಿದಾರ ಕಮಾಂಡರ್ ಲೆ.ಇಶಾನ್, ಭಾರತೀಯ ಮಾನವ ಹಕ್ಕು ಫೆಡರೇಶನ್ನ ಅಧ್ಯಕ್ಷ ಚಂದ್ರಿಕಾ ಪ್ರಭಾಕರ್, ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸತೀಶ್ ಶೆಟ್ಟಿ ಪಟ್ಲ, ವಿನುತಾ ರೈ, ನಿರ್ಮಲ್ ಸರ್ಕಾರ್ ಉಪಸ್ಥಿತರಿದ್ದರು.